ಕರಾವಳಿ

ಜೆ.ಆರ್.ಲೋಬೊರವರ ಜನಪ್ರಿಯತೆ ಸಹಿಸದೇ ವಿರೋಧ ಪಕ್ಷದಿಂದ ವಾಮಾಚಾರ : ಮಹಾಬಲ ಮಾರ್ಲ ಆರೋಪ

Pinterest LinkedIn Tumblr

ಮಂಗಳೂರು : ಕಳೆದ 5 ವರ್ಷಗಳ ಅವಧಿಯಲ್ಲಿ ಮಂಗಳೂರು ನಗರದಲ್ಲಿ ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಜೆ.ಆರ್. ಲೋಬೊ ಮಾಡಿದ ಅಭಿವೃದ್ಧಿಯು ಜನಮನ್ನಣೆಯನ್ನು ಗಳಿಸಿದೆ. ಇವರ ಜನಪ್ರಿಯತೆಯನ್ನು ಸಹಿಸದ ವಿರೋಧಿಗಳು ಜೆ.ಆರ್. ಲೋಬೊ ವಿರುದ್ದ ವಾಮಾಚಾರ ಮಾಡುವ ಮೂಲಕ ಅವರು ವಿಕೃತ ಮನಸನ್ನು ತೊರ್ಪಡಿಸಿದ್ದಾರೆ ಎಂದು ಕಾಂಗ್ರೆಸ್ ಪಕ್ಷದ ವಕ್ತಾರ ಮಾಜಿ ಮೇಯರ್ ಮಹಾಬಲ ಮಾರ್ಲ ಆರೋಪಿಸಿದ್ದಾರೆ.

ಪಕ್ಷದ ಕಚೇರಿಯಲ್ಲಿಂದು ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಜೆ.ಆರ್. ಲೋಬೊ ಅವರ ಜನಪರ ಒಲವನ್ನು ಅರಿತ ಮತ್ತು ಸೋಲಿನ ಭೀತಿಯಿಂದ ಕೇರಳ ಮೂಲದ ಮಂತ್ರವಾದಿಗಳನ್ನು ಕರೆದು ತಂದು ವಾಮಾಚಾರದ ಮಾಡುವುದರ ಮೂಲಕ ಜೆ.ಆರ್. ಲೋಬೊ ರವರನ್ನು ವಾಮಾಚಾರದ ಮೂಲಕ ಅವರ ಆರೋಗ್ಯಕ್ಕೆ ಹಾನಿ ಮತ್ತು ಸೋಲಿಸಲು ಹುನ್ನಾರ ನಡೆಸಲಾಗಿದೆ ಎಂದು ದೂರಿದರು.

ನಂದಿಗುಡ್ಡ ಸ್ಮಶಾನದಲ್ಲಿ ವಾಮಾಚಾರ ಮಾಡಿದ ಬಗ್ಗೆ ಪೂರಕ ಪರಿಕರಗಳು ಪತ್ತೆಯಾಗಿದ್ದು, ಇದು ಮರದಿಂದ ಮನುಷ್ಯನ ರೂಪ ಮಾಡಿ ಮಲಯಾಲಂ ಭಾಷೆಯಲ್ಲಿ ಜೆ.ಆರ್. ಲೋಬೊ ರವರ ಹೆಸರನ್ನು ಬರೆದ ಕಾಗದವನ್ನು ಇಟ್ಟು ಕಬ್ಬಿಣದ ಮೊಳೆಯನ್ನು ಹೊಡೆದು ಕೆಂಪು ನೂಲಿನಿಂದ ಕಟ್ಟಿದ್ದಾಗಿರುತ್ತದೆ. ಇದು ಸಿಕ್ಕಿದ ಕೂಡಲೇ ಅಲ್ಲಿಗೆ ವಿಚಾರವಾದಿ ಪ್ರೊ. ನರೇಂದ್ರ ನಾಯಕ್ ಆಗಮಿಸಿ ಈ ಪರಿಕರವನ್ನು ಪೋಲಿಸರು ಹಾಗೂ ಸಾರ್ವಜನಿಕರ ಮುಂದೆ ಸ್ಮಶಾನ ವಾಮಾಚಾರದಲ್ಲಿಯೇ ಬಿಚ್ಚಿಸಿ ಅದನ್ನು ತೋರಿಸಿರುತ್ತಾರೆ.
ವಿರೋಧ ಪಕ್ಷದವರಿಗೆ ಪ್ರಜಾಪ್ರಭುತ್ವ ವ್ಯವಸ್ಥೆಯ ಮೇಲೆ ಮತ್ತು ನಮ್ಮ ಸಂವಿಧಾನದ ಮೇಲೆ ಮತ್ತು ದೈವ ದೇವರುಗಳ ಮೇಲೆ ನಂಬಿಕೆ ಇಲ್ಲ ಎಂಬುದನ್ನು ತೋರಿಸಿಕೊಟ್ಟಿದ್ದಾರೆ.

