ನವದೆಹಲಿ: ಪಠಾಕೋಟ್ ವಾಯುನೆಲೆ ಮೇಲೆ ದಾಳಿ ನಡೆಸಿದ ಉಗ್ರರ ವಿರುದ್ಧ ನಡೆಯುತ್ತಿರುವ ಕಾರ್ಯಾಚರಣೆ ಸಂಪೂರ್ಣ ಅಂತ್ಯಗೊಂಡ ನಂತರ ಭಾರತ-ಪಾಕಿಸ್ತಾನ ಮಾತುಕತೆ ಬಗ್ಗೆ ನಿರ್ಧರಿಸಲಾಗುವುದು ಎಂದು ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ಅವರು ಸೋಮವಾರ ಹೇಳಿದ್ದಾರೆ.
ಪಠಾಣ್ಕೋಟ್ ದಾಳಿಗೆ ಸಂಬಂಧಿಸಿದಂತೆ ಇಂದು ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ನಡೆದ ಉನ್ನತ ಮಟ್ಟದ ಸಭೆಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಜೇಟ್ಲಿ, ಉಗ್ರರು ಉತ್ತಮ ತರಬೇತಿ ಪಡೆದವರಾಗಿದ್ದು, ಆತ್ಮಹತ್ಯೆ ದಳಕ್ಕೆ ಸೇರಿದ್ದಾರೆ. ಅವರಿಂದ ಭಾರೀ ಹಾನಿಯಾಗಬೇಕಿತ್ತು. ಆದರೆ ರಕ್ಷಣಾ ಪಡೆಗಳ ದೊಡ್ಡ ಪ್ರಮಾಣದ ಪ್ರಾಣ ಹಾನಿಯನ್ನು ತಪ್ಪಿಸಿ, ವಾಯುಪಡೆಯ ಪ್ರಮುಖ ಆಸ್ತಿ, ಪಾಸ್ತಿಯನ್ನು ರಕ್ಷಿಸಿದ್ದಾರೆ ಎಂದು ಪ್ರಶಂಸಿದರು.
ಕನಿಷ್ಠ ಸಾವು ಹಾಗೂ ಅತ್ಯಂತ ಕಡಿಮೆ ಹಾನಿಯೊಂದಿಗೆ ನಮ್ಮ ರಕ್ಷಣಾ ಪಡೆಗಳು ಗುರಿ ಸಾಧಿಸುವಲ್ಲಿ ಯಶಸ್ವಿಯಾಗಿವೆ ಎಂದು ಜೇಟ್ಲಿ ಹೇಳಿದರು.
ನಿನ್ನೆಯಿಂದ ನಡೆದ ಕಾರ್ಯಾಚರಣೆಯಲ್ಲಿ ಎಲ್ಲಾ ಐವರು ಉಗ್ರರನ್ನು ಸೇನಾಪಡೆ ಹತ್ಯೆಗೈದಿದ್ದು, ಇದುವರೆಗೆ ನಾಲ್ವರ ಮೃತದೇಹಳನ್ನು ವಶಪಡಿಸಿಕೊಳ್ಳಲಾಗಿದೆ.