ಬೆಳ್ತಂಗಡಿ, ಜ. 4: ಗೃಹಿಣಿಯೊಬ್ಬಳು ತನ್ನಇಬ್ಬರು ಮಕ್ಕಳೊಂದಿಗೆ ಆತ್ಮಹತ್ಯೆ ಮಾಡಿಕೊಂಡ ದುರಂತ ಘಟನೆ ಇಲ್ಲಿನ ಬೆಳಾಲು ಗ್ರಾಮದನೂಜಿಲಕ್ಕಿ ಎಂಬಲ್ಲಿ ಭಾನುವಾರ ನಡೆದಿದೆ. ಆತ್ಮಹತ್ಯೆ ಮಾಡಿಕೊಂಡವರನ್ನು ಸುನಂದ (40), ಮಕ್ಕಳಾದ ಭರತ್ (9) ಮತ್ತು ಭುವಿತ್ (6) ಎಂದು ಗುರುತಿಸಲಾಗಿದೆ.
ಸುನಂದ ಖಾಸಗಿ ಉದ್ಯೋಗಕ್ಕೆ ಹೋಗುತ್ತಿದ್ದು, ಮಕ್ಕಳಾದ ಭರತ್ ಎಸ್. ಮತ್ತು ಭುವಿತ್ ಎಸ್. ಪೆರಿಯಡ್ಕದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕಲಿಯುತ್ತಿದ್ದಾರೆ.
ಸುನಂದರನ್ನು ಕಳೆದ 10 ವರ್ಷಗಳ ಹಿಂದೆ ಪುತ್ತೂರು ತಾಲೂಕಿನ ಕುಂಬ್ರ ತೊಟದ ಮೂಲೆ ನಿವಾಸಿ ಶ್ರೀನಿವಾಸ ಎಂಬವರಿಗೆ ವಿವಾಹ ಮಾಡಿಕೊಡಲಾಗಿದ್ದು, ನಂತರ 2 ಗಂಡು ಮಕ್ಕಳೊಂದಿಗೆ ಅಲ್ಲಿಯೇ ವಾಸ ವಾಗಿದ್ದರು. ಆದರೆ ಕಳೆದ 3 ವರ್ಷಗಳ ಹಿಂದೆ ಮಕ್ಕಳಿಗೆ ಅಲ್ಲಿ ಶಿಕ್ಷಣಕ್ಕೆ ಅನುಕೂಲ ವಿಲ್ಲದ ಕಾರಣ ಬೆಳಾಲುವಿನ ತಾಯಿ ಮನೆಯಲ್ಲಿ ಮಕ್ಕಳಿಬ್ಬರೊಂದಿಗೆ ವಾಸವಾಗಿದ್ದರು. ಪತಿ ಶ್ರೀನಿವಾಸ ಪ್ರತಿ ತಿಂಗಳಿಗೊಮ್ಮೆ ಬರುತ್ತಿದ್ದರು ಎಂದು ಹೇಳಲಾಗುತ್ತಿದೆ.
ಶ್ರೀನಿವಾಸ ಗಾರೆ ಕೆಲಸಕ್ಕೆ ಹೋಗುತ್ತಿದ್ದು, ಹಿಂದೆ ಮಂಗಳೂರಿನ ಖಾಸಗಿ ಆಸ್ಪತ್ರೆಯೊಂದರಲ್ಲಿ ಉದ್ಯೋಗಿಯಾಗಿದ್ದರು.
ಸುನಂದರಿಗೆ ಇತ್ತೀಚೆಗೆ ಅನಾರೋಗ್ಯ ಉಂಟಾಗಿದ್ದು, ವೈದ್ಯರನ್ನು ಸಂಪರ್ಕಿಸಿದಾಗ ಅವರಿಗೆ ಗರ್ಭಕೋಶದಲ್ಲಿ ತೊಂದರೆ ಇರುವುದಾಗಿ ತಿಳಿಸಿದ್ದರು. ಇದಕ್ಕಾಗಿ ಔಷಧಿ ಮಾಡುತ್ತಿದ್ದರು. ಈ ಕಾರಣದಿಂದಾಗಿ ಈಕೆ ಮಾನಸಿಕವಾಗಿ ಖಿನ್ನತೆಗೊಳಗಾಗಿದ್ದರು ಎಂದು ಸ್ಥಳಿಯರು ಹೇಳುತ್ತಿದ್ದಾರೆ.
ತಾಯಿಮನೆಯಲ್ಲಾಗಲೀ ಅತ್ತೆ ಮನೆಯಲ್ಲಾಗಲೀ ಯಾವುದೇ ರೀತಿಯ ತೊಂದರೆಗಳಿಲ್ಲದೆ ಈ ಕುಟುಂಬ ಜೀವನ ಸಾಗಿಸುತ್ತಿತ್ತು. ಆರ್ಥಿಕವಾಗಿ ಸಮಸ್ಯೆಯನ್ನು ಹೊಂದಿರಲಿಲ್ಲ. ಆದರೆ ಸಾಯುವಂತಹ ಮನಸ್ಥಿತಿ ಬಂದಿರುವುದುವಿಪರ್ಯಾಸ ಎಂದು ಸಂಬಂಧಿಕರು ಹೇಳುತ್ತಿದ್ದಾರೆ.
ಇಬ್ಬರು ಮಕ್ಕಳು ಬಹಳ ಚುರುಕು ಸ್ವಭಾವದವರಾಗಿದ್ದು, ತಾಯಿ ಹಾಗೂ ಮನೆ ಮಂದಿಯೊಂದಿಗೆ ಉತ್ತಮ ಭಾಂದವ್ಯ ಹೊಂದಿದ್ದರು. ಅಜ್ಜಿ ಹಾಗೂ ಮಾವ ಮಕ್ಕಳನ್ನು ಅತ್ಯಂತ ಪ್ರೀತಿಯಿಂದ ನೋಡಿಕೊಳ್ಳುತ್ತಿದ್ದು ಶಾಲೆಗೆ ಕಳುಹಿಸುವ ಎಲ್ಲಾಜವಾಬ್ದಾರಿಯನ್ನು ನಿಬಾಯಿಸುತ್ತಿದ್ದರು. ಆದರೆ ಭಾನುವಾರ ಮನೆಯವರೆಲ್ಲಾ ತಮ್ಮ ಸಮೀಪದ ಮನೆಗೆ ಕಾರ್ಯಕ್ರಮವೊಂದಕ್ಕೆ ಹೋಗಿದ್ದ ವೇಳೆ ತನ್ನಿಬ್ಬರು ಮಕ್ಕಳೊಂದಿಗೆ ಸಂಬಂಧಿಕರೊಬ್ಬರ ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಸಂಜೆ 4 ಗಂಟೆ ವೇಳೆಗೆ ಮನೆಯ ಸಮೀಪದವರು ಕರೆಯ ಬದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ ವೇಳೆ ಮಕ್ಕಳ ಆಟಿಕೆಯನ್ನು ಕಂಡು ನೋಡಿದಾಗ ಕೆರೆಯಲ್ಲಿ ಶವ ಕಂಡುಬಂದಿದೆ. ಕೂಡಲೇ ಸ್ಥಳಿಯರಿಗೆ ಹಾಗೂ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಈ ಬಗ್ಗೆ ಬೆಳ್ತಂಗಡಿ ಠಾಣೆಯಲ್ಲಿ ಪ್ರಕರಣದಾಖಲಾಗಿದೆ.