ತುಮಕೂರು: ‘ಎತ್ತಿನಹೊಳೆ ಯೋಜನೆ ಪೂರ್ಣಗೊಳಿಸಿ ತುಮಕೂರಿನ ಜನರಿಗೆ ಕುಡಿಯುವ ನೀರು ಕೊಡಲು ಕಾಂಗ್ರೆಸ್ ಸರ್ಕಾರಕ್ಕೆ ಯಾಕೆ ಇನ್ನೂ ಸಾಧ್ಯವಾಗಿಲ್ಲ’ ಎಂದು ಪ್ರಧಾನಿ ಮೋದಿ ಪ್ರಶ್ನಿಸಿದರು.
ತುಮಕೂರಿನಲ್ಲಿ ನಡೆದ ಚುನಾವಣಾ ಪ್ರಚಾರ ಸಮಾವೇಶದಲ್ಲಿ ಮಾತನಾಡಿದ ಅವರು, ‘ಇಷ್ಟು ವರ್ಷಗಳಿಂದ ನನೆಗುದಿಗೆ ಬಿದ್ದಿರುವ ನೀರಾವರಿ ಯೋಜನೆಗಳನ್ನು ಒಂದು ಲಕ್ಷ ಕೋಟಿ ರೂಪಾಯಿಗಳಿಗಿಂತ ಹೆಚ್ಚು ಖರ್ಚು ಮಾಡಿ ಪೂರ್ಣಗೊಳಿಸಲು ನಾವು ಕ್ರಮ ಕೈಗೊಂಡಿದ್ದೇವೆ. 24 ಲಕ್ಷ ಹೆಕ್ಟೇರ್ ಕೃಷಿಭೂಮಿಗೆ ಸಣ್ಣನೀರಾವರಿ ಯೋಜನೆ ಕಲ್ಪಿಸಿದ್ದೇವೆ’ ಎಂದು ಮಾಹಿತಿ ನೀಡಿದರು.
‘ಅಧಿಕಾರಕ್ಕೆ ಬಂದರೆ ಹೇಮಾವತಿ ಮತ್ತು ನೇತ್ರಾವತಿ ನದಿಗಳನ್ನು ಜೋಡಣೆ ಮಾಡುತ್ತೇವೆ’ ಎಂದು ಭರವಸೆ ನೀಡಿದರು.
‘ಈ ಭಾಗವನ್ನು ಕಲ್ಪತರು ನಾಡು ಅನ್ನುತ್ತೇವೆ. ಪ್ರಕೃತಿಗೆ ವಿರುದ್ಧವಾಗಿ ಯಾರೂ ನಡೆಯಲಾಗದು. ಆದರೆ ಪ್ರಕೃತಿ ಮುನಿಸಿಕೊಂಡ ಸಂದರ್ಭದಲ್ಲಿ ಸರ್ಕಾರ ರೈತರ ನೆರವಿಗೆ ಬರಬೇಕು.
‘ನಾವು ಅಧಿಕಾರಕ್ಕೆ ಬಂದ ಬಳಿಕ ತೆಂಗು ರಫ್ತಿನಲ್ಲಿ ಶೇಕಡ 60ರಷ್ಟು ಹೆಚ್ಚಳ ಮಾಡಿದ್ದೇವೆ. ಇಲ್ಲಿನ ರೈತರಿಗೆ ನೆರವಾಗಿದ್ದೇವೆ. ಇಲ್ಲಿನ ಯುವಕರ ಪ್ರತಿಭೆಯನ್ನು ಹೇಗೆ ಬಳಸಿಕೊಳ್ಳಬೇಕೆಂಬುದೂ ಬೆಂಗಳೂರಿನಲ್ಲಿ ಕುಳಿತ ಕಾಂಗ್ರೆಸ್ ಸರ್ಕಾರಕ್ಕೆ ಗೊತ್ತಿಲ್ಲ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.
‘ಸ್ಮಾರ್ಟ್ ಸಿಟಿ ಯೋಜನೆಯಲ್ಲಿ ತುಮಕೂರು ಸಹ ಸೇರಿದೆ. ಕರ್ನಾಟಕದ ಸ್ಮಾರ್ಟ್ ಸಿಟಿ ಯೋಜನೆಗಾಗಿ ಕೇಂದ್ರ ₹14,000 ಕೋಟಿ ಬಿಡುಗಡೆ ಮಾಡಿದೆ. ಇಲ್ಲಿನ ಸರ್ಕಾರ ಅದನ್ನು ಬಳಸದೆ ಮಂತ್ರಿಗಳ ತಿಜೋರಿ ತುಂಬಿಸುವುದರಲ್ಲಿ ನಿರತವಾಗಿದೆ’ ಎಂದು ಆರೋಪಿಸಿದರು.
Comments are closed.