ಚಿತ್ರದುರ್ಗ: ಮೊಳಕಾಲ್ಮೂರು ಬಿಜೆಪಿ ಅಭ್ಯರ್ಥಿ ಶ್ರೀರಾಮುಲು ವಿರುದ್ಧ ಶಾಸಕ ತಿಪ್ಪೇಸ್ವಾಮಿ ಬೆಂಬಲಿಗರು ಆಕ್ರೋಶಗೊಂಡು ಕಲ್ಲು ತೂರಾಟ ನಡೆಸಿದ್ದಾರೆ. ನಾಯಕನಹಟ್ಟಿ ತಿಪ್ಪೇರುದ್ರ ಸ್ವಾಮಿಯ ದೇವಾಲಯದಲ್ಲಿ ಪೂಜೆ ಸಲ್ಲಿಸಿ ಪ್ರಚಾರ ಮಾಡಲು ಆಗಮಿಸಿದ ಶ್ರೀರಾಮಲುಗೆ ಶಾಸಕ ತಿಪ್ಪೇಸ್ವಾಮಿ ಬೆಂಬಲಿಗರು ಕಲ್ಲು, ಚಪ್ಪಲಿ, ಪೊರಕೆಯ ಸ್ವಾಗತ ನೀಡಿದ್ದಾರೆ.
ಗ್ರಾಮಕ್ಕೆ ಆಗಮಿಸುತ್ತಿದ್ದಂತೆ ಶ್ರೀರಾಮುಲು ಅವರನ್ನು ಸುತ್ತುವರಿದ ತಿಪ್ಪೇಸ್ವಾಮಿ ಬೆಂಬಲಿಗರು ಪ್ರತಿಭಟನೆಯ ಬಿಸಿಯನ್ನು ಮುಟ್ಟಿಸಿದ್ದಾರೆ. ಕೆಲವು ಗಂಡಸರು ಚಪ್ಪಲಿ ತೋರಿಸಿದರೆ, ಕೆಲವು ಹೆಂಗಸರು ಪೊರಕೆಯನ್ನು ಎತ್ತಿ ತೋರಿಸಿ ಆಕ್ರೋಶ ವ್ಯಕ್ತಪಡಿಸಿದರು. ಪೋಲೀಸರು ಪ್ರತಿಭಟನಾಕಾರರನ್ನು ಸಮಾಧಾನಪಡಿಸಲು ಪ್ರಯತ್ನಿಸಿದರೂ ಆಕ್ರೋಶ ತಡೆಯಲು ಸಾಧ್ಯವಗಲಿಲ್ಲ. ಹೀಗಾಗಿ ಪರಿಸ್ಥಿತಿ ನಿಯಂತ್ರಿಸಲು ಲಘು ಲಾಠಿ ಪ್ರಹಾರವನ್ನು ಮಾಡಿದರು.
ಪೋಲಿಸರನ್ನು ಲೆಕ್ಕಿಸದೆ ಶ್ರೀರಾಮುಲು ಹೋಗುತ್ತಿದ್ದ ಕಾರಿನ ಮೇಲೆ ಬಿಜೆಪಿ ಭಿನ್ನಮತೀಯರು ಕಲ್ಲು ತೂರಿದರು. ಶ್ರೀರಾಮುಲು ಬೆಂಬಲಿಗರ ಮೇಲೆ ಕಲ್ಲು, ಇಟ್ಟಿಗೆ, ತೆಂಗಿನ ಕಾಯಿ ತೂರಾಟ ಮಾಡಿದರು. ಶ್ರೀರಾಮುಲು ಅವರು ಮೊಳಕಾಲ್ಮೂರು ಕ್ಷೇತ್ರದಿಂದ ಸ್ಪರ್ಧೆ ಮಾಡಬಾರದು. ತಿಪ್ಪೇಸ್ವಾಮಿ ಅವರಿಗೆ ಬಿಟ್ಟುಕೊಡಬೇಕು ಎಂದು ಆಕ್ರೋಷ ವ್ಯಕ್ತಪಡಿಸಿದರು.
Comments are closed.