ನವದೆಹಲಿ: ಕೇಂದ್ರ ಚುನಾವಣಾ ಆಯೋಗ ರಾಜ್ಯದ ಮೂರು ವಿಧಾಸಭಾ ಕ್ಷೇತ್ರಗಳ ಉಪ ಚುನಾವಣೆಯ ದಿನಾಂಕವನ್ನು ಮಂಗಳವಾರ ಪ್ರಕಟಿಸಿದ್ದು, ಫೆಬ್ರುವರಿ 13ರಂದು ಮತದಾನ ನಡೆಯಲಿದೆ.
ಬೆಂಗಳೂರಿನ ಹೆಬ್ಬಾಳ ಶಾಸಕ ಆರ್. ಜಗದೀಶ್ ಕುಮಾರ್, ಬೀದರ್ ಶಾಸಕ ಗುರುಪಾದಪ್ಪ ನಾಗಮಾರಪ್ಪಳ್ಳಿ ಹಾಗೂ ರಾಯಚೂರು ಜಿಲ್ಲೆ ದೇವದುರ್ಗ ಶಾಸಕ ಎ.ವೆಂಕಟೇಶ್ ನಾಯಕ ಅವರ ನಿಧನದಿಂದ ತೆರವಾಗಿದ್ದ ಮೂರು ಕ್ಷೇತ್ರಗಳಿಗೆ ಚುನಾವಣಾ ದಿನಾಂಕ ನಿಗದಿಯಾಗಿದೆ.
ಮೂರು ಕ್ಷೇತ್ರಗಳಲ್ಲಿ ಇಂದಿನಿಂದಲೇ ಚುನಾವಣಾ ನೀತಿ ಸಂಹಿತೆ ಜಾರಿಗೆ ಬರಲಿದ್ದು, ಜನವರಿ 20ರಂದು ಉಪ ಚುನಾವಣೆಗೆ ಅಧಿಸೂಚನೆ ಜಾರಿಯಾಗಲಿದೆ. ಜನವರಿ 27 ನಾಮಪತ್ರ ಸಲ್ಲಿಕೆಗೆ ಕೊನೆಯ ದಿನವಾಗಿದ್ದು, 28ರಂದು ನಾಮಪತ್ರಗಳ ಪರಿಶೀಲನೆ ಹಾಗೂ 30ರಂದು ನಾಮಪತ್ರ ಹಿಂಪಡೆಯಲು ಕೊನೆಯ ದಿನವಾಗಿದೆ.
ಫೆಬ್ರುವರಿ 13ರಂದು ಉಪ ಚುನಾವಣೆ ನಡೆಯಲಿದ್ದು, ಫೆಬ್ರುವರಿ 16ಕ್ಕೆ ಫಲಿತಾಂಶ ಪ್ರಕಟಗೊಳ್ಳಲ್ಲಿದೆ ಎಂದು ಚುನಾವಣಾ ಆಯೋಗ ತಿಳಿಸಿದೆ.
ಜಗದೀಶ್ ಕುಮಾರ್ ಹಾಗೂ ಗುರುಪಾದಪ್ಪ ನಾಗಮಾರಪ್ಪಳ್ಳಿ ಅವರು ಹೃದಯಾಘಾತದಿಂದ ಹಾಗೂ ರೈಲು ಅಪಘಾತದಲ್ಲಿ ವೆಂಕಟೇಶ್ ನಾಯಕ ಅವರು ಮೃತಪಟ್ಟಿದ್ದರು.