ನವದೆಹಲಿ: ತಮಿಳುನಾಡಿನ ಗೂಳಿ ಪಳಗಿಸುವ ‘ಜಲ್ಲಿಕಟ್ಟು’ ಕ್ರೀಡೆ ಮೇಲಿನ ನಿಷೇಧ ತೆರವುಗೊಳಿಸಿದ ಕೇಂದ್ರ ಸರ್ಕಾರದ ಪ್ರಕಟಣೆಯನ್ನು ರದ್ದು ಪಡಿಸುವಂತೆ ಕೋರಿ ಸಲ್ಲಿಸಲಾಗಿರುವ ಅರ್ಜಿಗಳ ವಿಚಾರಣೆಯನ್ನು ಸುಪ್ರೀಂಕೋರ್ಟ್ ಇಂದು ಕೈಗೆತ್ತಿಕೊಳ್ಳಲಿದೆ. ಪ್ರಾಣಿ ಕಲ್ಯಾಣ ಮಂಡಳಿ ಸೇರಿದಂತೆ ಹಲವಾರು ಸಂಘಟನೆಗಳು ಕೇಂದ್ರ ಸರ್ಕಾರದ ಪ್ರಕಟಣೆ ವಿರುದ್ಧ ಸುಪ್ರೀಂಕೋರ್ಟ್ ಮೆಟ್ಟಿಲೇರಿವೆ.
ಹಿರಿಯ ವಕೀಲ ಸಿದ್ಧಾರ್ಥ ಲೂಥ್ರ ಅವರು ಜಲ್ಲಿಕಟ್ಟು ಪ್ರಕಟಣೆ ವಿರುದ್ಧ ಸಲ್ಲಿಸಲಾಗಿರುವ ಅರ್ಜಿಗಳ ಪ್ರಸ್ತಾಪ ಮಾಡಿದಾಗ ಮುಖ್ಯ ನ್ಯಾಯಮೂರ್ತಿ ಟಿ.ಎಸ್. ಥಾಕೂರ್ ನೇತೃತ್ವದ ಸುಪ್ರೀಂಕೋರ್ಟ್ ಪೀಠವು ಮಂಗಳವಾರ ಅರ್ಜಿಗಳ ವಿಚಾರಣೆಗೆ ಒಪ್ಪಿಗೆ ನೀಡಿತು. ಪ್ರಾಣಿಗಳ ಹಕ್ಕು ಕಾರ್ಯಕರ್ತೆ ಗೌರಿ ಮೌಲೇಖಿ ಸೇರಿದಂತೆ ಹಲವಾರು ಅರ್ಜಿದಾರರು ಜಲ್ಲಿಕಟ್ಟು ಕ್ರೀಡೆಯನ್ನು ನಿಷೇಧಿಸಿದ 2014ರ ಸುಪ್ರೀಂಕೋರ್ಟ್ ತೀರ್ಪನ್ನು ಬದಿಗೆ ತಳ್ಳಿ ಕ್ರೀಡೆ ಮೇಲಿನ ನಿಷೇಧ ತೆರವುಗೊಳಿಸಿ ಶುಕ್ರವಾರ ಕೇಂದ್ರ ಸರ್ಕಾರ ಪ್ರಕಟಣೆ ಹೊರಡಿಸಿದ್ದನ್ನು ಪ್ರಶ್ನಿಸಿ, ಅದನ್ನು ರದ್ದು ಪಡಿಸುವಂತೆ ಕೋರಿದ್ದಾರೆ.
ತಮಿಳುನಾಡಿನ ಜಲ್ಲಿಕಟ್ಟು ಮತ್ತು ಗುಜರಾತ್, ಹರಿಯಾಣ, ಕರ್ನಾಟಕ, ಕೇರಳ, ಮಹಾರಾಷ್ಟ್ರ ಮತ್ತು ಪಂಜಾಬ್ಗಳಲ್ಲಿ ನಡೆಯುವ ಎತ್ತು ಬಂಡಿ ಓಟ ಕ್ರೀಡೆಗಳಿಗೆ ಅವಕಾಶ ನೀಡಿ ಕೇಂದ್ರ ಸರ್ಕಾರ ಪ್ರಕಟಣೆ ಹೊರಡಿಸಿತ್ತು.