ಕರ್ನಾಟಕ

ಬೆಂಗಳೂರಿನಲ್ಲಿ ಗುಡುಗು ಸಹಿತ ಭಾರೀ ಮಳೆ; ನೀರಿನಲ್ಲಿ ಮುಳುಗಿದ 20 ಕಾರುಗಳು: ಪರದಾಟ ನಡೆಸಿದ ವಾಹನ ಸವಾರರು

Pinterest LinkedIn Tumblr

ಬೆಂಗಳೂರು: ಉದ್ಯಾನನಗರಿ ಬೆಂಗಳೂರಿನಲ್ಲಿ ಗುಡುಗು ಸಹಿತ ಭಾರೀ ಮಳೆಯಾಗಿದೆ. ರಸ್ತೆಗಳಿಗೆ ನೀರು ನೂಗಿದ್ದು ಫುಲ್ ಟ್ರಾಫಿಕ್ ಜಾಮ್ ಉಂಟಾಗಿತ್ತು. ಈ ಹಿನ್ನೆಲೆಯಲ್ಲಿ ವಾಹನ ಸವಾರರು ಪರದಾಡುವಂತಾಗಿದೆ.

ಶುಕ್ರವಾರ ಸಂಜೆ ಕೃಷ್ಣರಾಜಪುರ, ಹಲಸೂರು, ಮೆಜೆಸ್ಟಿಕ್, ಆನಂದರಾವ್ ಸರ್ಕಲ್, ಗಾಂಧಿನಗರ, ಮಲ್ಲೇಶ್ವರಂ, ಕಾರ್ಪೋರೇಷನ್ ಸರ್ಕಲ್, ಶಾಂತಿನಗರ, ಯಶವಂತಪುರ, ರಾಜಾಜಿನಗರ, ವಿಜಯನಗರ ಸೇರಿದಂತೆ ಗುಡುಗು ಸಹಿತ ಮಳೆಯಾಗಿದೆ.

ಮೈಸೂರು ರಸ್ತೆ ಸೇರಿದಂತೆ ಹಲವೆಡೆ ಆಲಿಕಲ್ಲು ಮಳೆಯಾಗಿದೆ. ಚುನಾವಣೆ ಹಿನ್ನೆಲೆಯಲ್ಲಿ ಮತದಾನ ಮಾಡಲು ತವರಿಗೆ ತೆರಳಲು ಆಗಮಿಸಿದ್ದ ಹಲವು ಪ್ರಯಾಣಕರು ಪರದಾಡುವಂತಾಗಿದೆ. ಆಕಾಲಿಕ ಮಳೆಯಿಂದ ನಗರದ ಹಲವೆಡೆ ಫುಲ್ ಟ್ರಾಫಿಕ್ ಜಾಮ್ ಉಂಟಾಗಿತ್ತು.

ಆಸ್ಟಿನ್‌ಟೌನ್‌ನ ವಿಕ್ಟೋರಿಯಾ ಬಡಾವಣೆಯ ಪಾಮ್‌ಗ್ರೋವ್‌ ರಸ್ತೆಯಲ್ಲಿರುವ ಸಲಾರ್‌ಪುರಿಯಾ ಲಾವಣ್ಯ ರೆಸಿಡೆನ್ಸಿ, ಆಕ್ಸಿಸ್‌ ಬ್ಯಾಂಕ್‌,ನೀಲಗಿರೀಸ್‌ ಮಳಿಗೆ ಮತ್ತು ಪ್ರೆಸ್ಟೀಜ್‌ ಅಪಾರ್ಟ್‌ಮೆಂಟ್‌ ನಿವಾಸಿಗಳ ಪರಿಸ್ಥಿತಿ ಅಕ್ಷರಶಃ ಬೀದಿಗೆ ಬಂದಿತ್ತು. ಯಾರೋ ಮಾಡಿದ ತಪ್ಪಿಗೆ ಅವರು ತೊಂದರೆ ಅನುಭವಿಸಬೇಕಾಯಿತು.

