ಮಂಗಳೂರು,ಫೆ.16: ಮರಳುದಂಧೆಗೆ ಸಂಬಂಧಪಟ್ಟಂತೆ ಬಿಜೆಪಿ ಮುಖಂಡರುಗಳು ಕಾಂಗ್ರೆಸ್ ಬಗ್ಗೆ ಅಪಪ್ರಚಾರ ಮಾಡುವುದರ ಜೊತೆಗೆ ಜನರಿಗೆ ತಪ್ಪು ಮಾಹಿತಿ ನೀಡುತಿದ್ದಾರೆ. ಜಿಲ್ಲೆಯಲ್ಲಿ ಮರಳು ದಂಧೆ ಹೆಸರು ಬಂದಿರುವುದು ಬಿಜೆಪಿ ಮುಖಂಡ ಮಾಜಿ ಸಚಿವ ಕೃಷ್ಣ ಜೆ. ಪಾಲೇಮಾರ್ ಅವರಿಂದ ಎಂದು ದ.ಕ. ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಆಪಾದಿಸಿದ್ದಾರೆ.
ದ.ಕ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಮಂಗಳವಾರ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು,ಕೃಷ್ಣ ಪಾಲೇಮಾರ್ ಸಚಿವರಾಗಿದ್ದಾಗ ಮರಳನ್ನು ಕೇರಳದ ಶಿಫ್ಯಾರ್ಡ್ಗೆ ಸರಬರಾಜು ಮಾಡುವ ವಿಚಾರದಲ್ಲಿ ದಂಧೆ ಆರಂಭಿಸಿರುವುದು ಜಿಲ್ಲೆಯ ಜನರಿಗೆ ಗೊತ್ತಿದೆ. ನಮ್ಮ ಸರಕಾರದ ಅವಧಿಯಲ್ಲಿ ಮರಳು ದಂಧೆಗೆ ಕಡಿವಾಣ ಹಾಕಲು ಏಕರೂಪದ ಮರಳುನೀತಿಯನ್ನು ಜಾರಿಗೆ ತರಲು ಪ್ರಯತ್ನಿಸಲಾಯಿತು. ಆದರೆ ಕಾನೂನು ತೊಡಕಿನಿಂದ ಸಾಧ್ಯವಾಗಿಲ್ಲ ಎಂದರು.
ಇದೀಗ ಜಿಲ್ಲೆಯಲ್ಲಿ ಮರಳು ದಂಧೆಗೆ ಕಡಿವಾಣ ಹಾಕಲಾಗಿದೆ. ಸಿಆರ್ಝಡ್ ವ್ಯಾಪ್ತಿಯಲ್ಲಿ ಮರಳು ತೆಗೆಯುವ ಲೈಸೆನ್ಸ್ ನವೀಕರಣಕ್ಕೆ ಬಾಕಿ ಇದೆ. ಸಿಆರ್ಝಡ್ಯೇತರ ಪ್ರದೇಶದಲ್ಲಿ ಮರಳು ತೆಗೆಯಲು ಲೋಕೋಪಯೋಗಿ ಇಲಾಖೆಯ ಮೂಲಕ ಟೆಂಡರ್ ಕರೆಯಲಾಗಿದೆ. ಪ್ರಸಕ್ತ ಜನರಿಗೆ ವಶಪಡಿಸಿಕೊಮಡಿರುವ ಮರಳನ್ನು ನಿಡಲಾಗುತ್ತಿದೆ. ಮರಳು ದಂಧೆಗೆ ಕಡಿವಾಣ ಹಾಕಲಾಗಿದೆ ಎಂದು ಹೇಳಿದರು.
ಮರಳು ಮಾಫಿಯಾದಲ್ಲಿ ಸಚಿವರ ಚೇಳಗಳು ತೊಡಗಿಸಿಕೊಂಡಿದ್ದಾರೆ ಎಂಬ ಪಾಲೇಮಾರ್ ಮಾತನ್ನು ಖಂಡಿಸುತ್ತೇನೆ ಎಂದ ಅವರು, ನಾನು ಯಾವುದೇ ಬಿಲ್ಡರ್ ಅಲ್ಲ, ಆದರೆ ಬಿಜೆಪಿ ಬೆಂಬಲಿತರು ಈ ಕಾರ್ಯದಲ್ಲಿ ಸಾಕಷ್ಟಿದ್ದಾರೆ. ಬಿಜೆಪಿ ಕಾಲದಲ್ಲಿ ಯಾವುದೇ ರಾಜಸಂಗ್ರಹ ಧನವಾಗಿಲ್ಲ. ಆದರೆ ಕಾಂಗ್ರೆಸ್ ಅಧಿಕಾರವಧಿಯಲ್ಲಿ 14.9ಕೋ.ರೂ. ರಾಜಸಂಗ್ರಹ ಧನವಾಗಿದೆ ಎಂದು ಸಚಿವರು ತಿಳಿಸಿದರು.
