ಪಾಲಕ್ಕಾಡ್ (ಕೇರಳ) : ಮೊನ್ನೆ ಭಾನುವಾರ ಪಠಾಣ್ ಕೋಟ್ ವಾಯುನೆಲೆಯ ಮೇಲೆ ನಡೆದ ಉಗ್ರರ ದಾಳಿಯ ಸಂದರ್ಭದಲ್ಲಿ ಹುತಾತ್ಮರಾದ ಎನ್ಎಸ್ಜಿ ಕಮಾಂಡೊ ಲೆಫ್ಟಿನೆಂಟ್ ಕರ್ನಲ್ ನಿರಂಜನ್ ಕುಮಾರ್ ಅವರ ಅಂತ್ಯ ಸಂಸ್ಕಾರ ಅವರ ಹುಟ್ಟೂರಾದ ಪಾಲಕ್ಕಾಡಿನ ಯಲಂಬೆಲಸರಿಯಲ್ಲಿ ಸಕಲ ಸರ್ಕಾರಿ ಗೌರವಗಳೊಂದಿಗೆ ಇಂದು ನೆರವೇರಿತು.
ಭಾರತೀಯ ಸೇನೆಯು ಸಕಲ ಗೌರವದೊಂದಿಗೆ ಅಂತಿಮ ನಮನ ಸಲ್ಲಿಸಿ ಝಡ್ಪಿ 5158 ವಿಶೇಷ ಸೇನಾ ಹೆಲಿಕಾಪ್ಟರ್ನಲ್ಲಿ ಪಾಲಕ್ಕಾಡ್ಗೆ ಶರೀರ ಕೊಂಡೊಯ್ಯಲಾಗಿತ್ತು. ಅಲ್ಲಿ ಅವರ ಅಂತ್ಯಕ್ರಿಯೆಯನ್ನು ಇಂದು ಮಧ್ಯಾಹ್ನದ ವೇಳೆಗೆ ನೆರವೇರಿಸಲಾಯಿತು.ಅವರ ಮೂಲ ಮನೆಯಲ್ಲಿ ಸರ್ಕಾರಿ ಮತ್ತು ಸೇನಾ ಗೌರವಗಳ ಬಳಿಕ ಗಾಳಿಯಲ್ಲಿ 3 ಸುತ್ತು ಗುಂಡು ಹಾರಿಸಲಾಯಿತು. ಈ ವೇಳೆ ಕೇರಳ ಸರ್ಕಾರದ ಸಚಿವರು,ಅಧಿಕಾರಿಗಳು, ಸೇನಾ ಪಡೆ ಮತ್ತು ಎನ್ಎಸ್ಜಿ ಕಮಾಂಡೊ ಪಡೆಗಳ ಅಧಿಕಾರಿಗಳು, ಸೈನಿಕರು ಉಪಸ್ಥಿತರಿದ್ದರು.
ಪಂಜಾಬ್ ನ ಪಠಾಣ್ ಕೋಟ್ ನಿಂದ ನಿರಂಜನ್ ಅವರ ಪಾರ್ಥಿವ ಶರೀರವನ್ನು ನಿನ್ನೆ ಬೆಂಗಳೂರಿಗೆ ಕರೆ ತರಲಾಗಿತ್ತು.ನಿರಂಜನ್ ಅವರು ಹುಟ್ಟಿದ್ದು, ಬೆಳೆದಿದ್ದು ಎಲ್ಲ ಬೆಂಗಳೂರಿನ ದೊಡ್ಡಬೊಮ್ಮಸಂದ್ರದಲ್ಲಿ. ಅವರ ಅಂತಿಮ ಸಾರ್ವಜನಿಕ ದರ್ಶನಕ್ಕಾಗಿ ಬಿಇಎಲ್ ಶಾಲಾ ಆಟದ ಮೈದಾನದಲ್ಲಿ ಇಡಲಾಗಿತ್ತು.