ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ವಿಧಾನಸಭಾ ಚುನಾವಣೆಯ ಮತದಾನ ಪ್ರಕ್ರಿಯೆ ಬಿರುಸಿನಿಂದ ಸಾಗಿದ್ದು, ಜಿಲ್ಲೆಯಲ್ಲಿ ಚುನಾವಣಾ ಅಖಾಡದಲ್ಲಿರುವ ವಿವಿಧ ಪಕ್ಷಗಳ ಅಭ್ಯರ್ಥಿಗಳು ಇಂದು ಮುಂಜಾನೆ ತಮ್ಮ ಕ್ಷೇತ್ರದ ಮತಗಟ್ಟೆಗಳಲ್ಲಿ ಮತ ಚಲಾಯಿಸಿದರು.
ಮಂಗಳೂರು ದಕ್ಷಿಣ ವಿಧಾನ ಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ವೇದವ್ಯಾಸ ಕಾಮಾತ್ ಅವರು ಇಂದು ಬೆಳಿಗ್ಗೆ ನಗರದ ಉರ್ವಾ ಗಾಂಧಿನಗರ ಶಾಲೆಯಲ್ಲಿ ಮತ ಚಲಾಯಿಸಿದರು. ಮಂಗಳೂರು ದಕ್ಷಿಣ ವಿಧಾನ ಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಜೆ.ಆರ್ ಲೋಬೋ ಅವರು ಇಂದು ಬೆಳ್ಳಿಗ್ಗೆ ಬೆಂದರು ಸೈಂಟ್ ಸೆಬೆಸ್ಟಿಟೀಯನ್ ಶಾಲೆಯಲ್ಲಿ ಸರತಿ ಸಾಲಲ್ಲಿ ನಿಂತು ಮತದಾನ ಮಾಡಿದರು.
ಮಂಗಳೂರು ವಿಧಾನಸಭಾ ಕ್ಷೇತ್ರದ ಬೋಳಿಯಾರ್ ಗ್ರಾಮದ ಅಮ್ಮೆಂಬಳ ರಂತಡ್ಕ (ಕರಿ) ದ.ಕ.ಜಿ.ಪಂ. ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮತಗಟ್ಟೆ ನಂಬ್ರ 100 ರಲ್ಲಿ ಶನಿವಾರ ಬೆಳಗ್ಗೆ 7.25ಕ್ಕೆ ಮಂಗಳೂರು ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಯು.ಟಿ.ಖಾದರ್ ಹಾಗೂ ಅವರ ಪತ್ನಿ ಲಾಮಿಸ್ ಖಾದರ್ ಅವರು ಜೊತೆಯಾಗಿ ಸರತಿ ಸಾಲಿನಲ್ಲಿ ನಿಂತು ಮತ ಚಲಾಯಿಸಿದರು. ಜಿಲ್ಲಾ ಉಸ್ತುವಾರಿ ಸಚಿವ ಬಿ. ರಮಾನಾಥ ರೈ ಬಂಟ್ವಾಳದ ಕಳ್ಳಿಗೆ ಗ್ರಾಮದ ಸರಕಾರಿ ಶಾಲೆಯಲ್ಲಿ ಮತ ಚಲಾಯಿಸಿದರು.
ಮುಲ್ಕಿ – ಮೂಡಬಿದ್ರೆ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಉಮಾನಾಥ್ ಕೊಟ್ಯಾನ್ ಪುತ್ತಿಗೆ ಜಿಲ್ಲಾ ಪಂಚಾಯತ್ ವ್ಯಾಪ್ತಿಯ ಹಂಡೇಲ್ ನ ಮತಕೇಂದ್ರದಲ್ಲಿ ಮತದಾನ ಮಾಡಿದರು. ಉಪ್ಪಿನಂಗಡಿಯ ಹೀರೆಬಂಡಾಡಿ ಶಾಲೆಯಲ್ಲಿ ಪುತ್ತೂರು ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಸಂಜೀವ ಮಠಂದೂರು ಮತ ಚಲಾವಣೆ ಮಾಡಿದರು.
ಬೆಳ್ತಂಗಡಿ ವಿಧಾನ ಸಭಾ ಕ್ಷೇತ್ರ ಬಿಜೆಪಿ ಅಭ್ಯರ್ಥಿ ಹರೀಶ್ ಪೂಂಜಾ ಕುಟುಂಬ ಸಮಾತರಾಗಿ ಬಂದು ಮತ ಚಲಾಯಿಸಿದರು. ಬೆಳ್ತಂಗಡಿಯ ಗರ್ಡಾಡಿ ಶಾಲೆಯಲ್ಲಿ ಹರೀಶ್ ಪೂಂಜಾ ತಮ್ಮ ತಂದೆ, ತಾಯಿ ಮತ್ತು ಹೆಂಡತಿ ಜೊತೆ ಬಂದು ಸರತಿ ಸಾಲಿನಲ್ಲಿ ನಿಂತು ಮತ ಹಾಕಿದರು.
