ಪುತ್ತೂರು, ಜ.11: ನಗರದ ಬೊಳುವಾರ ಮಹಾವೀರ ಆಸ್ಪತ್ರೆಯ ವೈದ್ಯ ಡಾ. ಸುರೇಶ್ ಪುತ್ತೂರಾಯ ಅವರ ದರ್ಬೆಯಲ್ಲಿಯ ಮನೆಯ ಬಾಗಿಲು ಮುರಿದು ಒಳ ನುಗ್ಗಿದ ಕಳ್ಳರು ಒಟ್ಟು 11 ಲಕ್ಷ ರೂ. ಮೌಲ್ಯದ ನಗನಗದು ಕಳವುಗೈದು ಪರಾರಿಯಾದ ಘಟನೆ ರಾತ್ರಿ ನಡೆದಿದೆ.
ಡಾ. ಸುರೇಶ್ ಪುತ್ತೂರಾಯ ಮತ್ತು ಅವರ ಪತ್ನಿ ಪುತ್ತೂರು ಸರ್ಕಾರಿ ಆಸ್ಪತ್ರೆಯ ವೈದ್ಯೆ ಡಾ. ಆಶಾ ಪುತ್ತೂರಾಯ ಶನಿವಾರ ಬೆಳಗ್ಗೆ ಮಂಗಳೂರಿಗೆ ತೆರಳಿದ್ದರು. ಮನೆಯ ಕೆಲಸದಾಕೆ ಬಾಗಿಲು ಹಾಕಿ ಸಂಜೆ ತನ್ನ ಮನೆಗೆ ತೆರಳಿದ್ದರು. ರವಿವಾರ ಬೆಳಗ್ಗೆ ಕೆಲಸದಾಕೆ ಬಂದು ಎಂದಿನಂತೆ ಮನೆಯ ಮುಂಬಾಗಿಲು ತೆರೆದು ಒಳಗೆ ಪ್ರವೇಶಿಸಿದಾಗ ಕಳವಿನ ವಿಚಾರ ಬೆಳಕಿಗೆ ಬಂದಿದೆ. ಕೂಡಲೇ ವೈದ್ಯ ದಂಪತಿಗೆ ದೂರವಾಣಿ ಮೂಲಕ ಮಾಹಿತಿ ನೀಡಿದರು.
ಕಳ್ಳರು ವೈದ್ಯರ ಮನೆಯ ಬದಿಯಲ್ಲಿರುವ ರೋಗಿಗಳನ್ನು ತಪಾಸಣೆ ಮಾಡುವ ಕೊಠಡಿಯ ಬಾಗಿಲು ಮುರಿದು ಒಳಗೆ ನುಗ್ಗಿದ್ದಾರೆ. ವಾರ್ಡ್ರೋಬ್ ಬಾಗಿಲು ತೆರೆದು 30,000 ರೂ. ನಗದು ಮತ್ತು ಚಿನ್ನವನ್ನು ಕಳವು ಮಾಡಿದ್ದಾರೆ. ಕಳವಾದ ಸೊತ್ತುಗಳಲ್ಲಿ ಡಾಲರ್ ಮತ್ತು ಯೂರೋಗಳು ಕೂಡ ಸೇರಿವೆ. ಕಳ್ಳತನವಾಗಿರುವ ಸೊತ್ತುಗಳ ಒಟ್ಟು ಮೌಲ್ಯ 11 ಲ.ರೂ.ಗಳೆಂದು ಹೇಳಲಾಗಿದೆ.
ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.