ಕರ್ನಾಟಕ

ಇಂದು ಕರ್ನಾಟಕ ಪೊಲಿಟಿಕಲ್‌ ಲೀಗ್‌ ಫೈನಲ್‌: ಎಲ್ಲರ ಚಿತ್ತ ಮತದಾನದತ್ತ

Pinterest LinkedIn Tumblr


ಬೆಂಗಳೂರು: ಕರ್ನಾಟಕ ಪೊಲಿಟಿಕಲ್‌ ಲೀಗ್‌ನ ಫೈನಲ್‌ ಪಂದ್ಯ ಇಂದು ನಡೆಯಲಿದೆ. ಈಗಾಗಲೇ ಮೂರು ತಂಡಗಳ ಆಟಗಾರರು ಸಜ್ಜಾಗಿದ್ದಾರೆ. ಈ ಪಂದ್ಯಕ್ಕೆ ಅಂಪೈರ್‌ ಆದ ಚುನಾವಣೆ ಆಯೋಗ ಮುಕ್ತ ಹಾಗೂ ಶಾಂತಿಯುತ ಮತದಾನಕ್ಕೆ ಭರಪೂರ ಸಿದ್ದತೆಗಳನ್ನು ಮಾಡಿಕೊಂಡಿದೆ.

ಕರ್ನಾಟಕ ವಿಧಾನಸಭೆ ಚುನಾವಣೆಗೆ ಕ್ಷಣಗಣನೆ ಆರಂಭವಾಗಿದೆ. ಬಹಿರಂಗ ಪ್ರಚಾರ ಅಂತ್ಯಗೊಂಡ ನಂತರ ಮನೆ ಮನೆಗೆ ತೆರಳಿ ಮತಯಾಚನೆ ಮಾಡಿದರು.

ಇಡೀ ಚಿತ್ರಣವನ್ನೇ ಬದಲು ಮಾಡುವ ನಿನ್ನೆಯ ಖತಲ್‌ ರಾತ್ರಿಯ ಕರಾಮತ್ತಿಗೆ ಎಲ್ಲ ಅಭ್ಯರ್ಥಿಗಳು ತಮ್ಮದೇ ತಂತ್ರಗಳನ್ನು ಪ್ರಯೋಗಿಸಿದ್ದರು.

ಮುಕ್ತ ಹಾಗೂ ಶಾಂತಿಯುತ ಮತದಾನಕ್ಕಾಗಿ ಚುನಾವಣೆ ಆಯೋಗ ಹಾಗೂ ಪೊಲೀಸ್ ಇಲಾಖೆ ಸಂಪೂರ್ಣ ಸಿದ್ಧತೆ ಮಾಡಿಕೊಂಡಿದೆ. ಚುನಾವಣಾ ಸಿಬ್ಬಂದಿ ಈಗಾಗಲೇ ತಮಗೆ ನಿಗದಿಯಾಗಿರುವ ಮತಗಟ್ಟೆಗಳತ್ತ ಸಕಲ ಸಾಮಗ್ರಿಗಳೊಂದಿಗೆ ತೆರಳಿದ್ದಾರೆ.

ಇಂದು ಬೆಳಗ್ಗೆ 7 ಗಂಟೆಯಿಂದ ಮತದಾನ ನಡೆಯಲಿದ್ದು, ಸಂಜೆ 6 ಗಂಟೆಯವರೆಗೆ ಮತ ಹಾಕಲು ಅವಕಾಶವಿದೆ. ಈ ಬಾರಿಯ ಅಧಿಕ ಪ್ರಮಾಣದಲ್ಲಿ ಮತ ಚಲಾವಣೆಯಾಗಬೇಕೆಂಬ ಸಂಕಲ್ಪ ತೊಟ್ಟಿರುವ ಚುನಾವಣೆ ಆಯೋಗ ಸರ್ವ ರೀತಿಯ ಯೋಜನೆಗಳನ್ನೂ ಹಮ್ಮಿಕೊಂಡಿದೆ.