ಜೆ.ಆರ್. ಲೋಬೊ ರವರು ಅವರ ಕ್ಷೇತ್ರದ ಅನೇಕ ದೇವಸ್ಥಾನ ಮತ್ತು ದೈವಸ್ಥಾನಗಳ ಅಭಿವೃದ್ಧಿ ಮಾಡಲು ಅನುದಾನವನ್ನು ನೀಡಿದ್ದು ಹಾಗೂ ನಗರದ ಪ್ರಮುಖ ಸ್ಮಶಾನಗಳ ಅಭಿವೃದ್ಧಿಯನ್ನು ಮಾಡಿದ್ದು ತಾನೊಬ್ಬ ಜಾತ್ಯಾತೀತ ವ್ಯಕ್ತಿಯಾಗಿರುವುದನ್ನು ಸಾಬೀತುಪಡಿಸಿದ್ದಾರೆ.

ದೇವರ ಅನುಗ್ರಹ ಇರುವ ಕಾರಣದಿಂದ ಈ ವಾಮಚಾರ ಪ್ರಕರಣ ಪತ್ತೆಯಾಯಿತು. ಈ ಬಗ್ಗೆ ಸಾರ್ವಜನಿಕರು ಹಾಗೂ ಹಿಂದು ಸಮಾಜದ ಹಿತೈಷಿಗಳು ಶಾಸಕರನ್ನು ಭೇಟಿಯಾಗಿ ವಾಮಮಾರ್ಗದಲ್ಲಿ ಚುನಾವಣೆಯನ್ನು ಎದುರಿಸುತ್ತಿರುವವರಿಗೆ ಖಂಡಿತ ದೇವರೇ ಶಿಕ್ಷೆ ನೀಡುತ್ತಾರೆ. ಎಂದು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿ ನಿಮ್ಮೊಂದಿಗೆ ನಾವು ಮತ್ತು ಕ್ಷೇತ್ರದ ಸಜ್ಜನ ಬಂಧುಗಳು ಇದ್ದಾರೆ ಎಂದು ಧೈರ್ಯ ತುಂಬಿದ್ದಾರೆ.

ಅದಲ್ಲದೇ ಅವರ ಹಿಂದೂ ಹಿತೈಷಿಗಳು, ಹಿರಿಯ ವ್ಯಕ್ತಿಗಳು ಅನೇಕ ದೇವಸ್ಥಾನಗಳಿಗೆ ತೆರಳಿ ಭಕ್ತಿಯಿಂದ ಪೂಜೆ ಸಲ್ಲಿಸಿದ್ದಾರೆ. ಪೊಳಲಿ ರಾಜರಾಜೇಶ್ವರಿ ದೇವಸ್ಥಾನ, ಮಂಗಳಾದೇವಿ, ಕದ್ರಿ ಮಂಜುನಾಥೇಶ್ವರ ದೇವಸ್ಥಾನ, ಕುದ್ರೋಳಿ ಗೊಕರ್ಣನಾಥೇಶ್ವರ ದೇವಸ್ಥಾನ, ಶರವು ಮಹಾಗಣಪತಿ ದೇವಸ್ಥಾನ, ಕಾರ್ಸ್ಟ್ರೀಟ್ ವೆಂಕಟರಮಣ ದೇವಸ್ಥಾನ, ಉರ್ವ ಮಾರಿಗುಡಿ ದೇವಸ್ಥಾನದಲ್ಲಿ ಭಕ್ತಿಯಿಂದ ದೇವರಲ್ಲಿ ಪ್ರಾರ್ಥನೆಯನ್ನು ಮಾಡಿದ್ದಾರೆ ಅಲ್ಲದೇ ಇಂತಹ ದುಷ್ಕ್ರತ್ಯವನ್ನು ರಾಜಕೀಯವಾಗಿ ಅಥವಾ ಇನ್ನೀತರ ಯಾವುದೇ ವಿಷಯಗಳಿಗೆ ಮಾಡದಿರುವಂತೆ ಭಗವಂತನು ಅವರಿಗೆ ಒಳ್ಳೆಯ ಬುದ್ದಿಯನ್ನು ಕೊಡಲಿ ಎಂದು ದೇವರಲ್ಲಿ ಬೇಡಿರುತ್ತಾರೆ ಎಂದು ಮಾರ್ಲಾ ಹೇಳಿದರು.

ಈ ವಾಮಾಚಾರವನ್ನು ಸರಕಾರಿ ಸಾರ್ವಜನಿಕ ಸ್ಮಶಾನದ ಒಳಗಡೆ ಮಾಡಿದ್ದು, ಕಾನೂನು ಬಾಹಿರವಾಗಿದ್ದು, ಈ ಕೃತ್ಯದ ಬಗ್ಗೆ ಸೂಕ್ತ ತನಿಖೆ ನಡೆಸಿ, ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವಂತೆ ಮನಪಾ ಸದಸ್ಯೆ ಶೈಲಜಾರವರು ಚುನಾವಣಾ ಆಯೋಗ ಹಾಗೂ ಪೋಲಿಸ್ ಠಾಣೆಯಲ್ಲಿ ದೂರು ನೀಡಿರುತ್ತಾರೆ ಎಂದು ಮಹಾಬಲ ಮಾರ್ಲಾ ಅವರು ತಿಳಿಸಿದರು.

ಪಕ್ಷದ ಪ್ರಮುಖರಾದ ಟಿ.ಕೆ ಸುಧೀರ್, ಕಾರ್ಪೊರೇಟರ್ ಪ್ರಕಾಶ್ ಸಾಲಿಯಾನ್, ಅಪ್ಪಿ ಮುಂತಾದವರು ಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

Comments are closed.