ಕುಂದಾಪುರ: ಮನೆ ಸಮೀಪದ ಸಂಘವೊಂದರಲ್ಲಿ ಸಾಲ ಮಾಡಿದ ಬಗ್ಗೆ ಪತಿರಾಯ ಪ್ರಶ್ನೆ ಮಾಡಿದ್ದಕ್ಕೆ ಮುನಿಸಿಕೊಂಡ ಮಹಿಳೆಯೋರ್ವರು ಮನೆಬಿಟ್ಟು ಹೋದ ಘಟನೆ ಕುಂದಾಪುರ ತಾಲೂಕಿನ ಕಾಳಾವರ ಸಳ್ವಾಡಿ ಎಂಬಲ್ಲಿ ನಡೆದಿದೆ.
ಸಳ್ವಾಡಿ ಜನತಾ ಕಾಲೋನಿ ನಿವಾಸಿ ಭರತ್ ಎನ್ನುವವರ ಪತ್ನಿ ಆಶಾ (25) ಎನ್ನುವವರೇ ಮನೆಬಿಟ್ಟು ತೆರಳಿದ ಮಹಿಳೆ.
ಕಾಳಾವರ ಎಸ್.ಕೆ.ಎಸ್ ಸಂಘದಲ್ಲಿ ಸಾಲ ಮಾಡಿದ ಬಗ್ಗೆ ಭರತ್ ಅವರು ತಮ್ಮ ಪತ್ನಿ ಆಶಾ ಅವರನ್ನು ವಿಚಾರಿಸಿದ್ದರು. ಇದಕ್ಕೆ ಮುನಿಸಿಕೊಂಡ ಆಕೆ ಪತಿಗೆ ತಾನೂ ಮನೆ ಬಿಟ್ಟು ತೆರಳುವುದಾಗಿ ತಿಳಿಸಿ ಫೆ.7ರಂದು ಬೆಳಿಗ್ಗೆ 9 ಗಂಟೆಗೆ ಮನೆ ಬಿಟ್ಟು ತೆರಳಿದವರು ಬಳಿಕ ಕುಂದಾಪುರ ತಾಲೂಕು ವಡೇರಹೋಬಳಿ ಗ್ರಾಮದ ಕೆ.ಎಸ್.ಆರ್.ಸಿ ಬಸ್ ನಿಲ್ದಾಣದತ್ತ ಹೋಗಿದ್ದಾರೆನ್ನಲಾಗಿದೆ. ಬಳಿಕ ಆಶಾ ತನ್ನ ತಾಯಿ ಮನೆಗೂ ಹೋಗದೆ ವಾಪಾಸ್ಸು ಭರತ್ ಅವರ ಮನೆಗೂ ಬಾರದೇ ಕಾಣೆಯಾಗಿದ್ದಾರೆ.
ಸತತ ಹುಡುಕಾಟದ ಬಳಿಕ ಪತಿ ಕುಂದಾಪುರ ಪೊಲೀಸ್ ಠಾಣೆ ಮೆಟ್ಟಿಲೇರಿದ್ದು ಈ ಬಗ್ಗೆ ಕುಂದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.