ರಾಷ್ಟ್ರೀಯ

ಕುಷ್ಠರೋಗಿ ಹಿಂದೂ ಯುವಕನ ಪ್ರಾಣ ಉಳಿಸಲು ರಮ್‌ಜಾನ್ ಉಪವಾಸ ಮುರಿದ ಮುಸ್ಲಿಂ!

Pinterest LinkedIn Tumblr


ಜಾತಿ, ಮತ, ಹಿನ್ನೆಲೆ, ಧರ್ಮ ಮತ್ತು ನಂಬಿಕೆಗಳನ್ನು ಬಳಸಿಕೊಂಡು ಸ್ವಾರ್ಥಸಾಧನೆ ಮಾಡುವ ರಾಜಕಾರಣಿಗಳು ದೇಶವನ್ನು ಹಿಂದೂ- ಮುಸ್ಲಿಂ ಎಂದು ವಿಭಜಿಸುತ್ತ ಕೋಮುದಳ್ಳುರಿಯನ್ನುರಿಸುತ್ತಲೇ ಇರುತ್ತಾರೆ. ರಾಜಕಾರಣಿಗಳೇನೇ ಆಟವಾಡಿದರೂ ಸರ್ವಧರ್ಮ ಸಮನ್ವಯತೆಗೆ ಹೆಸರಾದ ಪುಣ್ಯಭೂಮಿ ಭಾರತದಲ್ಲಿ ಎಲ್ಲವನ್ನು ಮೀರಿ ಮೆರೆಯುವುದು ಮಾನವೀಯತೆ, ಭಾರತೀಯತೆಯೇ ಎಂಬುದು ಪದೇ ಪದೇ ಸಾಬೀತಾಗುತ್ತಲೇ ಇರುತ್ತದೆ. ಇದಕ್ಕೊಂದು ಸ್ಪಷ್ಟ ನಿದರ್ಶನ ಉತ್ತರಾಖಂಡ್‌ನ ಡೆಹರಾಡೂನ್‌ನಲ್ಲಿ ನಡೆದಿರುವ ಈ ಘಟನೆ.

20 ವರ್ಷದ ಅಜಯ್ ಬೇಲಾವಾಲಮ್ ಕುಷ್ಠರೋಗದಿಂದ ಬಳಲುತ್ತಿದ್ದು, ಆತನ ರಕ್ತಕಣಗಳು ವೇಗವಾಗಿ ಕ್ಷೀಣವಾಗುತ್ತ ಸಾಗಿದ್ದವು. ಸಾವಿನ ಕಡೆ ಮುಖಮಾಡಿದ್ದ ಆತನ ಪಾಲಿಗೆ ಅಪದ್ಬಾಂಧವನಾಗಿ ಬಂದಿದ್ದು ಒಬ್ಬ ಮುಸ್ಲಿಂ ವ್ಯಕ್ತಿ

ಬದುಕಬೇಕೆಂದರೆ ಅಜಯ್‌ನಿಗೆ ಎ+ ಗುಂಪಿನ ರಕ್ತ ಬೇಕಾಗಿತ್ತು. ಮಗನನ್ನು ಸಾವಿನ ದವಡೆಯಿಂದ ಪಾರು ಮಾಡಲು ಹೆಣಗಾಡಿದ ತಂದೆ ಕೊನೆಗೆ ಸಾಮಾಜಿಕ ಜಾಲತಾಣದಲ್ಲಿ ತನ್ನ ಮಗನಿಗೆ ಎ+ ರಕ್ತ ದಾನ ಮಾಡುವವವರು ಮುಂದೆ ಬನ್ನಿ ಎಂದು ಮನವಿ ಮಾಡಿಕೊಂಡರು. ಹೃದಯಸ್ಪರ್ಶಿಯಾದ ಅವರ ಕೋರಿಕೆ ವೈರಲ್ ಆಗಿ ಹರಿದಾಡಿತು.

ವಾಟ್ಸ್‌ಅಪ್‌ನಲ್ಲಿ ಹರಿದಾಡುತ್ತಿದ್ದ ಈ ಪೋಸ್ಟ್ ಗಮನಿಸಿದ ಆರಿಫ್ ಖಾನ್ ಎಂಬುವವರು ತಕ್ಷಣ ಅಜಯ್ ಅವರ ತಂದೆಯನ್ನು ಸಂಪರ್ಕಿಸಿ ತಾವು ರಕ್ತದಾನ ಮಾಡುವುದಾಗಿ ಹೇಳಿದ್ದಾರೆ. ಆರೀಫ್ ಪಾಲಕರು ಮತ್ತು ವಿದ್ಯಾರ್ಥಿಗಳ ಹಕ್ಕುಗಳ ರಾಷ್ಟ್ರೀಯ ಸಂಘಟನೆಯ ಅಧ್ಯಕ್ಷರಾಗಿದ್ದಾರೆ.

ಆಸ್ಪತ್ರೆ ತಲುಪಿದ ಆರೀಫ್‌ಗೆ ವೈದ್ಯರು ರಕ್ತದಾನಕ್ಕಿಂತ ಮೊದಲು ಏನಾದರೂ ತಿನ್ನುವಂತೆ ಹೇಳಿದ್ದಾರೆ. ರಮ್‌ಜಾನ್ ಉಪವಾಸದ ಹಿನ್ನೆಲೆಯಲ್ಲಿ ಏನನ್ನೂ ತಿನ್ನುವ ಹಾಗಿಲ್ಲ. ಹಾಗೆಯೇ ರಕ್ತ ನೀಡುತ್ತೇನೆ ಎಂದ ಆರೀಫ್‌ನ ರಕ್ತ ಪಡೆಯಲು ವೈದ್ಯರು ನಿರಾಕರಿಸಿದ್ದಾರೆ.

ಸಂದಿಗ್ಧತೆಯಲ್ಲಿ ಸಿಲುಕಿದ ಆರೀಫ್‌ಗೆ ಧರ್ಮಕ್ಕಿಂತ ಮಾನವೀಯತೆಯೇ ಮಿಗಿಲೆನಿಸಿದ್ದು, ತಾವು ಇಷ್ಟು ವರ್ಷದಿಂದ ಬಿಡದೇ ಆಚರಿಸಿಕೊಂಡು ಬಂದಿದ್ದ ರಮ್‌ಜಾನ್ ಉಪವಾಸ ಮುರಿದು ವೈದ್ಯರು ನೀಡಿದ ಆಹಾರ ಸೇವಿಸಿದ್ದಾರೆ. ಬಳಿಕವೇ ಅವರು ರಕ್ತದಾನ ಮಾಡಿ ಜೀವವುಳಿಸಿದ್ದಾರೆ.

ಸುಳ್ಳು ಭರವಸೆ ನೀಡುತ್ತ , ಕೋಮು ದ್ವೇಷ ಬಿತ್ತುತ್ತ ದೇಶ ಒಡೆಯುವ ಸ್ವಾರ್ಥ, ಲಜ್ಜೆಗೇಡಿ ರಾಜಕಾರಣಿಗಳೇನೇ ಮಾಡಲಿ, ಆರೀಫ್‌ನಂತಹ ಮಾನವೀಯ ಅಂತಃಕರಣ ಉಳ್ಳವರು ಅನೇಕತೆಯಲ್ಲಿ ಏಕತೆ ಕಾಣುವ ಈ ದೇಶದ ಬುನಾದಿಯನ್ನು ಮತ್ತಷ್ಟು ಭದ್ರಪಡಿಸುತ್ತಲೇ ಇರುತ್ತಾರೆ.

Comments are closed.