ಮಲಪ್ಪುರಂ: ಪಂಜಾಬ್ ನ ಪಠಾಣ್ ಕೋಟ್ ನಲ್ಲಿ ಉಗ್ರರ ವಿರುದ್ಧ ಹೋರಾಡಿ ಹುತಾತ್ಮರಾದ ಕೇರಳ ಮೂಲದ ಬೆಂಗಳೂರಿನ ಯೋಧ ಲೆಫ್ಟಿನೆಂಟ್ ಕರ್ನಲ್ ನಿರಂಜನ್ ಅವರನ್ನು ಸಾಮಾಜಿಕ ಜಾಲತಾಣದಲ್ಲಿ ಅವಮಾನಿಸಿ ಕಮೆಂಟ್ ಫೋಸ್ಟ್ ಮಾಡಿದ್ದ ಕೇರಳ ಮಲಪ್ಪುರಂ ನಿವಾಸಿಯಾಗಿರುವ ಯುವಕನನ್ನು ವಿಶೇಷ ತನಿಖಾ ತಂಡದ ಪೊಲೀಸರು ಬಂಧಿಸಿರುವ ಘಟನೆ ನಡೆದಿದೆ.
ಪಠಾಣ್ ಕೋಟ್ ನ ವಾಯನೆಲೆಯಲ್ಲಿ ಭಾನುವಾರ ಗ್ರೆನೇಡ್ ಸ್ಫೋಟಗೊಂಡು ನಿರಂಜನ್ ಹುತಾತ್ಮರಾಗಿದ್ದರು. ಧೀರ ಯೋಧರಿಗಾಗಿ ಇಡೀ ದೇಶವೇ ಗೌರವ ಸಲ್ಲಿಸುತ್ತಿದ್ದರೆ, ಮಲಪ್ಪುರಂನ ಈ ಯುವಕ ಅಮಾನವಿಸಿ ಕಮೆಂಟ್ ಫೋಸ್ಟ್ ಮಾಡಿದ್ದ.
ಮಲಪ್ಪುರಂ ನಗರದ ಕೋಡುರ್ ನಿವಾಸಿ ಅನ್ವರ್ ಸಾದಿಖ್ (24) ಎಂಬಾತನನ್ನು ಕೋಝಿಕೋಡ್ ಅಸಿಸ್ಟೆಂಟ್ ಪೊಲೀಸ್ ಕಮೀಷನರ್ ಜೋಸೈ ಚೆರಿಯನ್ ನೇತೃತ್ವದ ಪೊಲೀಸ್ ತಂಡ ಬಂಧಿಸಿದೆ. ಆತನ ವಿರುದ್ಧ ಸೆಕ್ಷನ್ 124, ಎ ಕಲಂ ಅನ್ವಯ ದೂರು ದಾಖಲಿಸಿಕೊಂಡಿರುವುದಾಗಿ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಹುತಾತ್ಮ ಯೋಧ ನಿರಂಜನ್ ಕುರಿತು ಅನ್ವರ್ ತನ್ನ ಫೇಸ್ ಬುಕ್ ಪೇಜ್ ನಲ್ಲಿ, ಅವಮಾನಿಸುವ ರೀತಿಯಲ್ಲಿ ಮಲಯಾಳಂನಲ್ಲಿ ಕಮೆಂಟ್ ಹಾಕಿರುವುದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡತೊಡಗಿತ್ತು. ಅನ್ವರ್ ಕಮೆಂಟ್ ಗೆ ಭಾರೀ ಪ್ರಮಾಣದಲ್ಲಿ ವಿರೋಧ ವ್ಯಕ್ತವಾಗಿತ್ತು. ಬಳಿಕ ಆತನನ್ನು ಪೊಲೀಸರು ಬಂಧಿಸಿದ್ದರು.
ಅನ್ವರ್ ಸಿದ್ದಿಖಿಯ ಡಿಟೈಲ್ಸ್ ನಲ್ಲಿ ಮಲಯಾಳಂ ದೈನಿಕದಲ್ಲಿ ಕಾರ್ಯನಿರ್ವಹಿಸುದಾಗಿ ಬರೆದುಕೊಂಡಿದ್ದ. ಪೊಲೀಸರು ಪತ್ರಿಕಾ ಕಚೇರಿಯನ್ನು ಸಂಪರ್ಕಿಸಿ ಮಾಹಿತಿ ಕಲೆಹಾಕಿದಾಗ, ಆ ಹೆಸರಿನ ಯಾವ ವ್ಯಕ್ತಿಯೂ ತಮ್ಮ ಸಂಸ್ಥೆಯಲ್ಲಿ ಕಾರ್ಯನಿರ್ವಹಿಸುತ್ತಿಲ್ಲ ಎಂಬುದು ಬಯಲಾಗಿತ್ತು. ನಂತರ ಪತ್ರಿಕಾ ಕಚೇರಿಯ ಆಡಳಿತ ಮಂಡಳಿಯೇ ಆತನ ಬಗ್ಗೆ ಪೂರ್ಣವಾಗಿ ತನಿಖೆ ಕೈಕೊಳ್ಳುವಂತೆ ಮನವಿ ಮಾಡಿತ್ತು. ತದನಂತರ ಪೊಲೀಸರು ಆತನನ್ನು ಬಂಧಿಸಿದ್ದರು.
-ಉದಯವಾಣಿ