ನವದೆಹಲಿ (ಪಿಟಿಐ): ‘ಭಾರತಕ್ಕೆ ನೋವು ನೀಡುವವರಿಗೆ ನೋವಿನ ಉತ್ತರವನ್ನೇ ನೀಡಲಾಗುವುದು’ ಎಂದು ರಕ್ಷಣಾ ಸಚಿವ ಮನೋಹರ್ ಪರಿಕ್ಕರ್ ಹೇಳಿದ್ದಾರೆ.
ಪಠಾಣ್ಕೋಟ್ ಉಗ್ರರ ದಾಳಿ ಕುರಿತಂತೆ ಹೇಳಿಕೆ ನೀಡಿರುವ ಪರಿಕ್ಕರ್, ‘ಭಾರತಕ್ಕೆ ನೋವು ತರುವ ಯಾವುದೇ ವ್ಯಕ್ತಿ ಅಥವಾ ಸಂಘಟನೆಗೆ ನೋವೇ ಉತ್ತರವಾಗಲಿದೆ. ಯಾವಾಗ, ಹೇಗೆ, ಎಲ್ಲಿ ಈ ಉತ್ತರ ನೀಡಬೇಕೆಂಬುದು ಭಾರತದ ಆಯ್ಕೆಗೆ ಬಿಟ್ಟಿದ್ದು’ ಎಂದಿದ್ದಾರೆ.
ದೆಹಲಿಯಲ್ಲಿ ಸೋಮವಾರ ನಡೆದ ಸೇನೆಯ ವಿಚಾರ ಸಂಕಿರಣದಲ್ಲಿ ಮಾತನಾಡಿದ ಪರಿಕ್ಕರ್, ‘ಯಾರು ನಮಗೆ ನೋವು ತರುತ್ತಾರೋ ಅವರಿಗೂ ನೋವಿನ ಅನುಭವವಾಬೇಕು. ಹಾಗಾದಾಗ ಮಾತ್ರ ಅವರನ್ನು ಮಟ್ಟಹಾಕಲು ಸಾಧ್ಯ’ ಎಂದು ಹೇಳಿದ್ದಾರೆ.
‘ನಮಗೆ ನೋವು ನೀಡುವವರಿಗೆ ನೋವಿನ ಭಾಷೆಯನ್ನು ಅರ್ಥ ಮಾಡಿಸಬೇಕಿದೆ. ಅಲ್ಲಿಯವರೆಗೂ ಅವರು ನೋವು ನೀಡುವುದನ್ನು ನಿಲ್ಲಿಸಲಾರರು’ ಎಂದಿದ್ದಾರೆ.
‘ಉಗ್ರರ ದಾಳಿಯಿಂದ ನಾಗರಿಕರು ಮಾತ್ರವಲ್ಲ ಸೈನಿಕರು ಸಾಯುವುದನ್ನೂ ನಾವು ಸಹಿಸುವುದಿಲ್ಲ. ಉಗ್ರರ ಕೃತ್ಯಕ್ಕೆ ಸೈನಿಕರ ಜೀವಹಾನಿಯಾಗಬಾರದು. ದೇಶದ ಶತ್ರುಗಳನ್ನು ಮಟ್ಟಹಾಕಬೇಕಾದ್ದು ಸದ್ಯದ ತುರ್ತು’ ಎಂದು ಪರಿಕ್ಕರ್ ಹೇಳಿದ್ದಾರೆ.