ಕನ್ನಡ ವಾರ್ತೆಗಳು

ಕೊಲ್ಲೂರು ಮೂಕಾಂಬಿಕೆ ಚಿನ್ನ; ಗುಮಾಸ್ತ ಇಟ್ಟಿದ್ದ ಅಡಮಾನ; ಹಣದಲ್ಲಿ ಸ್ನೇಹಿತರೊಂದಿಗೆ ನಿತ್ಯ ಮಾಡ್ತಿದ್ದ ಮಧ್ಯಪಾನ!

Pinterest LinkedIn Tumblr

ಉಡುಪಿ: ಕೊಲ್ಲೂರು ಮೂಕಂಬಿಕೆ ದೇವಿಯ ಲಕ್ಷಾಂತರ ಮೌಲ್ಯದ ಚಿನ್ನಕ್ಕೆ ಕನ್ನ ಹಾಕಿದ ದೇವಳದ ಗುಮಾಸ್ತ ನೌಕರ ಅದನ್ನು ವಿವಿಧ ಬ್ಯಾಂಕು, ಸಹಕಾರಿ ಸಂಘ, ಪೈನಾನ್ಸ್ ಸಂಸ್ಥೆಗಳಲ್ಲಿ ಅಡಮಾನವಿಟ್ಟು ಬಂದ ಹಣದಲ್ಲಿ ಸ್ನೇಹಿತರೊಂದಿಗೆ ನಿತ್ಯ ‘ಎಣ್ಣೆ’ ಪಾರ್ಟಿ ಮಾಡುತ್ತಿದ್ದ ಎಂದು ತನಿಖೆಯ ವೇಳೆ ತಿಳಿದುಬಂದಿದೆ.

kollur_temple_robbery

ಪ್ರಕರಣದ ಹಿನ್ನೆಲೆ:
ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಳದ ಸಿಬ್ಬಂದಿ ಶಿವರಾಮ ಬಿ. ಎಂಬಾತ ದೇವಳದ ಸೇವಾ ಕೌಂಟರ್ 1 ರಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದು, 22/07/2012 ರಿಂದ ಸೇವಾ ಕೌಂಟರ್ ನಲ್ಲಿ ಭಕ್ತಾಧಿಗಳು ನೀಡಿರುವ ಚಿನ್ನ ಮತ್ತು ಬೆಳ್ಳಿಯ ಆಭರಣಗಳಿಗೆ ರಶೀಧಿ ನೀಡಿ ತಾತ್ಕಾಲಿಕವಾಗಿ ಅವರಿಗೆ ನೀಡಲಾಗಿದ್ದ ಗೋದ್ರೇಜ್ ಆಲ್ಮೇರಾದಲ್ಲಿ ಇರಿಸಿ ವಶಕ್ಕೆ ಇಟ್ಟುಕೊಂಡು ನಂತರ ಕಾರ್ಯನಿರ್ವಹಣಾಧಿಕಾರಿಯವರ ವಶಕ್ಕೆ ಹಸ್ತಾಂತರಕ್ಕೆ ನೀಡದೇ ಸೇವಾ ಕೌಂಟರ್ ನಲ್ಲಿ ಭಕ್ತಾಧಿಗಳು ನೀಡಿರುವ ಚಿನ್ನ ಮತ್ತು ಬೆಳ್ಳಿಯ ಆಭರಣಗಳನ್ನು ಗೋದ್ರೇಜ್ ಆಲ್ಮೇರಾದಲ್ಲಿ ಇರಿಸಿಕೊಂಡು ಕೀಯನ್ನು ವಶಕ್ಕೆ ಇಟ್ಟುಕೊಂಡು 2016ರ ಫೆ.15 ರಿಂದ ಅನಿಧಿಕೃತ ಗೈರುಹಾಜರಾಗಿದ್ದು, ಶಿವರಾಮನು ದೇವಳಕ್ಕೆ ಸೇರಿದ ಚಿನ್ನಾಭರಣಗಳನ್ನು ದುರುಪಯೋಗಿಸಿಕೊಂಡಿರುವ ಬಗ್ಗೆ ಅನುಮಾನ ಪಟ್ಟ ದೇವಳದ ಕಾರ್ಯನಿರ್ವಹಣಾಧಿಕಾರಿ ಟಿ.ಆರ್ ಉಮಾ ಕೊಲ್ಲೂರು ಪೊಲೀಸ್ ಠಾಣೆಯಲ್ಲಿ ಈತನ ವಿರುದ್ಧ ದೂರು ದಾಖಲಿಸುತ್ತಾರೆ.

