ಮನೋರಂಜನೆ

ಏಷ್ಯಾಕಪ್‌: ರೋಹಿತ್‌ ಅಬ್ಬರದ ಬ್ಯಾಟಿಂಗ್‌, ಮಿಂಚಿದ ಬೌಲರ್‌ಗಳು; ಭಾರತ ತಂಡದ ಗೆಲುವಿನ ಆರಂಭ

Pinterest LinkedIn Tumblr

India Sri Lanka Cricket

ಮೀರ್‌ಪುರ: ಏಷ್ಯಾಕಪ್‌ ಗೆಲ್ಲುವ ಮಹತ್ವದ ಗುರಿ ಹೊಂದಿರುವ ಭಾರತ ತಂಡಕ್ಕೆ ಉತ್ತಮ ಆರಂಭ ಲಭಿಸಿದೆ. ಬ್ಯಾಟಿಂಗ್‌ನಲ್ಲಿ ವಿಜೃಂಭಿಸಿದ ದೋನಿ ನಾಯಕತ್ವದ ತಂಡ ಟೂರ್ನಿಯ ಮೊದಲ ಪಂದ್ಯದಲ್ಲಿ ಬಾಂಗ್ಲಾದೇಶ ವನ್ನು 45 ರನ್‌ಗಳಿಂದ ಮಣಿಸಿದೆ.

ಇಲ್ಲಿನ ಷೇರ್‌ ಎ ಬಾಂಗ್ಲಾ ಕ್ರೀಡಾಂಗಣದಲ್ಲಿ ಬುಧವಾರ ನಡೆದ ಪಂದ್ಯದಲ್ಲಿ ಟಾಸ್‌ ಗೆದ್ದ ಆತಿಥೇಯ ತಂಡ ಬಲಿಷ್ಠ ಭಾರತಕ್ಕೆ ಬ್ಯಾಟಿಂಗ್ ಮಾಡಲು ಅವಕಾಶ ಕೊಟ್ಟಿತು. ಇದನ್ನು ಚೆನ್ನಾಗಿಯೇ ಬಳಸಿಕೊಂಡ ದೋನಿ ಬಳಗ 20 ಓವರ್‌ಗಳಲ್ಲಿ ಆರು ವಿಕೆಟ್‌ ಕಳೆದುಕೊಂಡು 166 ರನ್ ಕಲೆ ಹಾಕಿತು. ಸವಾಲಿನ ಗುರಿಯನ್ನು ಬೆನ್ನು ಹತ್ತಿದ ಆತಿಥೇಯರು ನಿಗದಿತ ಓವರ್‌ಗಳಲ್ಲಿ ಏಳು ವಿಕೆಟ್‌ ಕಳೆದುಕೊಂಡು 121 ರನ್ ಗಳಿಸಿದರು.

ಚುಟುಕು ಕ್ರಿಕೆಟ್‌ನಲ್ಲಿ ಅನುಭವಿಗಳನ್ನು ಹೊಂದಿರುವ ಭಾರತಕ್ಕೆ ಆರಂಭದಲ್ಲಿಯೇ ಆಘಾತ ಎದುರಾಯಿತು. ಶಿಖರ್‌ ಧವನ್ (2), ವಿರಾಟ್ ಕೊಹ್ಲಿ (8), ಸುರೇಶ್ ರೈನಾ (13) ಮತ್ತು ಯುವರಾಜ್ ಸಿಂಗ್‌ (15) ದೊಡ್ಡ ಮೊತ್ತ ಗಳಿಸುವಲ್ಲಿ ವಿಫಲರಾದರು. ಆದರೆ ಆರಂಭಿಕ ಬ್ಯಾಟ್ಸ್‌ಮನ್ ರೋಹಿತ್‌ ಶರ್ಮಾ ಬಾಂಗ್ಲಾ ಬೌಲರ್‌ಗಳ ಬೆವರಿಳಿಸಿದರು.

