ಬೀದಿಗೆ ಬಂದಿದ್ದ `ದುನಿಯಾ’ ವಿಜಯ್ ಅವರ ಫ್ಯಾಮಿಲಿ ಸಮಸ್ಯೆ ಈಗ ಎಲ್ಲಾ ಸರಿ ಹೋದಂತೆ ಕಾಣುತ್ತಿದೆ. ಎರಡು ವರ್ಷಗಳ ಹಿಂದೆ `ದುನಿಯಾ’ ವಿಜಿ ತಮ್ಮ ಪತ್ನಿ ನಾಗರತ್ನಗೆ ಡೈವೋರ್ಸ್ ಕೊಡುವುದಕ್ಕೆ ಅರ್ಜಿ ಹಾಕಿದ್ದರು. ಆ ನಂತರ ಕಳೆದ ವರ್ಷ ಆ ಸಮಸ್ಯೆ ಬಗೆಹರಿದಿತ್ತು.
ಗಂಡ-ಹೆಂಡತಿ ಇಬ್ಬರೂ ಇನ್ನು ಮುಂದೆ ಜೊತೆಗಿರುವುದಾಗಿ ಆಣೆ-ಪ್ರಮಾಣ ಮಾಡಿ ಒಂದಾಗಿದ್ದರು. ಅಷ್ಟಾದರೂ `ದುನಿಯಾ’ ವಿಜಯ್ ಕುಟುಂಬದಲ್ಲಿ ಎಲ್ಲವೂ ಸರಿಯಾಗಿದೆಯಾ ಎಂಬ ಮಾತು ಕೇಳಿ ಬರುತ್ತಲೇ ಇತ್ತು.
ಈಗ ವಿಜಯ್ ಅದಕ್ಕೆ ಮೊದಲ ಬಾರಿಗೆ ಉತ್ತರ ನೀಡಿದ್ದಾರೆ. ತಮ್ಮ ಪತ್ನಿ ನಾಗರತ್ನಗೆ ಡೈವೋರ್ಸ್ ಕೊಡುವುದಕ್ಕೆ ಯತ್ನಿಸಿದ್ದು ತಾನು ಜೀವನದಲ್ಲಿ ಮಾಡಿದ ದೊಡ್ಡ ತಪ್ಪು ಎಂದು ಅವರಿಗೆ ಅರಿವಾಗಿರುವುದಷ್ಟೇ ಅಲ್ಲದೇ ಅದನ್ನು ಬಾಯಿಬಿಟ್ಟು ಹೇಳಿಕೊಂಡಿದ್ದಾರೆ. ಅಷ್ಟೇ ಅಲ್ಲ, ಸಾಯೋವರೆಗೂ ತಾನು ತಮ್ಮ ಪತ್ನಿಯ ಕೈಬಿಡುವುದಿಲ್ಲ ಎಂದು ಕಣ್ಣೀರು ಹಾಕಿ ಅವರನ್ನು ಆಲಂಗಿಸಿಕೊಂಡಿದ್ದಾರೆ.
ವಿಜಯ್ ಇಷ್ಟೆಲ್ಲಾ ಮಾಡಿದ್ದು ಎಲ್ಲಿ ಎಂಬ ಪ್ರಶ್ನೆ ಬರಬಹುದು. ವಿಜಯ್ ಹೀಗೆ ಅತ್ತಿದ್ದು, ಅವಲತ್ತುಕೊಂಡಿದ್ದು `ವೀಕೆಂಡ್ ವಿಥ್ ರಮೇಶ್ – 2′ ಕಾರ್ಯಕ್ರಮದಲ್ಲಿ. ವಿಜಯ್ ತಮ್ಮ ಜೀವನದ ಬಗ್ಗೆ, ನಡೆದು ಬಂದ ಹಾದಿಯ ಬಗ್ಗೆ ಮಾತಾಡಿದ ಎಪಿಸೋಡು ನಾಳೆ ಪ್ರಸಾರವಾಗಲಿದೆ.