ಮುಂಬೈ

ನಸುಕಿನ ಜಾವ 3.30ರವರೆಗೆ ಕೋರ್ಟ್ ಕಲಾಪ ನಡೆಸಿದ ಬಾಂಬೆ ಹೈಕೋರ್ಟ್ ಜಡ್ಜ್

Pinterest LinkedIn Tumblr


ಮುಂಬಯಿ: ಸರಕಾರಿ ಕೆಲಸ ಅಂದರೆ ಮೂಗು ಮುರಿಯುವವರೇ ಹೆಚ್ಚು. ಕೆಲಸದ ಅವಧಿ ಮುಗಿಯುತ್ತಿದ್ದಂತೆ ಜಾಗ ಖಾಲಿ ಮಾಡಿ ಬಿಡುತ್ತಾರೆ. ಆದರೆ, ಬಾಂಬೆ ಹೈಕೋರ್ಟ್ ಜಡ್ಜ್ ಒಬ್ಬರು ನಸುಕಿನ ಜಾವ 3.30ರವರೆಗೆ ಕೆಲಸ ಮಾಡಿ ಕೇಸ್‌ಗಳನ್ನು ಕ್ಲಿಯರ್ ಮಾಡಿದ್ದು ಅಚ್ಚರಿ ಮೂಡಿಸಿದ್ದಾರೆ.

ಬಾಂಬೆ ಹೈಕೋರ್ಟ್‌ನಲ್ಲಿ ಈಗ ಬೇಸಿಗೆ ಕಾಲದ ರಜೆ ಘೋಷಿಸಲಾಗಿದೆ. ಈ ಹಿನ್ನೆಲೆ ಇದಕ್ಕೂ ಮುನ್ನ ಜಸ್ಟೀಸ್ ಶಾರುಖ್‌ ಕಥಾವಾಲ್ಲಾ ಶುಕ್ರವಾರ ನಸುಕಿನ ಜಾವ 3.30ರವರೆಗೆ ಕೋರ್ಟ್‌ನಲ್ಲೇ ಇದ್ದು, ನೂರಕ್ಕೂ ಅಧಿಕ ಕೇಸ್‌ಗಳನ್ನು ಯಾವುದೇ ಬ್ರೇಕ್ ತೆಗೆದುಕೊಳ್ಳದೆ ಕ್ಲಿಯರ್ ಮಾಡಿದ್ದಾರೆ. ಅವರಿಗೆ 134 ಕೇಸ್‌ಗಳನ್ನು ನೀಡಲಾಗಿತ್ತು. ಈ ಪೈಕಿ, 122 ಕೇಸ್‌ಗಳನ್ನು ಯಾವುದೇ ಬ್ರೇಕ್ ತೆಗೆದುಕೊಳ್ಳದೆ ಕೋರ್ಟ್ ಕಲಾಪ ಅಂತ್ಯಗೊಂಡ ಬಳಿಕವೂ ಹೆಚ್ಚುವರಿಯಾಗಿ 10 ಗಂಟೆಗಳ ಕಾಲ ಕೆಲಸ ಮಾಡಿದ್ದಾರೆ.

ಕೋರ್ಟ್ ಕಲಾಪ ಬೆಳಗ್ಗೆ 11 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ಇರುತ್ತದೆ. ಅಲ್ಲದೆ, ಮಧ್ಯಾಹ್ನ 2 ಗಂಟೆಗೆ 1 ಗಂಟೆ ಕಾಲ ಊಟಕ್ಕೆ ಬ್ರೇಕ್ ಇರುತ್ತದೆ. ಆದರೆ, ಬೇಸಿಗೆ ರಜೆಗೂ ಮುನ್ನವೇ ಪೆಂಡಿಂಗ್ ಇರುವ ಹಲವು ಕೇಸ್‌ಗಳನ್ನು ಕ್ಲಿಯರ್ ಮಾಡಲು ಜಸ್ಟೀಸ್ ಶಾರುಖ್‌ ಈ ರೀತಿ ಮಾಡಿದ್ದಾರೆ. ಇತ್ತೀಚೆಗಷ್ಟೇ ಹಲವು ದಿನಗಳ ಕಾಲ ಮಧ್ಯರಾತ್ರಿ 12 ಗಂಟೆವರೆಗೆ ಕೆಲಸ ಮಾಡಿದ್ದ ಬಗ್ಗೆ ವಿಜಯ ಕರ್ನಾಟಕ ಸಹೋದರ ಪತ್ರಿಕೆ ಟೈಮ್ಸ್ ಆಫ್ ಇಂಡಿಯಾ ಏಪ್ರಿಲ್ 27ರಂದು ಸುದ್ದಿ ಮಾಡಿತ್ತು.

ಶುಕ್ರವಾರ ಸಂಜೆ 6 ಗಂಟೆಗೆ ಕೋರ್ಟ್ ಕಲಾಪವಾದ ಬಳಿಕ ವಕೀಲರು, ದಾವೆದಾರರು ಎಷ್ಟು ಮಂದಿಯಿದ್ದರೋ ಮಧ್ಯರಾತ್ರಿ ಸಹ ಕೋರ್ಟ್‌ನಲ್ಲಿ ಅಷ್ಟೇ ಜನ ಇದ್ದರು. ಜತೆಗೆ 3.30ಕ್ಕೆ ಕೋರ್ಟ್ ಕಲಾಪ ಅಂತ್ಯಗೊಳಿಸಿದ ಜಸ್ಟೀಸ್ ಶಾರುಖ್‌, ಮತ್ತೆ ಬೆಳಗ್ಗೆ 10 ಗಂಟೆಗೆ ಕೋರ್ಟ್‌ಗೆ ಬಂದು ಬಾಕಿ ಉಳಿದ 14 ಕೇಸ್‌ಗಳನ್ನು ಕ್ಲಿಯರ್ ಮಾಡಿದ್ದಾರೆ. ಇನ್ನು, ರಾತ್ರಿಯಾದ ಬಳಿಕ ಕೋರ್ಟ್‌ನಲ್ಲಿ ಲೈಬ್ರರಿ, ಟಾಯ್ಲೆಟ್‌ ಸೇರಿ ಅನೇಕ ಸೌಲಭ್ಯಗಳನ್ನು ಬಂದ್ ಮಾಡಿಸಲಾಗಿತ್ತು. ಈ ಬಗ್ಗೆ ಮಹಿಳಾ ವಕೀಲರೊಬ್ಬರು ದೂರು ನೀಡಿದ್ದಕ್ಕೆ, ಕೋರ್ಟಿನ ಟಾಯ್ಲೆಟ್‌ ಅನ್ನು ತೆರೆಯಲು ಜಡ್ಜ್ ಸೂಚನೆ ಕೊಟ್ಟಿದ್ದರು. ಹೀಗಾಗಿ ದೇಶದಲ್ಲಿ ನ್ಯಾಯಾಲಯ, ನ್ಯಾಯಮೂರ್ತಿಗಳ ವಿಳಂಬ ಧೋರಣೆ ಬಗ್ಗೆ ಹೆಚ್ಚು ದೂರುಗಳು ಕೇಳಿ ಬರುತ್ತಿರುವ ಹಿನ್ನೆಲೆಯಲ್ಲಿ ಇಂತಹ ನ್ಯಾಯಮೂರ್ತಿಗಳ ಬಗ್ಗೆ ಜನತೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

Comments are closed.