ಈ ರಸ್ತೆಯಲ್ಲಿರುವ ಪಾಮ್‌ಟ್ರಿ ಅಪಾರ್ಟ್‌ಮೆಂಟ್‌ ಎದುರು ಹರಿಯುವ ಮೋರಿಯ ತಡೆಗೋಡೆಯನ್ನು ವ್ಯಕ್ತಿಯೊಬ್ಬರು ಬೆಳಿಗ್ಗೆ ಜೆಸಿಬಿ ಬಳಸಿ ಒಡೆದು ಅದನ್ನು ದುರಸ್ತಿ ಮಾಡದೇ ಹಾಗೇಯೇ ಬಿಟ್ಟು ಹೋಗಿದ್ದರು. ಸಂಜೆ ಮಳೆ ಬಂದಾಗ ಮೋರಿಯ ನೀರು ಉಕ್ಕಿ ಅಪಾರ್ಟ್‌ಮೆಂಟ್‌ಗಳ ನೆಲಮಹಡಿ ಯಲ್ಲಿ ಸುಮಾರು ಐದರಿಂದ ಆರು ಅಡಿಯಗಳವರೆಗೆ ನೀರು ನಿಂತಿತು. ಇದರಿಂದಾಗಿ ಸುಮಾರು 20ಕ್ಕೂ ಹೆಚ್ಚು ಕಾರು ಹಾಗೂ ಹತ್ತಕ್ಕೂ ಹೆಚ್ಚು ಬೈಕ್‌ಗಳು ಮುಳುಗಿದ್ದವು.

‘ಮೋರಿಯ ಗೋಡೆ ಒಡೆಯುವಾಗಲೇ ಆಕ್ಷೇಪ ವ್ಯಕ್ತಪಡಿಸಿ, ವಿಷಯವನ್ನು ಸ್ಥಳೀಯ ಪಾಲಿಕೆ ಸದಸ್ಯರ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಲಿಲ್ಲ. ಚುನಾವಣೆ ಬಳಿಕ ನೋಡೋಣ ಎಂದು ಅಲ್ಲಿಂದ ಹೋಗಿದ್ದರು. ಇದೂ ಅಲ್ಲದೇ, ಕೆಲ ನಿವಾಸಿಗಳು ಗೋಡೆ ಒಡೆದ ವ್ಯಕ್ತಿಯ ಪರವಾಗಿ ನಿಂತಿದ್ದರಿಂದ ಎರಡು ಗುಂಪುಗಳಾಗಿ ಮಾತಿನ ಚಕಮಕಿ ನಡೆಯಿತು. ಕೊನೆಗೆ ಪೊಲೀಸರು ಸ್ಥಳಕ್ಕೆ ಬಂದು ಪರಿಸ್ಥಿತಿ ನಿಯಂತ್ರಿಸಿದರು’ ಎಂದು ಸ್ಥಳೀಯ ನಿವಾಸಿ ವಾರಿಯರ್‌ ಹೇಳಿದರು.

‘ಚುನಾವಣೆ ಬಂದಾಗ ಬರುವ ಜನಪ್ರತಿನಿಧಿಗಳು ಬಳಿಕ ಈ ಕಡೆ ಮುಖ ಮಾಡುವುದಿಲ್ಲ. ಇಲ್ಲಿಯ ಸಮಸ್ಯೆಗಳ ಬಗ್ಗೆ ಅನೇಕ ಸಲ ಸ್ಥಳೀಯ ಜನಪ್ರತಿನಿಧಿಗಳ ಗಮನಕ್ಕೆ ತರಲಾಗಿತ್ತು. ಆದರೆ, ಯಾವುದೇ ಪ್ರಯೋಜನವಾಗಿಲ್ಲ’ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು.

‘ಅಪಾರ್ಟ್‌ಮೆಂಟ್‌ ನಿವಾಸಿಗಳ ಕಾರ್‌ಗಳನ್ನು ಪಾರ್ಕ್‌ ಮಾಡಲು ಮೋರಿಯನ್ನು ಕಾಂಕ್ರೀಟ್‌ ಹಾಕಿ ಮುಚ್ಚಿದ್ದರಿಂದ ಮಳೆ ನೀರು ಸರಾಗವಾಗಿ ಹರಿಯುವುದಿಲ್ಲ. ಹಾಗಾಗಿ ನೀರು ಉಕ್ಕಿ ರಸ್ತೆಯ ಮೇಲೆ ಹರಿದು ರಸ್ತೆಯ ಇನ್ನೊಂದು ಬದಿಯಲ್ಲಿರುವ ಅಪಾರ್ಟ್‌ಮೆಂಟ್‌ಗಳಿಗೆ ನುಗ್ಗುತ್ತಿದೆ’ ಎಂದು ನಿವಾಸಿ ಜಯ್‌ ಪ್ರಭು ತಿಳಿಸಿದರು.