Kollur Temple_ Gold_Fruad (3)

ಯಾರೀತ ಶಿವರಾಮ?
ಮೂಲತಃ ಕುಂದಾಪುರದ ಬೆಳ್ಳಾಲದವನಾದ ಶಿವರಾಮ (43) ಹಲವು ವರ್ಷಗಳಿಂದ ಕೊಲ್ಲೂರು ದೇವಳದಲ್ಲಿ ಕೆಲಸ ಮಾಡಿಕೊಂಡಿದ್ದು ಸದ್ಯ ಕೊಲ್ಲೂರು ದೇವಸ್ಥಾನ ವಸತಿ ಗೃಹದಲ್ಲಿ ವಾಸವಿದ್ದಾನೆ. ಈತನ ವಂಚನೆ ಪ್ರಕರಣ ಠಾಣೆ ಮೆಟ್ಟಿಲೇರಿ ದೂರು ದಾಖಲಾಗುತ್ತಿದ್ದಾಂತೆಯೇ ಪೊಲೀಸರು ಅಲರ್ಟ್ ಆಗುತ್ತಾರೆ. ಫೆ. 23ರಂದು 12:15 ಗಂಟೆಗೆ ಕೊಲ್ಲೂರು ಶ್ರೀ ಮೂಕಾಂಬಿಕ ದೇವಸ್ಥಾನದ ವಠಾರದಲ್ಲಿ ವಶಕ್ಕೆ ಪಡೆದು ಠಾಣೆಗೆ ಕರೆದೊಯ್ಯುತ್ತಾರೆ.

ಸುಧೀರ್ಘ ವಿಚಾರಣೆ!
ಠಾಣೆಯಲ್ಲಿ ಈತನ ಸುದೀರ್ಘ ವಿಚಾರಣೆ ನಡೆಸಿದ್ದು ನಂತರ ಕಾರ್ಯನಿರ್ವಹಣಾಧಿಕಾರಿಗಳ ಮುಂದೆ ಕರೆದುಕೊಂಡು ಹೋಗಿ ತನ್ನ ವಶದಲ್ಲಿದ್ದ ಗೋದ್ರೇಜ್ ಕಪಾಟಿನ ಕೀಯನ್ನ ಹಾಜರುಪಡಿಸಿ ಅದರಿಂದ ಕಪಾಟಿನ ಬೀಗವನ್ನು ತೆರೆದಂತೆ ಕಾರ್ಯನಿರ್ವಹಣಾಧಿಕಾರಿರವರು ಪಂಚರ ಸಮಕ್ಷಮದಲ್ಲಿ ಕಪಾಟಿನಲ್ಲಿದ್ದ ಸೊತ್ತುಗಳನ್ನು ಅಜಮಾಯಿಸಲಾಗಿ ಅದರಲ್ಲಿ ಭಕ್ತರು ಹರಕೆ ರೂಪದಲ್ಲಿ ನೀಡಿದ 3,069 ಗ್ರಾಂ ತೂಕದ ಚಿನ್ನದ ಸೊತ್ತುಗಳ ಪೈಕಿ ಸುಮಾರು 2,423 ಗ್ರಾಂ ತೂಕದ ಸುಮಾರು 38 ಚಿನ್ನದ ಒಡವೆಗಳು ಕಾಣೆಯಾಗಿರುವುದು ಕಂಡು ಬಂದಿರುತ್ತದೆ.

ಎಲ್ಲವೂ ಶೋಕಿಗಾಗಿ-ಹೆಂಡಕ್ಕಾಗಿ!
ಬಳಿಕ ಆಪಾದಿತನನ್ನು ವಿಚಾರಿಸಲಾಗಿ ಆತನು ತನಗೆ ಸಂಸಾರದಲ್ಲಿ ತೀವ್ರ ಹಣದ ಅಡಚಣೆಯಿದ್ದು ಹಾಗೂ ಸ್ನೇಹಿತರಿಂದ ಹಾಗೂ ಇತರರಿಂದ ಸಾಲವನ್ನು ಪಡೆದುಕೊಂಡು ಅದನ್ನು ತೀರಿಸಲಾಗದೇ ಸಂಕಷ್ಟದಲ್ಲಿದ್ದು ಈ ಕಾರಣದಿಂದ ಆರ್ಥಿಕ ಮುಗ್ಗಟ್ಟಿನಿಂದ ಪಾರಾಗಲು ಬೇರೆ ದಾರಿ ಕಾಣದೇ ನಾನು ಸೇವಾ ಕೌಂಟರ್ ನಲ್ಲಿ ಭಕ್ತಾಧಿಗಳು ನೀಡಿರುವ ಚಿನ್ನ ಮತ್ತು ಬೆಳ್ಳಿಯ ಆಭರಣಗಳನ್ನು ಗೋದ್ರೇಜ್ ಆಲ್ಮೇರಾದಲ್ಲಿ ಇರಿಸಿದ ಹಲವಾರು ಚಿನ್ನದ ಸರವನ್ನು ತಾನು ಮತ್ತು ತನ್ನ ಸ್ನೇಹಿತರಲ್ಲಿ ತನ್ನ ಸ್ವಂತ ಚಿನ್ನವೆಂದು ಹೇಳಿ ಅವರಿಂದ ಕೊಲ್ಲೂರು ಸೊಸೈಟಿಯಲ್ಲಿ, ಕೊಲ್ಲೂರು ಎಸ್.ಸಿ.ಡಿ.ಸಿ.ಸಿ ಬ್ಯಾಂಕ್ ನಲ್ಲಿ, ಕೊಲ್ಲೂರು ಕೃಷ್ಣ ಫೈನಾನ್ಸ್ ನಲ್ಲಿ, ಅರೆಶಿರೂರು ಸೊಸೈಟಿಯಲ್ಲಿ ಬೈಂದೂರು ಕೃಷ್ಣ ಸೊಸೈಟಿಯಲ್ಲಿ, ಬೈಂದೂರು ಮುತ್ತೂಟ್ ಫೈನಾನ್ಸ್ ನಲ್ಲಿ, ಕುಂದಾಪುರ ಎಸ್.ಸಿ.ಡಿ.ಸಿ.ಸಿ ಬ್ಯಾಂಕ್ ನಲ್ಲಿ, ಕುಂದಾಪುರ ಮುತ್ತೂಟ್ ಸಂಸ್ಥೆಯಲ್ಲಿ ಅಡವಿಟ್ಟಿದ್ದು ಅದರಿಂದ ಬಂದ ಹಣವನ್ನು ತಾನು ಸ್ನೇಹಿತರೊಂದಿಗೆ ಸೇರಿಕೊಂಡು ಮದ್ಯಪಾನಕ್ಕೆ ಹಾಗೂ ಶೋಕಿಗಾಗಿ ಖರ್ಚು ಮಾಡಿದ ಬಗ್ಗೆ ಒಪ್ಪಿಕೊಳ್ಳುತ್ತಾನೆ.

