ಕುಂದಾಪುರ: ಇನ್ನೇನು ಐದನೇ ಪರ್ಯಾಯ ಪೀಠವನ್ನು ಏರಲಿರುವ ಪೇಜಾವರ ಮಠದ ಶ್ರೀ ವಿಶ್ವೇಶ್ವರತೀರ್ಥ ಶ್ರೀಗಳು ಕುಂಭಾಸಿಯ ಕೊರಗ ಕಾಲನಿ ಸಮೀಪದ ಮಕ್ಕಳ ಮನೆಗೆ ಭೇಟಿ ನೀಡುವ ಮೂಲಕ ಎಲ್ಲರನ್ನೂ ಚಕಿತಗೊಳಿಸಿದ್ರು.
ಭಾನುವಾರ ಕುಂದಾಪುರಕ್ಕೆ ಆಗಮಿಸಿದ್ದ ವೇಳೆ ಆನೆಗುಡ್ಡೆಯಲ್ಲಿ ಸಾರ್ವಜನಿಕ ಕಾರ್ಯಕ್ರಮವನ್ನು ಪೂರೈಸಿಕೊಂಡು ಹೋಗುವ ಮಾರ್ಗಮಧ್ಯೆ ಕುಂಭಾಸಿಯ ಕೊರಗ ಕಾಲನಿ ಸಮೀಪದಲ್ಲಿಯೇ ಇರುವ ಕೊರಗ ಮಕ್ಕಳು ವಿದ್ಯಾಭ್ಯಾಸಕ್ಕಾಗಿ ಆಶ್ರಯಿಸಿದ ಅಂಬೇಡ್ಕರ್ ಭಾವನದಲ್ಲಿರುವ ಮಕ್ಕಳ ಮನೆಗೆ ಭೇಟಿಯನ್ನಿತ್ತು ಮಕ್ಕಳ ಜೊತೆಗೆ ಕೆಲ ಹೊತ್ತು ಮಾತನಾಡಿದರು. ಅಲ್ಲದೇ ಹಣ್ಣುಹಂಪಲನ್ನು ಮಕ್ಕಳಿಗೆ ನೀಡಿ ಆಶೀರ್ವದಿಸಿದರು.
ಭಾನುವಾರ ಸಂಜೆ ಸುಮಾರಿಗೆ ಆಗಮಿಸಿದ ಸ್ವಾಮೀಜಿಗಳು ಮಕ್ಕಳ ಆರೋಗ್ಯ ಕ್ಷೇಮವನ್ನು ವಿಚಾರಿಸಿ ಅವರ ಬಳಿ ವಿದ್ಯಾಭ್ಯಾಸವನ್ನು ಉತ್ತಮ ರೀತಿಯಲ್ಲಿ ಮಾಡುವಂತೆ ತಿಳಿಸಿದರು. ಕೊರಗ ಮುಖಂಡ ಗಣೇಶ್ ಕುಂದಾಪುರ ಅವರು ಸ್ವಾಮೀಜಿಯವರನ್ನು ಬರಮಾಡಿಕೊಂಡು ಕೊರಗ ಕಾಲನಿ ಬಗ್ಗೆ ಮಕ್ಕಳ ಮನೆ ಬಗ್ಗೆ ವಿವರವನ್ನು ನೀಡಿ ನಡೆದ ಅಭಿವ್ರದ್ಧಿ ಕಾರ್ಯಗಳ ಬಗ್ಗೆ ಸ್ವಾಮೀಜಿ ಗಮನಕ್ಕೆ ತಂದರು. ಮುಂದಿನ ಎರಡು ವರ್ಷದ ಪರ್ಯಾಯದ ಅವಧಿಯಲ್ಲಿ ಈ ಸಂಸ್ಥೆಗೆ ಮಠದಿಂದ ಸವಲತ್ತು ಬೇಕಾದಲ್ಲಿ ಸಂಪರ್ಕಿಸುವಂತೆಯೂ ಸ್ವಾಮೀಜಿ ತಿಳಿಸಿದ್ದಾರೆ ಎನ್ನಲಾಗಿದೆ.
ಇನ್ನು ಮಕ್ಕಳ ಮನೆ ಬಗ್ಗೆ ಹಾಗೂ ಮಕ್ಕಳ ಆಟ-ಪಾಠಗಳ ಬಗ್ಗೆ ವಿವರ ಪಡೆದ ಪೇಜಾವರ ಶ್ರೀಗಳು ಅತೀವ ಸಂತಸ ವ್ಯಕ್ತಪಡಿಸಿದರು.
ಇದೇ ಸಂದರ್ಭ ಕುಂಭಾಸಿ ಗ್ರಾಮಪಂಚಾಯತ್ ವತಿಯಿಂದ ಮಕ್ಕಳಮನೆಗೆ ಕೊಡಲ್ಪಟ್ಟ ‘ಶುದ್ದ ಕುಡಿಯುವ ನೀರಿನ ಘಟ’ವನ್ನು ಪೇಜಾವರ ಶ್ರೀಗಳು ಸಂಸ್ಥೆಗೆ ನೀಡಿದರು. ಈ ಸಂದರ್ಭ ಪೇಜಾವರ ಮಠದ ಕಿರಿಯ ಶ್ರೀಗಳಾದ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ, ಕೊರಗ ಮುಖಂಡರಾದ ಗಣೇಶ್ ಕುಂದಾಪುರ, ಲಕ್ಷ್ಮಣ, ಕುಂಭಾಸಿ ಗ್ರಾ.ಪಂ. ಅಧ್ಯಕ್ಷೆ ಶ್ರೀವಾಣಿ ಅಡಿಗ, ಉಪಾಧ್ಯಕ್ಷ ಮಹಾಬಲೇಶ್ವರ ಆಚಾರ್ಯ, ಸದಸ್ಯ ಕಮಲಾಕ್ಷ ಪೈ ಮೊದಲಾದವರು ಉಪಸ್ಥಿತರಿದ್ದರು.
ವರದಿ,ಚಿತ್ರ- ಯೋಗೀಶ್ ಕುಂಭಾಸಿ