ಮಂಗಳೂರು: ಹಲವಾರು ಸಂಸ್ಕೃತಿ, ಧರ್ಮಗಳ ನಾಡಾದ ಭಾರತದಲ್ಲಿ ವೃಕ್ಷಗಳಿಗೂ ಪೂಜನೀಯ ಸ್ಥಾನವಿದೆ. ದೈವಿಕ ಶಕ್ತಿಗೆ ಮನ್ನಣೆ ನೀಡುವ ಈ ನಾಡಿನ ಬಗ್ಗೆ ವಿಶ್ವದ ಜನತೆಗೆ ಕುತೂಹಲವಿದೆ.
ಭಾರತದಾದ್ಯಂತ ಆಚರಿಸಿಕೊಂಡು ಬರುತ್ತಿರುವ ವಿವಿಧ ಧರ್ಮಗಳ, ವಿವಿಧ ದೇವತೆಗಳ ಬಗ್ಗೆ ಭಕ್ತಿ, ಆಚರಣೆ ಹಾಗೂ ನಂಬಿಕೆಗಳ ಬಗ್ಗೆ ಸಾವಿರಾರು ಕುರುಹುಗಳು ಇಂದಿಗೂ ಮಂದಿರ ಹಾಗೂ ವಾಸ್ತುಶಿಲ್ಪಗಳಲ್ಲಿ ಕಂಡುಬರುತ್ತವೆ. ಕೆಲವು ಆಯಾ ರಾಜ್ಯ ಹಾಗೂ ಪ್ರಾಂತಗಳಿಗೆ ಸೀಮಿತವಾಗಿದ್ದರೆ ಕೆಲವು ದೇಶದಾದ್ಯಂತ ಸಮಾನವಾಗಿವೆ.
ಪೂಜನೀಯ ಸ್ಥಾನ ಪಡೆದಿರುವ ಹಲವು ವೃಕ್ಷಗಳು ನಾಡಿನಾದ್ಯಂತ ಜನರಿಗೆ ಪವಿತ್ರವಾಗಿವೆ. ‘ಕಲ್ಪವೃಕ್ಷ’ಎಂದು ನಂಬಲಾಗುವ ಈ ವೃಕ್ಷಗಳು ಕೇವಲ ಧಾರ್ಮಿಕ ಮಹತ್ವ ಮಾತ್ರವಲ್ಲದೇ ತಮ್ಮ ರೋಗಪರಿಹಾರಕ ಗುಣಗಳಿಂದಲೂ ಜನರಿಗೆ ಆಪ್ತವಾಗಿವೆ. ಈ ಪಟ್ಟಿಯಲ್ಲಿ ಪ್ರಮುಖವಾಗಿರುವ ಐದು ವೃಕ್ಷಗಳನ್ನು ಇಲ್ಲಿ ಉಲ್ಲೇಖಿಸಲಾಗಿದೆ.
ಬಿಲ್ವಪತ್ರೆ: ಶಿವನಿಗೆ ಅತ್ಯಂತ ಪ್ರಿಯವಾದ ಈ ವೃಕ್ಷದ ಎಲೆಯನ್ನು ಅರ್ಪಿಸುವುದರಿಂದ ಶಿವನ ಅನುಗ್ರಹಕ್ಕೆ ಪಾತ್ರರಾಗಬಹುದು ಎಂಬ ನಂಬಿಕೆಯಿದೆ. ಈ ಮರದ ಎಲೆಯಲ್ಲಿ ಮೂರು ದಳಗಳಿವೆ. ಸೃಷ್ಟಿ, ಸಂರಕ್ಷಣೆ ಹಾಗೂ ವಿನಾಶವನ್ನು ಈ ದಳಗಳು ಪ್ರತಿನಿಧಿಸುತ್ತವೆ ಎಂದು ನಂಬಲಾಗಿದೆ.
ಬಿದಿರು: ಶ್ರೀಕೃಷ್ಣನ ಕೊಳಲು ಬಿದಿರಿನಿಂದ ತಯಾರಿಸಿದ್ದುದರಿಂದ ಬಿದಿರು ಮೆಳೆಯನ್ನು ಕೃಷ್ಣ ಪರಮಾತ್ಮನ ನೆಚ್ಚಿನ ವೃಕ್ಷವೆಂದು ಪರಿಗಣಿಸಲಾಗುತ್ತದೆ.
