ಬಂಟ್ವಾಳ, ಜ.11 : ದಿನಸಿ ಅಂಗಡಿಯೊಂದಕ್ಕೆ ನುಗ್ಗಿದ ಕಳ್ಳರು ಐದು ಲಕ್ಷ ರೂ. ನಗದು ಹಣವನ್ನು ದೋಚಿ ಪರಾರಿಯಾದ ಘಟನೆ ಬಂಟ್ವಾಳ ತಾಲೂಕಿನ ಕರಿಯಂಗಳ ಗ್ರಾಮದ ನಡೆದಿದೆ.
ತಾಲೂಕಿನ ಬಡಗಬೆಳ್ಳೂರು ಗ್ರಾಮದ ಸೂರ್ಲ ಮನೆ ನಿವಾಸಿ ವಿಶ್ವನಾಥ ಪೂಜಾರಿಯವರು ಕರಿಯಂಗಳ ಗ್ರಾಮದ ಬಡಕಬೈಲಿನಲ್ಲಿ ಸುಮಾರು ಒಂದೂವರೆ ವರ್ಷದಿಂದ ರಾಜಶ್ರೀ ಜನರಲ್ ಸ್ಟೋರ್ ಹೆಸರಿನ ದಿನಸಿ ಅಂಗಡಿಯನ್ನು ನಡೆಸುತ್ತಿದ್ದಾರೆ.
ಮೊನ್ನೆ ರಾತ್ರಿ ಒಂಭತ್ತು ಗಂಟೆಯ ಸುಮಾರಿಗೆ ವಿಶ್ವನಾಥ ಪೂಜಾರಿಯವರು ಅಂಗಡಿಗೆ ಬೀಗ ಹಾಕಿಕೊಂಡು ಮನೆಗೆ ತೆರಳಿದ್ದರು. ನಿನ್ನೆ ಬೆಳಿಗ್ಗೆ ಏಳು ಗಂಟೆಗೆ ಅಂಗಡಿ ತೆರೆಯಲೆಂದು ಬಂದಾಗ ಶಟರ್ ಅರ್ಧತೆರೆದಿದ್ದು, ಬೀಗ ಜಗಲಿಯ ಮೇಲಿತ್ತು. ಒಳಪ್ರವೇಶಿಸಿ ನೋಡಿದಾಗ ವಿಶ್ವನಾಥ ಪೂಜಾರಿಯವರು ಫ್ರಿಡ್ಜ್ನ ಹಿಂಬದಿಯಲ್ಲಿರಿಸಿದ್ದ ಐದು ಲಕ್ಷ ರೂ. ನಗದು ಹಣವಿದ್ದ ಪ್ಲಾಸ್ಟಿಕ್ ಚೀಲ ಮಾಯವಾಗಿತ್ತು.
ವಿಶ್ವನಾಥ ಪೂಜಾರಿಯವರು ತನ್ನ ಬಳಿಯಿದ್ದ ಚೀಲವನ್ನು ಪರೀಶಿಸಿದಾಗ ಅದರಲ್ಲಿ ಅಂಗಡಿಯ ಚಾವಿ ಇದ್ದಿರಲಿಲ್ಲ. ಚೀಲದಲ್ಲಿದ್ದ ಚಾವಿ ಕಳೆದು ಹೋಗಿ ಅದು ಸಿಕ್ಕಿದವರು ಶಟರ್ ಬೀಗವನ್ನು ತೆರೆದು ಹಣವನ್ನು ಕಳ್ಳತನ ಮಾಡಿದ್ದಾರೆನ್ನಲಾಗಿದೆ.
ಜಾಗ ಖರೀದಿಸಲೆಂದು ವಿಶ್ವನಾಥ ಪೂಜಾರಿಯವರು ಐದು ಲಕ್ಷ ರೂ.ಗಳನ್ನು ಸಂಗ್ರಹಿಸಿದ್ದು, ಮನೆಯಲ್ಲಿ ಅದನ್ನಿಡಲು ಸರಿಯಾದ ವ್ಯವಸ್ಥೆಯಿಲ್ಲದ್ದರಿಂದ ಅಂಗಡಿಯಲ್ಲಿ ಇರಿಸಿದ್ದರೆನ್ನಲಾಗಿದೆ.
ಈ ಬಗ್ಗೆ ಪ್ರಕರಣವನ್ನು ದಾಖಲಿಸಿಕೊಂಡಿರುವ ಬಂಟ್ವಾಳ ಗ್ರಾಮಾಂತರ ಠಾಣಾ ಪೊಲೀಸರು ಮುಂದಿನ ತನಿಖೆ ನಡೆಸುತ್ತಿದ್ದಾರೆ.