ಬರೋಬ್ಬರಿ ಒಂದೂವರೆ ಗಂಟೆ ಕ್ರೀಸ್‌ನಲ್ಲಿದ್ದ ರೋಹಿತ್‌ 55 ಎಸೆತಗಳನ್ನು ಎದುರಿಸಿದರು. ಏಳು ಬೌಂಡರಿ ಮತ್ತು ಮೂರು ಸಿಕ್ಸರ್‌ ಸೇರಿದಂತೆ 83 ರನ್‌ ಬಾರಿಸಿದರು. ಮಧ್ಯಮ ಕ್ರಮಾಂಕದಲ್ಲಿ ಹಾರ್ದಿಕ್‌ ಪಾಂಡ್ಯ (31, 25 ನಿಮಿಷ, 18 ಎಸೆತ, 4 ಬೌಂಡರಿ, 1 ಸಿಕ್ಸರ್‌) ನೆರವಾದರು. ಈ ಜೋಡಿ ಐದನೇ ವಿಕೆಟ್‌ಗೆ 55 ರನ್ ಕಲೆ ಹಾಕಿತು. ಇದಕ್ಕಾಗಿ ತೆಗೆದುಕೊಂಡಿದ್ದು 42 ಎಸೆತಗಳಷ್ಟೇ.

ಭಾರತ ತಂಡ ಈ ಪಂದ್ಯದಲ್ಲಿ ಗೆಲುವು ಪಡೆಯಿತಾದರೂ ಪ್ರಮುಖ ಬ್ಯಾಟ್ಸ್‌ಮನ್‌ಗಳು ವೈಫಲ್ಯ ಕಂಡಿದ್ದು ನಾಯಕ ದೋನಿ ಚಿಂತೆಗೆ ಕಾರಣವಾಗಿದೆ. ಏಕೆಂದರೆ ಮುಂದಿನ ಪಂದ್ಯಗಳಲ್ಲಿ ಭಾರತ ಬಲಿಷ್ಠ ತಂಡಗಳ ಸವಾಲು ಎದುರಿಸಬೇಕಿದೆ. ಆದ್ದರಿಂದ ಚುಟುಕು ಕ್ರಿಕೆಟ್‌ನ ಪರಿಣತ ಬ್ಯಾಟ್ಸ್‌ಮನ್‌ಗಳಾದ ರೈನಾ ಮತ್ತು ಯುವರಾಜ್‌ ಮೇಲೆ ಹೆಚ್ಚು ಜವಾಬ್ದಾರಿಯಿದೆ.

ಚುರುಕಿನ ಬೌಲಿಂಗ್‌: ಭಾರತ ತಂಡದ ಈ ಗೆಲುವಿಗೆ ಚುರುಕಿನ ಬೌಲಿಂಗ್ ಕೂಡ ಪ್ರಮುಖ ಕಾರಣವಾಯಿತು. ಮೂರನೇ  ಓವರ್‌ನಲ್ಲಿ ಮಹಮ್ಮದನ್‌ ಮಿಥುನ್‌ (11) ಮತ್ತು ನಂತರದ ಓವರ್‌ನಲ್ಲಿ ಸೌಮ್ಯ ಸರ್ಕಾರ್‌ (11) ಅವರನ್ನು ಪೆವಿಲಿಯನ್‌ಗೆ ಕಳುಹಿಸಿದ ಭಾರತ ಆರಂಭದಲ್ಲಿಯೇ ಮೇಲುಗೈ ಸಾಧಿಸಿತು. ಅನುಭವಿ ಆಶಿಶ್‌ ನೆಹ್ರಾ ಎದುರಾಳಿ ಬ್ಯಾಟ್ಸ್‌ಮನ್‌ಗಳನ್ನು ಇನ್ನಿಲ್ಲದಂತೆ ಕಾಡಿದರು.

ಎಡಗೈ ವೇಗಿ ನೆಹ್ರಾ ನಾಲ್ಕು ಓವರ್‌ಗಳಲ್ಲಿ 23 ರನ್‌ಗಳನ್ನು ನೀಡಿ ಮೂರು ವಿಕೆಟ್‌ ಕಬಳಿಸಿದರು. ಜಸ್‌ಪ್ರೀತ್‌ ಬೂಮ್ರಾ, ಹಾರ್ದಿಕ್‌ ಪಾಂಡ್ಯ ಮತ್ತು ಅಶ್ವಿನ್‌ ತಲಾ ಒಂದು ವಿಕೆಟ್‌ ಉರುಳಿಸಿ ಗೆಲುವಿಗೆ ಕಾರಣರಾದರು.

