ಬೆಂಗಳೂರು: ಲೋಕಾಯುಕ್ತರನ್ನಾಗಿ ಕನ್ನಡಿಗ ನ್ಯಾಯಮೂರ್ತಿಗಳನ್ನು ನೇಮಕ ಮಾಡುವಂತೆ ಆಗ್ರಹಿಸಿ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ನಗರದಲ್ಲಿ ಇಂದು ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಿದರು.
ಆನಂದ್ರಾವ್ ವೃತ್ತದ ಮಹಾತ್ಮಗಾಂಧಿ ಪ್ರತಿಮೆ ಮುಂಭಾಗ ವೇದಿಕೆ ಅಧ್ಯಕ್ಷ ನಾರಾಯಣಗೌಡ ಅವರ ನೇತೃತ್ವದಲ್ಲಿ ಸೇರಿದ ನೂರಾರು ಕಾರ್ಯಕರ್ತರು ಭ್ರಷ್ಟಾಚಾರ ಪ್ರಕರಣದಿಂದ ಜನರ ವಿಶ್ವಾಸ ಕಳೆದುಕೊಂಡಿರುವ ಲೋಕಾಯುಕ್ತ ಸಂಸ್ಥೆಗೆ ಕನ್ನಡಿಗರನನೇ ಮುಖ್ಯಸ್ಥರಾಗಿ ನೇಮಿಸುವಂತೆ ಆಗ್ರಹಿಸಿದರು.
ಪ್ರತಿಭಟನಾ ನಿರತರನ್ನು ಉದ್ದೇಶಿಸಿ ಮಾತನಾಡಿದ ನಾರಾಯಣಗೌಡ,ಭ್ರಷ್ಟಾಚಾರ ನಿಗ್ರಹ ಮಾಡುವ ಲೋಕಾಯುಕ್ತ ಸಂಸ್ಥೆಗೆ ಬೇರೆ ರಾಜ್ಯದವರನ್ನು ನೇಮಕ ಮಾಡಿದರೆ ಉಗ್ರ ಹೋರಾಟ ನಡೆಸುವ ಎಚ್ಚರಿಕೆ ನೀಡಿದರು.
ಕನ್ನಡಿಗರನ್ನು ಬಿಟ್ಟು ಹೊರ ರಾಜ್ಯದ ನ್ಯಾಯಮೂರ್ತಿ ಭಾಸ್ಕರರಾವ್ ಅವರನ್ನು ನೇಮಿಸಿದ್ದರಿಂದ ಸಂಸ್ಥೆಯಲ್ಲಿ ಭಾರಿ ಪ್ರಮಾಣದಲ್ಲಿ ಲಂಚಾವತಾರ ನಡೆಯಿತು ಸರ್ಕಾರಿ ಅಧಿಕಾರಿಗಳು ಭ್ರಷ್ಟರ ಬಗ್ಗೆ ಜನ ಸಾಮಾನ್ಯರು ದೂರು ನೀಡಲು ಭಾಷೆಯ ಸಮಸ್ಯೆ ಉದ್ಭವಿಸಿತು ಎಂದು ಹೇಳಿದರು.
ಹೊರರಾಜ್ಯದ ನ್ಯಾಯಮೂರ್ತಿಗಳನ್ನು ನೇಮಿಸಿದರೆ ಅವರಿಗೆ ಕನ್ನಡ ಬರುವುದಿಲ್ಲ ಬಂದರೂ ಇಲ್ಲಿನ ಸಮಸ್ಯೆ ತಿಳಿದಿರುವುದಿಲ್ಲ ಅದ್ದರಿಂದ ಕನ್ನಡಿಗ ನ್ಯಾಯಮೂರ್ತಿಗಳನ್ನು ಲೋಕಾಯುಕ್ತರನ್ನಾಗಿ ನೇಮಕ ಮಾಡುವಂತೆ ಆಗ್ರಹಿಸಿದರು.