ಬೆಳ್ತಂಗಡಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಗೆ ಆಗಮಿಸಿದ ಬೆಳ್ತಂಗಡಿ ಶಾಸಕ ವಸಂತ ಬಂಗೇರಾ ತಮ್ಮ ಹಕ್ಕು ಚಲಾಯಿಸಿದರು.
ಮುಲ್ಕಿ – ಮೂಡಬಿದ್ರೆ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಹಾಗೂ ಶಾಸಕ ಅಭಯಚಂದ್ರ ಜೈನ್ ಮೂಡಬಿದ್ರೆಯ ಮೂಡಬಿದ್ರೆ ಡಿಜೆ ಶಾಲೆಯಲ್ಲಿ ಮತದಾನ ಮಾಡಿದರು. ಮೂಡಬಿದ್ರೆ ಜೈನ ಮಠ ಭಟ್ಟಾರಕ ಚಾರುಕೀರ್ತಿ ಸ್ವಾಮೀಜಿ ಕೂಡ ಡಿಜೆ ಶಾಲೆಯ ಕೇಂದ್ರದಲ್ಲಿ ಮತ ಚಲಾಯಿಸಿದರು.
ಮಂಗಳೂರು ದಕ್ಷಿಣ ವಿಧಾನ ಸಭಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಶ್ರೀಕರ ಪ್ರಭು ಅವರು ನಗರದ ಗಣಪತಿ ಶಾಲೆಯಲ್ಲಿ ಮತದಾನ ಮಾಡಿದರು.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 1848 ಮತಗಟ್ಟೆಗಳಲ್ಲಿ ಬಿಗು ಭದ್ರತೆಯಲ್ಲಿ ಶಾಂತಿಯುತ ಮತದಾನ ನಡೆದಿದೆ..ವಿವಿಧ ಪಕ್ಷದ ಮುಖಂಡರುಗಳು ತಮ್ಮ ತಮ್ಮ ಕ್ಷೇತ್ರದಲ್ಲಿ ಮತ ಚಲಾಯಿಸಿದರು. ಸಂಸದ ನಳಿನ್ ಕುಮಾರ್ ಕಟೀಲ್ಉರ್ವಾ ಲೇಡಿಹಿಲ್ ಶಾಲೆಯಲ್ಲಿ, ವಿಧಾನ ಪರಿಷತ್ ವಿರೋಧ ಪಕ್ಷದ ಮುಖ್ಯ ಸಚೇತಕಾರದ ಕ್ಯಾಪ್ಟನ್ ಗಣೇಶ್ ಕಾರ್ಣಿಕ್ರವರು ಲೇಡಿಹಿಲ್ ಹಿರಿಯ ಪ್ರಾಥಮಿಕ ಶಾಲೆಯಲ್ಲಿ, ಕೇಂದ್ರ ಸಚಿವ ಡಿ.ವಿ. ಸದಾನಂದ ಗೌಡ ಸುಳ್ಯದ ಮಂಡೆಕೋಲು ಗ್ರಾಮದಲ್ಲಿ, ಹಿರಿಯ ಕಾಂಗ್ರೆಸ್ ನಾಯಕ ಬಿ. ಜನಾರ್ದನ ಪೂಜಾರಿ ಬಂಟ್ವಾಳದಲ್ಲಿ ಮತ ಚಲಾಯಿಸಿದರು.
ಜಿಲ್ಲೆಯಲ್ಲಿ ಮಾದರಿ ಮತಕೇಂದ್ರಗಳು ಜನತೆಯ ಉತ್ಸಾಹವನ್ನು ಇಮ್ಮಡಿಗೊಳಿಸಿತ್ತು. ಕರಾವಳಿಯಾದ್ಯಂತ ಜನತೆ ವಿಧಾನಸಭಾ ಚುನಾವಣೆಯ ಮತದಾನ ಪ್ರಕ್ರಿಯೆಯಲ್ಲಿ ಉತ್ಸಾಹದಿಂದ ಪಾಲ್ಗೊಂಡರು. ನಗರ ಪ್ರದೇಶದ ಜನರು ಹಾಗೂ ಗ್ರಾಮಾಂತರದಲ್ಲೂ ಜನ ಉತ್ಸಾಹದಿಂದ ಮತದಾನದಲ್ಲಿ ಪಾಲ್ಗೊಂಡರು.
ಜಿಲ್ಲೆಯಾದ್ಯಂತ ಜನ ಮುಕ್ತ ಹಾಗೂ ನಿರ್ಭೀತಿಯಿಂದ ಮತ ಚಲಾಯಿಸಿದ್ದಾರೆ. ಕೆಲ ಮತಗಟ್ಟೆಗಳನ್ನು ಹಬ್ಬದ ಮಾದರಿಯಲ್ಲಿ ಶೃಂಗಾರ ಮಾಡಲಾಗಿದೆ. ಮಹಿಳಾ ಸಿಬ್ಬಂದಿ ಇರುವ ಪಿಂಕ್ ಮತಗಟ್ಟೆಗೆ ವಿಶೇಷ ಮೆರುಗು ನೀಡಿತ್ತು.
ಹೆಚ್ಚಿನ ವಿವರ ಹಾಗೂ ಚಿತ್ರ ನಿರೀಕ್ಷಿಸಿ..
Comments are closed.