ಕರ್ನಾಟಕ

ಜನರಿಗೆ ಹೇರ್‌ ಕಟಿಂಗ್‌ ಫ್ರೀ, ಪ್ರೇಮಿಗಳ ದಿನ ಸರ್ಕಾರಿ ರಜೆ

Pinterest LinkedIn Tumblr


ಬೆಂಗಳೂರು: ನಗರ ವೀಕ್ಷಣೆಗೆ ಅಗ್ಗದ ದರದಲ್ಲಿ ಹೆಲಿಕಾಪ್ಟರ್‌ ಭಾಗ್ಯ, ಬಡ ಮತ್ತು ಮಧ್ಯಮ ವರ್ಗದವರಿಗೆ ಉಚಿತ ಹೇರ್‌ ಕಟಿಂಗ್‌-ಶೇವಿಂಗ್‌, ಕತ್ತೆಗಳು ಮತ್ತು ಎಮ್ಮೆಗಳ ಅಭಿವೃದ್ಧಿ ಮಂಡಳಿ ರಚನೆ, ಪ್ರೇಮಿಗಳ ದಿನಾಚರಣೆಗೆ ಸರ್ಕಾರಿ ರಜೆ ಘೋಷಣೆ, ಕನ್ನಡ ಚಿತ್ರಪ್ರದರ್ಶನ ಕಡ್ಡಾಯ…

-ಇವು ಕನ್ನಡ ಚಳವಳಿ ವಾಟಾಳ್‌ ಪಕ್ಷ ಬಿಡುಗಡೆ ಮಾಡಿದ ಚುನಾವಣಾ ಪ್ರಣಾಳಿಕೆಯ ಪ್ರಮುಖ ಅಂಶಗಳು.

ನಗರದ ಹೋಟೆಲ್‌ ವುಡ್‌ಲ್ಯಾಂಡ್ಸ್‌ನಲ್ಲಿ ಬುಧ ವಾರ ಪಕ್ಷದ ಚುನಾವಣಾ ಪ್ರಣಾಳಿಕೆ ಬಿಡುಗಡೆ ಮಾಡಿದ ಅಧ್ಯಕ್ಷ ಹಾಗೂ ಚಾಮರಾಜನಗರದ ಅಭ್ಯರ್ಥಿ ವಾಟಾಳ್‌ ನಾಗರಾಜ್‌, ಹಲವು ವಿಭಿನ್ನ ಭರವಸೆಗಳ ಜತೆಗೆ ಮತದಾರರು ತಮ್ಮ ಕೈಹಿಡಿದರೆ ಚಾಮರಾಜನಗರದ ಸಮಗ್ರ ಅಭಿವೃದ್ಧಿ ಮಾಡುವುದಾಗಿ ಹೇಳಿದರು.

ಸಾಮಾನ್ಯವಾಗಿ ಪ್ರತಿಭಟನೆಗಳಿಗೆ ಪ್ರಾಣಿಗಳನ್ನು ಬಳಸುವ ವಾಟಾಳ್‌ ನಾಗರಾಜ್‌, ತಮ್ಮ ಪ್ರಣಾಳಿಕೆಯಲ್ಲಿ ಕತ್ತೆ, ಎಮ್ಮೆಗಳಿಗೆ ಹೆಚ್ಚು ಒತ್ತು ನೀಡಿದ್ದಾರೆ. ಕತ್ತೆಗಳು ಧರ್ಮದೇವತೆ ಇದ್ದಂತೆ. ಅವುಗಳ ಅಭಿವೃದ್ಧಿಗಾಗಿ ವಿಶೇಷ ಮಂಡಳಿ ಹಾಗೂ ಎಮ್ಮೆಗಳ ಸಮಗ್ರ ಅಭಿವೃದ್ಧಿಗೆ ವಿಶೇಷ ಯೋಜನೆ ರೂಪಿಸಲಾಗುವುದು ಎಂದು ಭರವಸೆ ನೀಡಿದ್ದಾರೆ.

ಪ್ರೇಮ ವಿವಾಹಕ್ಕೆ 50 ಸಾವಿರ ರೂ.ನೆರವು: ಐತಿಹಾಸಿಕ ಬೆಂಗಳೂರು ನಗರದ ವೈಭವವನ್ನು ವೀಕ್ಷಿಸಲು ಪ್ರವಾಸಿಗರಿಗೆ ಕಡಿಮೆ ದರದಲ್ಲಿ ಹೆಲಿಕಾಪ್ಟರ್‌ ವ್ಯವಸ್ಥೆ ಕಲ್ಪಿಸಲಾಗುವುದು. ಪ್ರೇಮಿಗಳ ದಿನದಂದು ಸರ್ಕಾರಿ ರಜೆ ಘೋಷಣೆ ಜತೆಗೆ ಪ್ರೇಮ ವಿವಾಹಕ್ಕೆ ಸರ್ಕಾರದಿಂದ 50 ಸಾವಿರ ರೂ. ನೆರವು ನೀಡುವಂತೆ ಸರ್ಕಾರದ ಮೇಲೆ ಒತ್ತಡ ತರಲಾಗು ವುದು ಎಂದರು.

ಜತೆಗೆ, ಬಯಲುಸೀಮೆಗೆ ಶಾಶ್ವತ ಕುಡಿಯುವ ನೀರಿನ ವ್ಯವಸ್ಥೆ, ಕಳಸಾ-ಬಂಡೂರಿ ಯೋಜನೆ ಜಾರಿ, ಕಾವೇರಿ ನೀರು ನಿರ್ವಹಣಾ ಮಂಡಳಿ ರಚನೆ ವಿರುದ್ಧ ಹೋರಾಟವು ಪಕ್ಷದ ಆದ್ಯತೆ ಆಗಲಿದೆ ಎಂದರು.

ಮೌಡ್ಯ ಬೆಂಬಲಿಸಿದ ಪ್ರಧಾನಿ: ವಾಟಾಳ್‌
ಪ್ರಧಾನಿ ಮೋದಿ ಅವರು ಚಾಮರಾಜನಗರಕ್ಕೆ ತೆರಳದೆ, ಸಂತೆಮರಹಳ್ಳಿಯಿಂದಲೇ ಹಿಂತಿರುಗಿರುವ ಮೂಲಕ ಮೌಡ್ಯವನ್ನು ಬೆಂಬಲಿಸಿದಂತಾಗಿದೆ ಎಂದು ವಾಟಾಳ್‌ ನಾಗರಾಜ್‌ ಆರೋಪಿಸಿದರು. ಚಾಮರಾಜನಗರಕ್ಕೆ ಹೋದವರು ಅಧಿಕಾರ ಕಳೆದುಕೊಳ್ಳುತ್ತಾರೆ ಎಂಬ ಮೂಢನಂಬಿಕೆ ಇದೆ. ಇದಕ್ಕೆ ಪೂರಕವಾಗಿ ಮಂಗಳವಾರ ಪ್ರಧಾನಿ ಮೋದಿ ಅವರು ಚಾಮರಾಜನಗರಕ್ಕೆ ಹೋಗದೆ, ಹಾಗೇ ಹಿಂದಿರುಗಿದ್ದಾರೆ. ಇದರಿಂದ ಮೂಢನಂಬಿಕೆ ಹೆಚ್ಚಿಸಿದಂತಾಗಿದೆ. ಇದು ಪ್ರಜಾಪ್ರಭುತ್ವಕ್ಕೆ ಮಾಡಿದ ಅಪಮಾನ ಎಂದು ದೂರಿದರು.

-Udayavani

Comments are closed.