ಸಿಡ್ನಿ, ಜ.29-ಕ್ರಿಸ್ಮಸ್ ರಜೆ ನಂತರ ನಿನ್ನೆಯಷ್ಟೆ ಪುನರಾರಂಭಗೊಂಡಿದ್ದ ಶಾಲೆಗಳನ್ನು ಇಂದು ಉಗ್ರರ ಭೀತಿಯಿಂದಾಗಿ ಮತ್ತೆ ಮುಚ್ಚಿದ್ದು, ವಿದ್ಯಾರ್ಥಿಗಳನ್ನೆಲ್ಲ ತೆರವುಗೊಳಿಸಿ ಮನೆಗಳಿಗೆ ತಲುಪಿಸಲಾಗಿದೆ.
ನ್ಯೂಸೌತ್ ವೇಲ್ಸ್ನ 7ಶಾಲೆಗಳಿಗೆ ಬೆದರಿಕೆ ಕರೆ ಮಾಡಿರುವ ಉಗ್ರರು ಮಕ್ಕಳ ಹತ್ಯಾಕಾಂಡ ನಡೆಸುವುದಾಗಿ ಹೇಳಿದ್ದಾರೆ. ಇದರಿಂದಾಗಿ ಪೆನ್ರಿಪ್, ರಿಚ್ಮಂಡ್, ಮೇನಾವೇಲ್, ಅಂಬರ್ವೇಲ್, ಊಲೂವೇರ್, ಉಲ್ಲಾದುಲ್ಲಾ ಮತ್ತು ಲೇಕ್ ಇಲ್ಲವರ್ರ ಶಾಲೆಗಳಿಗೆ ಬೆದರಿಕೆ ಕರೆ ಬಂದಿರುವುದಾಗಿ ಪೊಲೀಸರು ಖಚಿತ ಪಡಿಸಿದ್ದಾರೆ. ಹಲವಾರು ಶಾಲೆಗಳಿಗೆ ದೂರವಾಣಿ ಕರೆ ಮಾಡಿ ಬೆದರಿಕೆ ಒಡ್ಡಿರುವ ಹಿನ್ನೆಲೆಯಲ್ಲಿ ಕ್ರಮಕೈಗೊಂಡಿರುವ ಪೊಲೀಸರು ಶಾಲೆಗಳನ್ನು ಮುಚ್ಚಿಸಿ ಮಕ್ಕಳನ್ನು ಅವರ ಮನೆಗಳಿಗೆ ಕಳುಹಿಸಿದ್ದಾರೆ.
ಯಾವುದೇ ಅಪಾಯಕಾರಿ ಘಟನೆಗಳಿಗೆ ಅವಕಾಶಗಳಾಗದಂತೆ ಕ್ರಮ ಕೈಗೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಕರೆಗಳು ಒಂದುವೇಳೆ ಹುಸಿ ಬೆದರಿಕೆಯೇ ಇರಬಹುದು. ಆದರೆ ನಮ್ಮ ಎಚ್ಚರಿಕೆಯಲ್ಲಿ ನಾವಿರುವುದು ಒಳ್ಳೆಯದು. ದುರ್ಘಟನೆಗಳು ನಡೆದ ಮೇಲೆ ಏನೂ ಮಾಡಲಾಗದು ಎಂದು ರೆಹಾಡ್ಲಿ ಹೇಳಿದ್ದಾರೆ.