ಮುಂದಿನ ತಿಂಗಳು ಭಾರತದಲ್ಲಿ ವಿಶ್ವ ಟ್ವೆಂಟಿ–20 ಟೂರ್ನಿ ನಡೆಯಲಿದೆ. ಮಹತ್ವದ ಆ ಟೂರ್ನಿಗೆ ಸಜ್ಜಾಗಲು ಏಷ್ಯಾಕಪ್‌ ಪ್ರಮುಖ ವೇದಿಕೆಯಾಗಿದೆ. ಯುವ ಆಟಗಾರರಿಗೂ ಉತ್ತಮ ಅವಕಾಶವೆನಿಸಿದೆ.

ಏಷ್ಯಾಕಪ್‌ ಭಾರತ ತಂಡ ಫೆ. 27ರಂದು ನಡೆಯುವ ತನ್ನ ಮುಂದಿನ ಪಂದ್ಯದಲ್ಲಿ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನವನ್ನು ಎದುರಿಸಲಿದೆ.

‌ಇಂದಿನ ಪಂದ್ಯ
ಶ್ರೀಲಂಕಾ–ಯುನೈಟೆಡ್‌ ಅರಬ್‌ ಎಮಿರೇಟ್ಸ್‌
ಸ್ಥಳ: ಮೀರ್‌ಪುರ
ಆರಂಭ: ರಾತ್ರಿ 7ಕ್ಕೆ. ನೇರ ಪ್ರಸಾರ: ಸ್ಟಾರ್ ಸ್ಪೋರ್ಟ್ಸ್‌.

ಸ್ಕೋರ್‌ಕಾರ್ಡ್‌
ಭಾರತ 6 ಕ್ಕೆ 166 (20 ಓವರ್‌ಗಳಲ್ಲಿ)

ರೋಹಿತ್‌ ಶರ್ಮಾ ಸಿ. ಸೌಮ್ಯ ಸರ್ಕಾರ್‌ ಬಿ. ಅಲ್‌ ಅಮಿನ್‌ ಹೊಸೇನ್ 83
ಶಿಖರ್ ಧವನ್‌ ಬಿ. ಅಲ್‌ ಅಮಿನ್‌ ಹೊಸೇನ್‌ 02
ವಿರಾಟ್‌ ಕೊಹ್ಲಿ ಸಿ. ಮಹಮ್ಮದುಲ್ಲಾ ಬಿ. ಮಷ್ರಫೆ ಮೊರ್ತಜಾ 08
ಸುರೇಶ್ ರೈನಾ ಬಿ. ಮಹಮ್ಮದುಲ್ಲಾ  13
ಯುವರಾಜ್‌ ಸಿಂಗ್‌ ಸಿ. ಸೌಮ್ಯ ಸರ್ಕಾರ್‌ ಬಿ. ಶಕೀಬ್‌ ಅಲ್‌ ಹಸನ್‌ 15
ಹಾರ್ದಿಕ್‌ ಪಾಂಡ್ಯ ಸಿ. ಮಹಮ್ಮುದಲ್ಲಾ ಬಿ. ಅಲ್‌ ಅಮಿನ್‌ ಹೊಸೇನ್‌ 31
ಮಹೇಂದ್ರ ಸಿಂಗ್ ದೋನಿ ಔಟಾಗದೆ 08
ರವೀಂದ್ರ ಜಡೇಜ ಔಟಾಗದೆ 00
ಇತರೆ: (ಬೈ–1, ಲೆಗ್ ಬೈ–2, ವೈಡ್‌–3) 6
ವಿಕೆಟ್‌ ಪತನ: 1–4 (ಧವನ್‌: 1.3), 2–22 (ಕೊಹ್ಲಿ; 4.3), 3–42 (ರೈನಾ; 7.5), 4–97 (ಯುವರಾಜ್‌; 14.5), 5–158 (ರೋಹಿತ್‌; 19.2), 6–158 (ಹಾರ್ದಿಕ್‌; 19.4)
ಬೌಲಿಂಗ್‌: ತಸ್ಕನ್‌ ಅಹ್ಮದ್‌ 3–0–22–0, ಅಲ್‌ ಅಮೀನ್‌ ಹೊಸೇನ್‌ 4–0–37–3, ಮುಸ್ತಫಿಜರ್‌ ರಹಮಾನ್‌ 4–0–40–0, ಮಷ್ರಫೆ ಮುರ್ತಜಾ 4–0–40–1, ಮಹಮ್ಮುದುಲ್ಲಾ 2–0–9–1, ಶಕೀಬ್‌ ಅಲ್‌ ಹಸನ್‌ 3–0–15–1.

