ವಾಷಿಂಗ್ಟನ್, ಜ.6-ಪಂಜಾಬ್ನ ಪಠಾಣ್ಕೋಟ್ ವಾಯುನೆಲೆಯ ಮೇಲೆ ಉಗ್ರರು ನಡೆಸಿರುವ ಪ್ರಬಲ ದಾಳಿಯ ಹಿಂದೆ ಪಾಕಿಸ್ಥಾನದ ಗುಪ್ತಚರ ಸಂಸ್ಥೆ (ಐಎಸ್ಐ) ಪಾತ್ರವಿದೆ ಎಂದು ಶ್ವೇತಭವನದ ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ.
ಕಳೆದ 15 ವರ್ಷಗಳ ಹಿಂದೆ ಐಎಸ್ಐ ತಾನೇ ಹುಟ್ಟುಹಾಕಿದ್ದ ಜೈಷ್-ಎ-ಮೊಹಮದ್ ಉಗ್ರರ ಮೂಲಕ ಈ ದಾಳಿ ನಡೆಸಿದೆ ಎಂದು ಹಿರಿಯ ಅಧಿಕಾರಿ ಬ್ರೂಸ್ ರೀಡೆಲ್ ಬಹಿರಂಗಪಡಿಸಿದ್ದಾರೆ. ರೀಡೆಲ್ ಅವರು ಶ್ವೇತಭವನದ ರಾಷ್ಟ್ರೀಯ ಭದ್ರತಾ ಮಂಡಳಿಯಲ್ಲಿ ಪ್ರಮುಖ ಅಧಿಕಾರಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
ಅಧ್ಯಕ್ಷ ಬಿಲ್ ಕ್ಲಿಂಟನ್ ಮತ್ತು ಅಂದಿನ ಪ್ರಧಾನಿ ನವಾಜ್ ಷರೀಫ್ ಅವರ ಭೇಟಿ ಸಂದರ್ಭ ಇದ್ದ ಕೆಲವೇ ಮಂದಿಯಲ್ಲಿ ರೀಡೆಲ್ ಕೂಡ ಒಬ್ಬರಾಗಿದ್ದರು. ಪಠಾಣ್ಕೋಟ್ ವಾಯುನೆಲೆ ಮೇಲಿನ ದಾಳಿ ಹಾಗೂ ಆಫ್ಘಾನಿಸ್ಥಾನದ ಮಜರ್-ಎ-ಷರೀಫ್ ನಗರದಲ್ಲಿರುವ ಭಾರತೀಯ ರಾಯಭಾರಿ ಕಚೇರಿ ಮೇಲಿನ ದಾಳಿಗಳನ್ನು ಸ್ವತಃ ಐಎಸ್ಐ ಜೈಷ್ ಉಗ್ರರ ಮೂಲಕ ನಡೆಸಿರುವುದು ಸ್ಪಷ್ಟವಾಗಿದೆ ಎಂದು ರೀಡೆಲ್ ತಮ್ಮ ಲೇಖನವೊಂದರಲ್ಲಿ ಬರೆದಿದ್ದಾರೆ.
ಪಾಕಿಸ್ಥಾನದ ಐಎಸ್ಐ ನೇರವಾಗಿ ಅಲ್ಲಿನ ಸೇನಾ ಅಧಿಕಾರಿಗಳ ನಿಯಂತ್ರಣದಲ್ಲೇ ಇದೆ ಎಂಬುದನ್ನು ರೀಡೆಲ್ ಸ್ಪಷ್ಟಪಡಿಸಿದ್ದಾರೆ.