ಪಠಾಣ್ಕೋಟ್, ಜ.5-ಏಳು ಮಂದಿ ಯೋಧರ ಜೀವಗಳನ್ನು ಬಲಿ ತೆಗೆದುಕೊಂಡ ಪಠಾಣ್ಕೋಟ್ ವಾಯುನೆಲೆ ಮೇಲಿನ ದಾಳಿಯ ನಾಲ್ಕನೇ ದಿನವಾದ ಇಂದು ಬಂದೂಕುಗಳ ಸದ್ದಡಗಿದೆ. ಆದರೆ, ಶೋಧ ಕಾರ್ಯ ಮುಂದುವರಿದಿದೆ.
ಶನಿವಾರ ಮುಂಜಾನೆ ಆರಂಭವಾದ ಗುಂಡಿನ ಕಾಳಗ ನಿರಂತರವಾಗಿ ಮೂರು ದಿನ ನಡೆದು, ಆರು ಮಂದಿ ಉಗ್ರರು ಹತರಾಗಿದ್ದರೂ, ವಾಯುನೆಲೆ ಕಟ್ಟಡದಲ್ಲಿ ಇನ್ನೂ ಇಬ್ಬರು ಉಗ್ರರು ಅಡಗಿರಬಹುದೆಂಬ ಶಂಕೆಯಿದ್ದು, ಅವರಿಗಾಗಿ ಶೋಧಕಾರ್ಯ ನಡೆಯುತ್ತಿದೆ. ಸದ್ಯ ಗುಂಡಿನ ಮೊರೆತ ನಿಂತಿದೆ ಎಂದು ಸೇನಾ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಎಲ್ಲಾ ಉಗ್ರರೂ ನಿರ್ನಾಮವಾಗಿದ್ದಾರೆ ಎಂಬುದು ದೃಢವಾಗುವವರೆಗೂ ಈ ಶೋಧಕಾರ್ಯ ಮುಂದುವರಿಯಲಿದೆ ಎಂದು ಅವರು ಹೇಳಿದ್ದಾರೆ.
ನಿನ್ನೆ ಇಬ್ಬರು ಉಗ್ರರನ್ನು ಹತ್ಯೆ ಮಾಡುವುದರೊಂದಿಗೆ ಯೋಧರ ಗುಂಡಿಗೆ ಬಲಿಯಾದ ಭಯೋತ್ಪಾದಕರ ಸಂಖ್ಯೆ ಏಳಕ್ಕೇರಿದೆ. ಆದರೆ ನಿಜವಾಗಿ ವಾಯುನೆಲೆಗೆ ಪ್ರವೇಶಿಸಿದ್ದ ಉಗ್ರರು ಎಷ್ಟು ಮಂದಿ ಎಂಬುದು ಇನ್ನೂ ನಿಖರವಾಗಿ ತಿಳಿದುಬಂದಿಲ್ಲ.