ಶ್ರೀಗಂಧದ ಮರ :ಸುವಾಸನೆ ಹಾಗೂ ಸೌಂದರ್ಯವರ್ಧಕವಾಗಿರುವ ಶ್ರೀಗಂಧದ ಮರವನ್ನು ಪಾರ್ವತಿಯ ನೆಚ್ಚಿನ ಮರವೆಂದು ಹೇಳಲಾಗಿದೆ. ಪಾರ್ವತಿ ಶ್ರೀಗಂಧದ ಕೊರಡನ್ನು ತನ್ನ ಬೆವರಿನೊಂದಿಗೆ ತೇದ ಬಳಿಕ ಪ್ರಾಪ್ತವಾದ ಅರೆಘನರೂಪದ ದ್ರಾವಣದಿಂದ ಗಣೇಶನನ್ನು ಸೃಷ್ಟಿಸಿದಳು ಎನ್ನಲಾಗುತ್ತದೆ. ಈ ನಂಬಿಕೆಯಿಂದ ಇಂದಿಗೂ ಶ್ರೀಗಂಧದ ದ್ರಾವಣವನ್ನು ಹಲವು ದೇವದೇವತೆಗಳ ಪೂಜೆಯಲ್ಲಿ ಬಳಸಲಾಗುತ್ತಿದೆ
ಭಾಂಗ್ ಮರ: ಶಿವಾಲಯಗಳಿರುವಲ್ಲಿ ಸಾಧುಗಳು ಭಾಂಗ್ ಮರದ ಎಲೆಗಳಿಂದ ಹೊಗೆಸೇವನೆ ಮಾಡುತ್ತಿರುವುದನ್ನು ನೋಡಬಹುದು. ಈ ಮರದ ಎಲೆಗಳು ಅಮಲು ಬರಿಸಿದರೂ ಆವರಣದಲ್ಲಿ ಈ ಮರವಿರುವ ಮನೆಯಲ್ಲಿ ಸದಾ ಸಮೃದ್ಧಿ ಹಾಗೂ ಸಂಪತ್ತು ತುಳುಕುತ್ತಿರುತ್ತದೆ ಎಂದು ನಂಬಲಾಗುತ್ತದೆ. ಮಹಾಶಿವರಾತ್ರಿಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಈ ಮರದ ಎಲೆಗಳನ್ನು ಶಿವನಿಗೆ ಅರ್ಪಿಸಲಾಗುತ್ತದೆ. ಅಲ್ಲದೇ ಪ್ರಸಾದವನ್ನು ತಯಾರಿಸಲೂ ಈ ಎಲೆಗಳನ್ನು ಬಳಸಲಾಗುತ್ತದೆ
ಕಲ್ಪವೃಕ್ಷ ಅಥವಾ ತೆಂಗಿನಮರ: ಕರಾವಳಿಯಲ್ಲಿ ಸಮೃದ್ಧವಾಗಿರುವ ತೆಂಗಿನಮರವನ್ನು ಕಡಿಯುವುದು ಅಪಶಕುನ ಎಂದು ಭಾರತದೆಲ್ಲೆಡೆ ನಂಬಲಾಗುತ್ತದೆ. ಈ ವೃಕ್ಷ ಮನೆಯ ಆವರಣದಲ್ಲಿರುವುದು ಶಾಂತಿ ಹಾಗೂ ಸಮೃದ್ಧಿಯ ಸಂಕೇತ ಎಂದು ನಂಬಲಾಗುತ್ತದೆ. ಶಿವನ ಪ್ರತಿನಿಧಿ ಎಂದು ನಂಬಲಾಗುವ ಈ ವೃಕ್ಷದ ಪ್ರತಿಯೊಂದೂ ಭಾಗಗಳು ಹಲವಾರು ಉಪಯೋಗಕ್ಕೆ ಬರುತ್ತವೆ. ತೆಂಗಿನ ಕಾಯಿ ಇಲ್ಲದೆ ಯಾವ ಪೂಜೆಯೂ ನಡೆಯದು. ಮರವಿರುವೆಡೆ ಮನೆ ಕಟ್ಟಿಸಬೇಕಾದರೆ ಮರವನ್ನು ಉರುಳಿಸದೇ ಮರವನ್ನು ಮನೆಯೊಳಗೇ ಬರುವಂತೆ ಕಟ್ಟಿಸುವುದು ಭಾರತೀಯರು ಈ ವೃಕ್ಷದ ಬಗ್ಗೆ ಇಟ್ಟಿರುವ ನಂಬಿಕೆಗೆ ಸಾಕ್ಷಿಯಾಗಿದೆ
Comments are closed.