ಮರಗಳು ಧರೆಗೆ: ಮಳೆ ಆರಂಭಕ್ಕೂ ಮುನ್ನ ಭಾರಿ ವೇಗದಲ್ಲಿ ಗಾಳಿ ಬೀಸಿದ್ದರಿಂದ ಜೆ.ಪಿ ನಗರ, ನ್ಯೂ ಹಾರಿಜನ್‌ ಸ್ಕೂಲ್‌, ಇಂದಿರಾ ನಗರ, ಹುಳಿಮಾವು, ಬನಶಂಕರಿ ಮೂರನೇ ಹಂತದಲ್ಲಿ ಮರಗಳು ಧರೆ ಗುರುಳಿವೆ. ಎಚ್‌.ಆರ್‌.ಬಿ.ಆರ್‌ ಬಡಾವಣೆ, ಕೇಂಬ್ರಿಡ್ಜ್‌ ವೃತ್ತ, ಬಾಣಸವಾಡಿ, ಚಂದ್ರಾ ಬಡಾವಣೆ, ಕಂಠೀರವ ಕ್ರೀಡಾಂಗಣದಲ್ಲಿ ಮರದ ಕೊಂಬೆಗಳು ಮುರಿದಿವೆ. ಹೆಬ್ಬಾಳದಲ್ಲಿ ರಾಜಕಾಲುವೆ ಉಕ್ಕಿ ಹರಿದಿದೆ ಎಂದು ಬಿಬಿಎಂಪಿ ಮೂಲಗಳು ತಿಳಿಸಿವೆ.

ಸಂಚಾರ ಅವ್ಯವಸ್ಥೆ: ಕೆ.ಎಚ್‌.ರಸ್ತೆ, ಜಯಮಹಲ್‌, ಕೆ.ಆರ್‌.ಪುರ, ಕೋಡೆ ಜಂಕ್ಷನ್‌, ಟ್ರಿನಿಟಿ ವೃತ್ತ ಸೇರಿ ಅನೇಕ ಕಡೆಗಳಲ್ಲಿ ರಸ್ತೆಗಳಲ್ಲಿ ಮಳೆ ನೀರು ನಿಂತಿದ್ದರಿಂದ ಸಂಚಾರ ಸಮಸ್ಯೆ ತಲೆದೋರಿತು. ಒಂದು ಗಂಟೆ ಅವಧಿಯಲ್ಲಿ 17.ಮಿ.ಮಿ ಮಳೆ ಸುರಿದಿದೆ.

ಮಳೆಗೂ ಮುನ್ನ ಮತ ಚಲಾಯಿಸಿ
ಸುಳಿಗಾಳಿಯಿಂದಾಗಿ ವಾಯುಭಾರ ಕುಸಿತ ಉಂಟಾಗಿದ್ದು, ನಗರದಲ್ಲಿ ಇನ್ನೂ ಎರಡು ದಿನಗಳ ಕಾಲ ಮಳೆ ಸುರಿಯುವ ಸಾಧ್ಯತೆ ಇದ್ದು, ಮಳೆ ಬರುವುದರ ಒಳಗಾಗಿ ಮತದಾರರು ಮತದಾನ ಹಕ್ಕು ಚಲಾಯಿಸಬಹುದಾಗಿದೆ.

ಇನ್ನು ಎರಡು ದಿನಗಳ ಕಾಲ ಮಳೆ ಮುಂದುವರೆಯುವ ಸಾಧ್ಯತೆ ಇದೆ. ಲಕ್ಷದೀಪ ಮತ್ತು ತಮಿಳುನಾಡು ಭಾಗದಲ್ಲಿ ಮೇಲ್ಮೈ ಸುಳಿಗಾಳಿ ನಿರ್ಮಾಣ ಹಾಗೂ ಉತ್ತರ ಕರ್ನಾಟಕದಿಂದ ತಮಿಳುನಾಡಿನ ದಕ್ಷಿಣ ಭಾಗದಲ್ಲಿ ಮೋಡಗಳ ಸಾಲು ನಿರ್ಮಾಣವಾಗಿರುವ ಹಿನ್ನೆಲೆಯಲ್ಲಿ ಮಳೆಯಾಗುತ್ತಿದೆ ಎಂದು ರಾಜ್ಯ ನೈಸರ್ಗಿಕ ಪ್ರಕೃತಿ ವಿಕೋಪ ಇಲಾಖೆ ನಿರ್ದೇಶಕರಾದ ಶ್ರೀನಿವಾಸ ರೆಡ್ಡಿ ಅವರು ಮಾಹಿತಿ ನೀಡಿದ್ದಾರೆ.

Comments are closed.