ತುಮಕೂರು, ಜ.10- ತ್ರಿವಿಧ ದಾಸೋಹಿ, ನಡೆದಾಡುವ ದೇವರು ಸಿದ್ಧಗಂಗೆಯ ಡಾ.ಶ್ರೀ ಶಿವಕುಮಾರ ಸ್ವಾಮೀಜಿಯವರ ಆರೋಗ್ಯದ ಬಗ್ಗೆ ಸಾಮಾಜಿಕ ಜಾಲತಾಣ, ವಾಟ್ಸ್ಅಪ್ನಲ್ಲಿ ಹರಿದಾಡಿದ ವದಂತಿಗಳು ಸುಳ್ಳು. ಭಕ್ತರು ನಂಬಬೇಡಿ. ಶ್ರೀಗಳು ಆರೋಗ್ಯವಾಗಿದ್ದಾರೆ. ನಿನ್ನೆ ಜಿಲ್ಲೆಯಾದ್ಯಂತ ಸಾಮಾಜಿಕ ಜಾಲತಾಣ ಮತ್ತು ವಾಟ್ಸ್ಅಪ್ಗಳಲ್ಲಿ ಶ್ರೀಗಳ ಆರೋಗ್ಯ ಹದಗೆಟ್ಟಿದೆ ಎಂಬ ಸುಳ್ಳು ವದಂತಿ ಹಬ್ಬಿ ಭಕ್ತರಲ್ಲಿ ಕೆಲಕಾಲ ಆತಂಕ ಮನೆಮಾಡಿತ್ತು. ಮಠಕ್ಕೆ ಭಕ್ತಾದಿಗಳು ದೂರವಾಣಿ ಕರೆ ಮಾಡಿ ಶ್ರೀಗಳ ಆರೋಗ್ಯ ವಿಚಾರಿಸಿಕೊಳ್ಳುವುದು ಕಂಡುಬಂತು.
ಆದರೆ, ಈ ವದಂತಿ ಸುಳ್ಳಾಗಿದ್ದು, ಶ್ರೀಗಳು ಎಂದಿನಂತೆ ಇಷ್ಟಲಿಂಗ ಪೂಜೆ ನೆರವೇರಿಸಿ ಕೊರಟಗೆರೆಯ ಪುಟ್ಟಸಂದ್ರದ ಬಸವೇಶ್ವರ ಸ್ವಾಮೀಜಿ ದೇವಾಲಯದಲ್ಲಿ ನಡೆದ ಧಾರ್ಮಿಕ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಠಕ್ಕೆ ತೆರಳಿ ತಮ್ಮ ದಿನಚರಿಯಲ್ಲಿ ಮಗ್ನರಾಗಿದ್ದರು.
ಈ ಕುರಿತು ಮಠದ ಆಡಳಿತಾಧಿಕಾರಿ ವಿಶ್ವನಾಥ್ ಹಾಗೂ ಆಪ್ತರಾದ ರೇಣುಕಾರಾಧ್ಯ ಅವರನ್ನು ಸಂಪರ್ಕಿಸಿದಾಗ ಇದು ಶುದ್ಧ ಸುಳ್ಳು. ಶ್ರೀಗಳು ಆರೋಗ್ಯವಾಗಿದ್ದಾರೆ. ಇಂತಹ ಸುಳ್ಳು ವದಂತಿಗಳಿಗೆ ಕಿವಿಗೊಡಬೇಡಿ. ಇಂತಹ ಸುಳ್ಳು ವದಂತಿಯನ್ನು ಯಾರೂ ಹಬ್ಬಿಸಬಾರದು. ಭಕ್ತರಿಗೆ ಯಾವುದೇ ಆತಂಕ ಬೇಡ ಎಂದು ಮನವಿ ಮಾಡಿದ್ದಾರೆ.