ಬಾಂಗ್ಲಾದೇಶ 7 ಕ್ಕೆ 121 (20 ಓವರ್‌ಗಳಲ್ಲಿ)
ಸೌಮ್ಯ ಸರ್ಕಾರ್‌ ಸಿ. ಮಹೇಂದ್ರ ಸಿಂಗ್ ದೋನಿ ಬಿ. ಜಸ್‌ಪ್ರೀತ್‌ ಬೂಮ್ರಾ 11
ಮಹಮ್ಮದ್‌ ಮಿಥುನ್‌ ಬಿ. ಆಶಿಶ್‌ ನೆಹ್ರಾ 01
ಶಬ್ಬೀರ್‌ ರಹಮಾನ್‌ ಸಿ. ಮಹೇಂದ್ರ ಸಿಂಗ್ ದೋನಿ ಬಿ. ಹಾರ್ದಿಕ್‌ ಪಾಂಡ್ಯ 44
ಇಮ್ರುಲ್‌ ಕಯಸ್‌ ಸಿ. ಯುವರಾಜ್ ಸಿಂಗ್‌ ಬಿ. ಆರ್‌. ಅಶ್ವಿನ್‌ 14
ಶಕೀಬ್‌ ಅಲ್‌ ಹಸನ್‌ ರನ್‌ ಔಟ್‌ (ಶರ್ಮಾ/ದೋನಿ) 03
ಮುಸ್ತಫಿಕರ್ ರಹೀಮ್‌ ಔಟಾಗದೆ 16
ಮಹಮ್ಮುದುಲ್ಲಾ ಸಿ. ರೋಹಿತ್‌ ಶರ್ಮಾ ಬಿ. ಆಶಿಶ್‌ ನೆಹ್ರಾ 07
ಮುಷ್ರಫೆ ಮೊರ್ತಜಾ ಸಿ. ರವೀಂದ್ರ ಜಡೇಜ ಬಿ. ಆಶಿಶ್‌ ನೆಹ್ರಾ 00
ತಸ್ಕಿನ್‌ ಅಹ್ಮದ್‌ ಔಟಾಗದೆ 15
ಇತರೆ: (ಲೆಗ್‌ ಬೈ–4 ವೈಡ್‌–6) 10
ವಿಕೆಟ್‌ ಪತನ: 1–9 (ಮಿಥುನ್‌; 2.2), 2–15 (ಸರ್ಕಾರ್‌; 3.2), 3–50 (ಇಮ್ರುಲ್‌; 9.5), 4–73 (ಶಕೀಬ್‌; 12.3), 5–82 (ಶಬ್ಬೀರ್‌; 14.1), 6–100 (ಮಹಮ್ಮುದುಲ್ಲಾ: 16.3), 7–100 (ಮೊರ್ತಜಾ; 16.4).
ಬೌಲಿಂಗ್‌: ಆಶಿಶ್‌ ನೆಹ್ರಾ 4–0–23–3, ಜಸ್‌ಪ್ರೀತ್‌ ಬೂಮ್ರಾ 4–0–23–1, ಹಾರ್ದಿಕ್‌ ಪಾಂಡ್ಯ 4–0–23–1, ಆರ್‌. ಅಶ್ವಿನ್‌ 4–0–23–1, ರವೀಂದ್ರ ಜಡೇಜ 4–0–25–0.
ಫಲಿತಾಂಶ: ಭಾರತಕ್ಕೆ 45 ರನ್ ಗೆಲುವು ಹಾಗೂ ಎರಡು ಪಾಯಿಂಟ್ಸ್‌
ಪಂದ್ಯಶ್ರೇಷ್ಠ: ರೋಹಿತ್‌ ಶರ್ಮಾ

Write A Comment