ನವದೆಹಲಿ: ಹಲವು ವಿವಾದಗಳಿಂದ ತನ್ನ ಘನತೆಯನ್ನು ಕಳೆದುಕೊಂಡಿದ್ದ ಬಿಸಿಸಿಐ ಮತ್ತೆ ತನ್ನ ಸ್ಥಾನಮಾನವನ್ನು ಪಡೆಯಲು ಯತ್ನಿಸುತ್ತಿದೆ. ಈ ನಿಟ್ಟಿನಲ್ಲಿ ಬಿಸಿಸಿಐ ನ್ಯಾ. ಲೋಧಾ ಸಮಿತಿಯನ್ನು ರಚಿಸಿತ್ತು. ಬಿಸಿಸಿಐ ಸುಧಾರಣೆಗೆ ಹಲವು ಮಹತ್ವದ ಶಿಫಾರಸುಗಳನ್ನು ಮಾಡಿರುವ ಎಂ.ಆರ್ ಲೋಧಾ ಸಮಿತಿ ಇಂದು ಸುಪ್ರಿಂಕೋರ್ಟ್ ಗೆ ತನ್ನ ವರದಿ ಸಲ್ಲಿಸಿದೆ. ಹಲವು ಮಹತ್ವದ ಶಿಫಾರಸುಗಳನ್ನು ಸಮಿತಿ ಮಾಡಿದೆ.
ಸರ್ಕಾರದ ಸೇವೆಯಲ್ಲಿರುವವರು ಅಂದರೆ ಶಾಸಕರು, ಸಚಿವರು ಬಿಸಿಸಿಐ ಪದಾಧಿಕಾರಿಗಳಾಗಬಾರದು ಎಂದು ವರದಿಯಲ್ಲಿ ಹೇಳಿದೆ. ಹಾಗೆಯೇ 70 ವರ್ಷಕ್ಕಿಂತ ಮೇಲ್ಪಟ್ಟವರಿಗೆ ಬಿಸಿಸಿಐ ನಲ್ಲಿ ಯಾವುದೇ ಹುದ್ದೆ ನೀಡಬಾರದು ಎಂದು ತಿಳಿಸಿದೆ. ಬಿಸಿಸಿಐ ಪದಾಧಿಕಾರಿಗಳಾಗುವವರು ಕಡ್ಡಾಯವಾಗಿ ಭಾರತೀಯರಾಗಿರಬೇಕು.
ಒಬ್ಬರು ಮೂರು ವರ್ಷ ಮಾತ್ರ ಆಯ್ಕೆಯಾಗಬೇರು ಎಂದು ಹೇಳಿರುವ ಸಮಿತಿ, ಮತ್ತೆ ಮರು ಆಯ್ಕೆ ಬಯಸಿದರೇ ಒಂದು ವರ್ಷ ವಿರಾಮ ಪಡೆದು ಮರು ಆಯ್ಕೆ ಬಯಸಬೇಕು ಎಂದು ಹೇಳಿದೆ.
ಬಿಸಿಸಿಐ ಪದಾಧಿಕಾರಿಗೆ ಒಬ್ಬರಿಗೆ ಒಂದೇ ಹುದ್ದೆ ಮಾತ್ರ ನೀಡಬೇಕು ಎಂದು ತಿಳಿಸಿದೆ. ಬಿಸಿಸಿಐ ಸಿಒಒ ಸುಂದರ್ ರಾಮನ್ ವಿರುದ್ಧ ಮಾಡಿರುವ ಆರೋಪಗಳು ಸುಳ್ಳು. ಅವರು ಭ್ರಷ್ಟರಲ್ಲ ಎಂದು ಹೇಳಿರುವ ಸಮಿತಿ ಅವರ ವಿರುದ್ದ ಸೂಕ್ತ ಸಾಕ್ಷ್ಯಾಧಾರಗಳಿಲ್ಲ ಎಂದು ಹೇಳಿ ಅವರಿಗೆ ಕ್ಲೀನ್ ಚಿಟ್ ನೀಡಿದೆ. ಇತ್ತೀಚೆಗಷ್ಟೇ ಸುಂದರ್ ರಾಮನ್ ಬಿಸಿಸಿಐ ಸಿಇಓ ಹುದ್ದೆಗೆ ರಾಜೀನಾಮೆ ನೀಡಿದ್ದರು.
