ಮಧುರೈ: ಪಶ್ಚಿಮ ಮಧುರೈ ಶಾಸಕ, ತಮಿಳುನಾಡು ಸಹಕಾರ ಸಚಿವ ಸೆಲ್ಲೂರ್ ಕೆ. ರಾಜು ಅವರ ಕಚೇರಿ ಆವರಣದಲ್ಲಿ ಕಳೆದ ರಾತ್ರಿ ಅಪರಿಚಿತರು ಕಚ್ಚಾ ಬಾಂಬ್ ಎಸೆದು ಸ್ಫೋಟಿಸಿದ ಘಟನೆ ನಡೆದಿದೆ.
ಶನಿವಾರ ರಾತ್ರಿ 11.30 ಸುಮಾರಿಗೆ ಘಟನೆ ನಡೆದಿದ್ದು, ಓರ್ವನಿಗೆ ಗಾಯವಾಗಿದೆ. ಬಾಟಲ್ನಲ್ಲಿ ಪೆಟ್ರೋಲ್ ಇಟ್ಟು ಸ್ಫೋಟಿಸಲಾಗಿದ್ದು, ಬಾಟಲ್ನ ಚೂರುಗಳು ತಗಲು ಗಾಯವಾಗಿದೆ ಎಂದು ವರದಿಯಾಗಿದೆ. ಹಿರಿಯ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಅಲ್ಲದೇ ತಕ್ಷಣ ಕಾರ್ಯಪ್ರವೃತ್ತರಾದ ಪೊಲೀಸರು ಪ್ರಕರಣಕ್ಕೆ ಸಂಬಂಧಿಸಿ ಮೂವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಎಸ್ಎಸ್ ಕಾಲೋನಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಳೆದ ವಾರವಷ್ಟೇ ಇಲ್ಲಿಗೆ ಸಮೀಪದ ಮೀನಾಕ್ಷಿ ಸುಂದರೇಶ್ವರ ದೇವಸ್ಥಾನದ ಸಮೀಪ ಇದೇ ರೀತಿಯಲ್ಲೇ ಕಚ್ಚಾ ಬಾಂಬ್ ಸ್ಫೋಟಿಸಲಾಗಿತ್ತು.