ವಶಪಡಿಸಿಕೊಳ್ಳಲಾದ ಸೊತ್ತುಗಳು :
1) 6 ಲಕ್ಷ ಅಂದಾಜು ಮೌಲ್ಯದ 392 ಗ್ರಾಂ ತೂಕದ ಕೆಂಪು ಮತ್ತು ಹಸಿರು ಬಣ್ಣದ ಹರಳಿನ ಚಿನ್ನದ ನೆಕ್ಲೇಸ್
2) 60,000 ಅಂದಾಜು ಮೌಲ್ಯದ 22 ಗ್ರಾಂ ತೂಕದ ಚಿನ್ನದ ಲಕ್ಷ್ಮೀ ದೇವಿಯ ಪೆಂಡೆಂಟ್
3) 5,85,000 ಅಂದಾಜು ಮೌಲ್ಯದ 217 ಗ್ರಾಂ ತೂಕದ ಹಸಿರು ಹರಳು ಇರುವ ಚಿನ್ನದ ತಾವರೆ ಆಕೃತಿಯ ಹೂವು

ಆರೋಪಿಯೇ ತಿಳಿಸಿದಂತೆ ಕೊಲ್ಲೂರು ಸಹಕಾರಿ ಬ್ಯಾಂಕು, ಕೊಲ್ಲೂರಿನ ಒಂದು ಫೈನಾನ್ಸ್ ನಲ್ಲಿ, ಅರೆಶಿರೂರು ಸೊಸೈಟಿಯಲ್ಲಿ, ಬೈಂದೂರಿನ ಒಂದು ಸೊಸೈಟಿಯಲ್ಲಿ, ಬೈಂದೂರಿನ ಪ್ರತಿಷ್ಟಿತ ಫೈನಾನ್ಸ್ ನಲ್ಲಿ, ಕುಂದಾಪುರದ ಒಂದು ಪ್ರತಿಷ್ಟಿತ ಸಹಕಾರಿ ಬ್ಯಾಂಕ್ ನಲ್ಲಿ, ಮತ್ತು ಕುಂದಾಪುರದಲ್ಲಿನ ಒಂದು ಪ್ರತಿಷ್ಟಿತ ಫೈನಾನ್ಸ್ ನಲ್ಲಿ ಅಡವಿರಿಸಿದ ಹಲವಾರು ಚಿನ್ನಾಭರಣಗಳನ್ನು ವಶಪಡಿಸಿಕೊಳ್ಳಲು ಇನ್ನೂ ಬಾಕಿಯಿದೆ ಎನ್ನಲಾಗಿದೆ. ಅಲ್ಲದೇ ಈ ಕೃತ್ಯದಲ್ಲಿ ಈತನೊಂದಿಗೆ ಬೇರೆ ಯಾರಾದರೂ ಭಾಗಿಯಾಗಿದ್ದಾರೆಯೇ ಎಂಬುದು ತನಿಖೆಯಲ್ಲಿ ಕಂಡುಕೊಳ್ಳಬೇಕಿದೆ.

ಆರೋಪಿ ಪೊಲೀಸ್ ಕಸ್ಟಡಿಗೆ:
ಆರೋಪಿಯನ್ನು ದಸ್ತಗಿರಿ ಕ್ರಮ ಜರುಗಿಸಿ ಕುಂದಾಪುರ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು ನ್ಯಾಯಾಲಯವು ಆರೋಪಿತನ್ನು ದಿನಾಂಕ 03/03/2016 ರವರೆಗೆ 8 ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ನೀಡಿರುತ್ತಾರೆ.

Write A Comment