ಮಂಗಳೂರು,ಜ.05: ಫೆಬ್ರವರಿ 12 ಮತ್ತು 13ರಂದು ಮಂಗಳೂರಿನ ಕೇಂದ್ರ ಮೈದಾನದಲ್ಲಿ `64 ನೇ ರಾಷ್ಟ್ರೀಯ ದೇಹದಾರ್ಢ್ಯ ಚಾಂಪಿಯನ್ ಶಿಪ್ -2016 ನಡೆಯಲಿದ್ದು, 29 ರಾಜ್ಯಗಳಿಂದ ೩೦೦ಕ್ಕೂ ಹೆಚ್ಚು ಸ್ಪರ್ಧಾಳುಗಳು ಭಾಗವಹಿಸಲಿರುವ ಎಂದು ವಿಧಾನಪರಿಷತ್ ಸದಸ್ಯ ಐವನ್ ಡಿ’ಸೋಜರವರು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.
ದ.ಕ.ಜಿಲ್ಲಾ ಅಮೆಚೂರ್ ಬಾಡಿ ಬಿಲ್ಡರ್ಸ್ ಅಸೋಸಿಯೇಶನ್ ಹಾಗೂ ರಾಷ್ಟ್ರೀಯ ಅಮೆಚೂರ್ ಬಾಡಿ ಬಿಲ್ಡರ್ಸ್ ಫೆಡರೇಶನ್ ಸಹಯೋಗದೊಂದಿಗೆ ನಡೆಯುವ ಈ ದೇಹದಾಢ್ಯ ಸ್ಪರ್ಧೆಯ ಪೂರ್ವಭಾವಿ ಯೋಜನೆ ಈಗಾಗಲೇ ರಾಜ್ಯಮಟ್ಟದ ಚಾಂಪಿಯನ್ ಶಿಪ್ ನಲ್ಲಿ ನಡೆಯುತ್ತಿದೆ.
ಸ್ಪರ್ಧೆಯಲ್ಲಿ `ಭಾರತ್ ಕುಮಾರ್, ಭಾರತ ಉದಯ, ಭಾರತ ಕೇಸರಿ, ಭಾರತ ಕಿಶೋರ, ಭಾರತ ಶ್ರೀ ಟೈಟಲ್ ಗಳಿಗೆ ಸ್ಪರ್ಧೆ ನಡೆಯಲಿದೆ. ಇದರೊಂದಿಗೆ ರಾಷ್ಟ್ರೀಯ ಮಟ್ಟದ ಮಹಿಳಾ ವಿಭಾಗದ ದೇಹಾದಾರ್ಢ್ಯ ಸ್ಪರ್ಧೆಯೂ ಕೂಡಾ ನಡೆಯಲಿದ್ದು, ಮಹಿಳಾ ಪ್ರತಿನಿಧಿಗಳು ಭಾಗವಹಿಸುವ ನಿರೀಕ್ಷೆ ಇದೆ. ವಿಜೇತರಿಗೆ ಪ್ರಶಸ್ತಿ ಹಾಗೂ ನಗದು ಬಹುಮಾನ ನೀಡಲಾಗುವುದು ಎಂದು ವಿವರಿಸಿದರು.
ದೇಶದಲ್ಲಿ ಅತೀ ಹೆಚ್ಚು ರಾಷ್ಟ್ರೀಯ-ಅಂತಾರಾಷ್ಟ್ರೀಯ ಮಟ್ಟದ ದೇಹದಾರ್ಢ್ಯ ಪಟುಗಳನ್ನು ಕೊಡುಗೆಯಾಗಿ ನೀಡಿದ ಕರಾವಳಿಯಲ್ಲಿ 127 ಮಂದಿ ಪಟುಗಳಿ ದ್ದಾರೆ. ಈ ಹಿನ್ನೆಲೆಯಲ್ಲಿ ಈ ಬಾರಿ ಸ್ಪರ್ಧೆಯ ಆಯೋಜನೆ ನೀಡಲು ಬೇಡಿಕೆ ಇಡಲಾಗಿತ್ತು. ಇದು ಎರಡನೇ ಬಾರಿಗೆ ನಡೆಯುತ್ತಿದ್ದು, 2006ರಲ್ಲಿಯೂ ನಗರದಲ್ಲಿ ಆಯೋಜನೆಗೊಂಡಿತ್ತು. ಈ ಬಾರಿ 25 ಲಕ್ಷ ರೂ. ಅಂದಾಜು ವೆಚ್ಚ ನಿರೀಕ್ಷಿಸಿದ್ದು, ಜಿಲ್ಲಾಡಳಿತ ಸಹಕಾರ ನೀಡಲು ಇಚ್ಚಿಸಿದೆ ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾಜಿ ಮೇಯರ್ ಶಶಿಧರ್ ಹೆಗ್ಡೆ, ಸಂಘಟನಾ ಕಾರ್ಯದರ್ಶಿ ರೇಮಂಡ್ ಡಿ’ಸೋಜ ಸಹಿತ ವಿವಿಧ ಸಮಿತಿಗಳ ಪ್ರಮುಖರಾಗಿರುವ ದೇಹಾದಾರ್ಢ್ಯ ಪಟುಗಳು ಮೊದಲಾದವರು ಉಪಸ್ಥಿತರಿದ್ದರು.