9/11 ಬಗ್ಗೆ ಪ್ರತಿಕ್ರಿಯಿಸಿದ ಅವರು ಇದನ್ನು ಜಾರಿಗೆ ತಂದದ್ದು ಬಿಜೆಪಿಯವರ ಕಾಲದಲ್ಲಿಯೇ, ಇದನ್ನು ತಾತ್ಕಾಲಿಕವಾಗಿ ರದ್ದುಗೊಳಿಸಿಲ್ಲ, ರಾಜ್ಯ ಸರಕಾರ 9/11 ನಾಲ್ಕು ಜಿಲ್ಲೆಗಳಲ್ಲಿ ಸಂಪೂರ್ಣವಾಗಿ ರದ್ದುಗೊಳಿಸಿದೆ ಎಂದು ಸ್ಪಷ್ಟಪಡಿಸಿದರು. ಚುನಾವಣೆ ಸಂದರ್ಭವನ್ನಿಟ್ಟುಕೊಂಡು ಬಿಜೆಪಿ ವೃಥಾ ಆರೋಪ ಮಾಡುತ್ತಿದೆ ಎಂದು ದೂರಿದರು.
ಉಳಾಯಿಬೆಟ್ಟು ಪ್ರಕರಣ : ಅಮಾಯಕನ ಬಂಧನ
ಅಂದು ಉಳಾಯಿಬೆಟ್ಟುವಿನಲ್ಲಿ ರಸ್ತೆಯ ವಿಷಯದ ಬಗ್ಗೆ 2ಗುಂಪುಗಳ ಮಧ್ಯೆ ನಡೆದ ಘರ್ಷಣೆ ನಡೆದಿದ್ದು, 50ಜನರ ಮೇಲೆ ಕೇಸಿದೆ. ನನ್ನ ಮಟ್ಟಿಗೆ ಬಂಧಿತ ವ್ಯಕ್ತಿ ಅಪರಾಧಿಯಲ್ಲ ಆತ ಅಮಾಯಕ ಎಂದರು. ಮಂಗಳೂರು ಗ್ರಾಮಾಂತರ ಇನ್ಸ್ಪೆಕ್ಟರ್ ಪ್ರಮೋದ್ಕುಮಾರ್ ಅವರು ಉಳಾಯಿಬೆಟ್ಟು ಪ್ರಕರಣದಲ್ಲಿ ಅಮಾಯಕ ವ್ಯಕ್ತಿಯನ್ನು ಬಂಧಿಸಿದ್ದರು.
ಪೊಲೀಸ್ ಅಧಿಕಾರಿ ವರ್ಗಾವಣೆಯ ಬಗ್ಗೆ ಮಾತನಾಡಿದ ಅವರು, ಪ್ರಮೋದ ಕುಮಾರ್ ಹೆಚ್ಚುವರಿಯಾಗಿ ಮಂಗಳೂರು ಗ್ರಾಮಾಂತರ ಠಾಣೆಯಲ್ಲಿ ಕೆಲಸ ನಿರ್ವಹಿಸುತ್ತಿದ್ದು ಅವರ ವರ್ಗಾವಣೆಯನ್ನು ಸರಕಾರ ಮಾಡಿದೆ. ಆದರೆ ಪ್ರಮೋದ್ ಕುಮಾರ್ ಬಜ್ಪೆ ಠಾಣೆಯಲ್ಲಿ ಇನ್ಸ್ಪೆಕ್ಟರ್ ಆಗಿದ್ದ ಸಂದರ್ಭದಲ್ಲಿ ಅವರನ್ನು ಮಾಜಿ ಸಚಿವ ಕೃಷ್ಣ ಜೆ ಪಾಲೇಮಾರ್ ವರ್ಗಾವಣೆ ಮಾಡಿದ್ದರು ಎಂದು ಆರೋಪಿಸಿದರು.
ಜಿಲ್ಲಾ ಕಾಂಗ್ರೆಸ್ ಹಂಗಾಮಿ ಅಧ್ಯಕ್ಷ ಇಬ್ರಾಹೀಂ ಕೋಡಿಜಾಲ್, ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಮಿಥುನ್ ರೈ, ಮಾಜಿ ಮೇಯರ್ ಶಶಿಧರ್ ಹೆಗ್ಡೆ, ಪಕ್ಷದ ಪ್ರಮುಖರಾದಸದಾಶಿವ ಉಳ್ಳಾಲ, ಸುರೇಶ್ ಬಳ್ಳಾಲ್, ಪಿ.ವಿ.ಮೋಹನ್, ಬಾಲಕೃಷ್ಣ ಶೆಟ್ಟಿ, ವಿನಯರಾಜ್, ಪ್ರವೀಣ್ಚಂದ್ರ ಆಳ್ವ,ನಝೀರ್ ಬಜಾಲ್, ಸಂತೋಷ್ ಶೆಟ್ಟಿ, ರವೂಫ್, ಮೆರಿಲ್ ರೆಗೋ ಮೊದಲಾದವರು ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.