ಬಿಸಿಸಿಐ ಮಾಹಿತಿ ಹಕ್ಕು ಕಾಯ್ದೆಗೆ ಒಳಪಡಬೇಕು ಎಂದು ಸಮಿತಿ ತಿಳಿಸಿದೆ. ಇದುವರೆಗೂ ಸೊಸೈಟೀಸ್ ಕಾಯ್ದೆಯಡಿ ಕೆಲಸ ನಿರ್ವಹಿಸುತ್ತಿರುವ ಬಿಸಿಸಿಐ, ಕೇಂದ್ರ ಸರ್ಕಾರದ ಕ್ರೀಡಾ ಇಲಾಖೆಯಿಂದ ಯಾವುದೇ ಅನುದಾನ ಪಡೆಯುತ್ತಿಲ್ಲ ಎಂದು ಹೇಳಿದೆ.
ಕ್ರಿಕೆಟ್ ಬೆಟ್ಟಿಂಗ್ ಅನ್ನು ಕಾನೂನು ಬದ್ದಗೊಳಿಸಬೇಕು ಎಂದು ಹೇಳಿರುವ ಸಮಿತಿ, ಬೆಟ್ಟಿಂಗ್ ಆರೋಪದಲ್ಲಿ ಸಿಎಸ್ ಕೆ ಮತ್ತು ರಾಜಸ್ತಾನ ರಾಯಲ್ಸ್ ತಂಡಗಳನ್ನು ಐಪಿಎಲ್ ನಿಂದ ಅಮಾನತುಗೊಳಿಸಿತ್ತು.
ಇನ್ನು ಪ್ರತಿಯೊಂದು ರಾಜ್ಯದಿಂದ ಒಂದು ಅಸೋಸಿಯೇಷನ್ ಗೆ ಬಿಸಿಸಿಐ ಸದಸ್ಯತ್ವ ನೀಡಿ. ಆ ಸದಸ್ಯರಿಗೆ ಮತ ಚಲಾವಣೆಯ ಹಕ್ಕು ನೀಡಬೇಕು ಎಂದು ಶಿಫಾರಸು ಮಾಡಲಾಗಿದೆ. ಐಪಿಎಲ್ ಮತ್ತು ಬಿಸಿಸಿಐ ಗೆ ಪ್ರತ್ಯೇಕ ಆಡಳಿತ ಅಂಗ ಸ್ಥಾಪಿಸಬೇಕು ಎಂದು ಹೇಳಿದೆ.
ದೇಹದಲ್ಲಿ ಇರುವ ಬ್ಯಾಕ್ಟೀರಿಯಾ ನಾಶ ಪಡಿಸಲು ಉತ್ತಮ ಔಷಧ ನೀಡಿ ಅದನ್ನು ಕೊಲ್ಲಬೇಕೆ ಹೊರತು. ದೇಹವನ್ನೇ ನಾಶ ಪಡಿಸಬಾರದು ಎಂದು ಲೋಧಾ ಸಮಿತಿ ಸುಪ್ರಿಂಕೋರ್ಟ್ ಗೆ ತನ್ನ ವರದಿಯಲ್ಲಿ ತಿಳಿಸಿದೆ.
ಹಲವು ಮಾಜಿ ಕ್ರಿಕೆಟರ್ ಗಳು, ಕ್ರಿಕೆಟ್ ಆಡಳಿತ ವ್ಯವಸ್ಥೆಯಲ್ಲಿ ತೊಡಗಿಸಿಕೊಂಡಿರುವವರಿಗೆ ಪ್ರಶ್ನಾವಳಿಗಳನ್ನು ನೀಡಿ, ಉತ್ತರ ಪಡೆದುಕೊಂಡು ಲೋಧಾ ಸಮಿತಿ ಈ ಶಿಫಾರಸುಗಳನ್ನು ಮಾಡಿದೆ. ಈ ಶಿಫಾರಸುಗಳು ಅನುಷ್ಠಾನಕ್ಕೆ ಬಂದಿದ್ದೇ ಆದಲ್ಲಿ, ಅಧಿಕಾರಸ್ಥ ರಾಜಕಾರಣಿಗಳನ್ನು ತಕ್ಕಮಟ್ಟದಲ್ಲಿ ನಿಯಂತ್ರಣದಲ್ಲಿಡುವುದಕ್ಕೆ ಸಹಕಾರಿಯಾಗಲಿದೆ