ಹೊಸದಿಲ್ಲಿ: “ಅಲ್ಲಾಹು, ಪಾಕಿಸ್ಥಾನೀಯರಿಗೆ ಭಾರತವನ್ನು ನಾಶ ಮಾಡುವ ಮತ್ತು ಹಿಂದುಗಳನ್ನು ಕೊಲ್ಲುವ ಶಕ್ತಿಯನ್ನು ಮತ್ತು ಗೌರವವನ್ನು ದಯಪಾಲಿಸಿ ಆಶೀರ್ವದಿಸಿದ್ದಾರೆ’ ಎಂದು ಮಾಜಿ ಬ್ಯಾಂಕರ್ ಆಗಿರುವ ಇಸ್ಲಾಮಿಕ್ ಮೌಲ್ವಿ (ಮತ ಪಂಡಿತ) ಇರ್ಫಾನ್ ಉಲ್ ಹಕ್ ಎಂಬಾತ ನೀಡಿರುವ ಮತ ಬೋಧನೆಯ ವಿಡಿಯೋ ಚಿತ್ರಿಕೆಯೊಂದನ್ನು ಅಂಕಣಕಾರ ಮತ್ತು ಲೇಖಕ ತಾರಿಕ್ ಫತೇಹ್ ಹಂಚಿಕೊಂಡಿದ್ದಾರೆ.
ಮತ ಬೋಧನೆಯ ಈ ವಿಡಿಯೋ ಚಿತ್ರಿಕೆಯು 2011ರಷ್ಟು ಹಿಂದಿನದ್ದೆಂದು ಲೇಖಕ ತಾರಿಕ್ ಫತೇಹ್ ತಿಳಿಸಿದ್ದಾರೆ. ಈ ವಿಡಿಯೋದಲ್ಲಿ ಮತ ಪಂಡಿತ ಇರ್ಫಾನ್ ಉಲ್ ಹಕ್ ಹೇಳಿರುವ ಮಾತುಗಳು ಪಾಕಿಸ್ಥಾನೀಯರನ್ನು ಭಾರತದ ವಿರುದ್ಧ ಎತ್ತಿ ಕಟ್ಟಿ ಅವರಲ್ಲಿ ವೈಷಮ್ಯದ ವಿಷವನ್ನು ತುಂಬಿಸುವಂತಿವೆ.
ಭಾರತದಲ್ಲಿನ ವಿಗ್ರಹಾರಾಧನೆಯನ್ನು ನಾಶಪಡಿಸಿ ಹಿಂದೂಗಳನ್ನು ಕೊಲ್ಲುವಂತೆ ಮತಪಂಡಿತ ತಾರಿಕ್ ಫತೇಹ್ ಪಾಕಿಸ್ಥಾನೀಯರನ್ನು ಪ್ರಚೋದಿಸಿದ್ದಾನೆ.
“ಕಲ್ಲಿನ ವಿಗ್ರಹವನ್ನು ಪೂಜಿಸುವ ಸ್ಥಳ ಇರುವುದಾದರೆ ಅದು ಭಾರತೀಯ ಉಪ ಖಂಡ. ಭಾರತದ ವಿರುದ್ಧ ಧರ್ಮ ಯುದ್ಧ ನಡೆಸುವ ಶಕ್ತಿ ಮತ್ತು ಗೌರವವನ್ನು ಅಲ್ಲಾಹು ತಮಗೆ ಕರುಣಿಸಿರುವುದಕ್ಕೆ ತಾವು ಅದೃಷ್ಟಶಾಲಿಗಳು ಎಂದು ಪಾಕಿಸ್ಥಾನೀಯರು ತಿಳಿದುಕೊಳ್ಳಬೇಕು’ ಎಂದು ಮತ ಪಂಡಿತ ಇರ್ಫಾನ್ ಹೇಳಿದ್ದಾನೆ.
‘ಪ್ರವಾದಿ ಮಹಮ್ಮದರು ಹಿಂದೆಯೇ ಭಾರತದಲ್ಲಿ ಯುದ್ಧ ನಡೆಯಲಿದೆ ಮತ್ತು ಅದು ಘಜ್ವಾ ಎ ಹಿಂದ್ ಆಗಿರುತ್ತದೆ ಎಂದು ಭವಿಷ್ಯ ನುಡಿದಿದ್ದಾರೆ. ಪಾಕಿಸ್ಥಾನೀಯರ ಕೈಯಲ್ಲಿ ಭಾರತಕ್ಕೆ ಮತ್ತು ಹಿಂದೂ ಧರ್ಮಕ್ಕೆ ಸೋಲಾಗುವುದು ಪಾಕಿಸ್ಥಾನದ ಹುಟ್ಟಿನಲ್ಲೇ ಅಡಕವಾಗಿದೆ’ ಎಂದು ಮತ ಪಂಡಿತನು ಹೇಳಿದ್ದಾನೆ.
-ಉದಯವಾಣಿ