ಭದ್ರತೆಗೆ 1.4 ಲಕ್ಷ ಸಿಬ್ಬಂದಿ ನಿಯೋಜನೆ

ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಮುಕ್ತ, ನ್ಯಾಯಸಮ್ಮತ ಚುನಾವಣೆಗೆ ಎಲ್ಲ ರೀತಿಯ ಭದ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದ್ದು, ಸಾರ್ವಜನಿಕರು ನಿರ್ಭಿತಿಯಿಂದ ಮತದಾನ ಮಾಡಲು ಕ್ರಮ ಕೈಗೊಳ್ಳಲಾಗಿದೆ ಎಂದು ರಾಜ್ಯ ಪೊಲೀಸ್ ಮಹಾ ನಿರ್ದೇಶಕಿ ನೀಲಮಣಿ ರಾಜು ತಿಳಿಸಿದರು.

ನಗರದ ನೃಪತುಂಗ ರಸ್ತೆಯಲ್ಲಿರುವ ಪೊಲೀಸ್ ಪ್ರಧಾನ ಕಚೇರಿಯಲ್ಲಿ ಪತ್ರಿಗೋಷ್ಠಿ ನಡೆಸಿ ಮಾತನಾಡಿದ ಅವರು, ಮೇ.12ರಂದು ನಡೆಯಲಿರುವ ಚುನಾವಣೆ ಸಂದರ್ಭದಲ್ಲಿ ಪೊಲೀಸ್ ಅಧಿಕಾರಿಗಳು ಸೇರಿದಂತೆ ಒಟ್ಟು 82,157 ಸಿಬ್ಬಂದಿಯನ್ನು ನಿಯೋಜಿಸಲಾಗಿದೆ ಎಂದು ಮಾಹಿತಿ ನೀಡಿದರು.

ರಾಜ್ಯದಲ್ಲಿ ಒಟ್ಟು 59,302 ಮತಗಟ್ಟಿಗಳಿದ್ದು, ಈ ಪೈಕಿ 12 ಮತಗಟ್ಟೆಗಳನ್ನು ಸೂಕ್ಷ್ಮ ಮತಗಟ್ಟೆಗಳೆಂದು ಪರಿಗಣಿಸಲಾಗಿದೆ. ಇಂಥ ಮತಗಟ್ಟೆಯಲ್ಲಿ ಓರ್ವ ಕೇಂದ್ರದ ಭದ್ರತಾ ಸಿಬ್ಬಂದಿ ಹಾಗೂ ಓರ್ವ ಮುಖ್ಯ ಪೇದೆಯನ್ನು ನಿಯೋಜಿಸಲಾಗಿದೆ. ಕೇಂದ್ರ ಪಡೆಗಳು ಸೇರಿದಂತೆ ಒಟ್ಟು 1.4 ಲಕ್ಷ ಪೊಲೀಸರು ಕಾರ್ಯಪ್ರವೃತರಾಗಿದ್ದಾರೆ ಎಂದು ಅವರು ತಿಳಿಸಿದರು.

ಹೆಚ್ಚಿನ ಭದ್ರತೆಗಾಗಿ ನೆರೆ ರಾಜ್ಯಗಳಿಂದ 7,500 ಪೊಲೀಸರು ಆಗಮಿಸಿದ್ದು, ಅವರನ್ನು ಗಡಿಭಾಗದ ಮತಗಟ್ಟೆಗಳಲ್ಲಿ ನಿಯೋಜಿಸಲಾಗುತ್ತದೆ. ಮುಂಜಾಗ್ರತಾ ಕ್ರಮಾವಾಗಿ 49,566 ರೌಡಿಗಳಿಗೆ ಎಚ್ಚರಿಕೆ ನೀಡಲಾಗಿದ್ದು, ಈ ಪೈಕಿ ಹಲವು ಜನರನ್ನು ವಶಕ್ಕೆ ಪಡೆಯಲಾಗಿದೆ.

ಕಾನೂನು ಮತ್ತು ಸುವ್ಯವಸ್ಥೆ ಹೆಚ್ಚುವರಿ ಪೊಲೀಸ್ ಮಹಾ ನಿರ್ದೇಶಕ ಕಮಲ್ ಪಂತ್ ಭಾಗಿಯಾಗಿದ್ದರು.

Comments are closed.