ಬೆಂಗಳೂರು: ರಾಜ್ಯದಲ್ಲಿ ಮುಂಗಾರು ಪ್ರಾರಂಭಕ್ಕೆ ದಿನಗಣನೆ ಶುರುವಾಗಿರಬೇಕಾದರೆ, ಅರಬ್ಬಿ
ಸಮುದ್ರದಲ್ಲಿ ಮತ್ತೆ ವಾಯುಭಾರ ಕುಸಿತ ಉಂಟಾಗಿದೆ. ಒಂದು ವೇಳೆ ಅದರ ಸಾಂಧ್ರತೆ ಜಾಸ್ತಿಯಾದರೆ, ಒಂದೆರಡು
ದಿನದೊಳಗೆ ಕರಾವಳಿಯಲ್ಲಿ ಮತ್ತೂಂದು ಚಂಡಮಾರುತ ಸೃಷ್ಟಿಯಾಗುವ ಮುನ್ಸೂಚನೆಯಿದೆ ಎಂದು ಹವಾಮಾನ
ಇಲಾಖೆ ಹೇಳಿದೆ.
ಸದ್ಯದ ಮಾಹಿತಿ ಪ್ರಕಾರ, ಈ ಬಾರಿಯ ಮುಂಗಾರು ಮೇ 29ರಂದೇ ಕೇರಳ ಕರಾವಳಿ ತೀರವನ್ನು ಪ್ರವೇಶಿಸಲಿದೆ. ಅಷ್ಟೇ ಅಲ್ಲ, ಈ ಮುಂಗಾರು ಮಾರುತ ರಾಜ್ಯದ ಕರಾವಳಿ ಭಾಗವನ್ನು ಕೂಡ ಆದಷ್ಟು ಬೇಗ ಪ್ರವೇಶಿಸುವ ಮೂಲಕ ಕರಾವಳಿ, ದಕ್ಷಿಣ ಒಳನಾಡಿನಲ್ಲಿ ನಿರೀಕ್ಷೆಯಂತೆ ಮಳೆಗಾಲ ಪ್ರಾರಂಭವಾಗುವ ಮುನ್ಸೂಚನೆಯಿದೆ.
ಬಂಗಾಳಕೊಲ್ಲಿಯಲ್ಲಿ ಈಗಾಗಲೇ ದಟ್ಟ ಮಾರುತ ಸೃಷ್ಟಿಯಾಗಿದ್ದು, ಮುಂಗಾರು ಪ್ರಾರಂಭದಲ್ಲೇ ಉತ್ತಮ ಮಳೆ ಬೀಳುವ ಸಾಧ್ಯತೆಯಿದೆ.
ಮುಂಗಾರು ಕಳೆದ ವರ್ಷ ಕೇರಳಕ್ಕೆ ಮೇ 30ರಂದು ಪ್ರವೇಶವಾಗಿತ್ತು. ಆದರೆ, ಕೇರಳ ತೀರ ಪ್ರವೇಶಿಸಿದ ನಂತರ ದುರ್ಬಲಗೊಂಡಿತ್ತು. ಇದರ ಪರಿಣಾಮ, ರಾಜ್ಯದಲ್ಲಿ ಒಂದು ವಾರದ ಬಳಿಕ ಅಂದರೆ ಜೂ.7ಕ್ಕೆ ಪ್ರವೇಶ ಪಡೆದು, ಜೂ.12ಕ್ಕೆ ರಾಜ್ಯಾದ್ಯಂತ ಮಳೆಗಾಲ ಆರಂಭವಾಗಿತ್ತು.ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಮುಂಗಾರು ವಾಡಿಕೆಯಂತೆ ಮೇ 25ರಂದು ಅಂಡಮಾನ್ ದಕ್ಷಿಣ ಭಾಗಕ್ಕೆ ಅಪ್ಪಳಿಸಿದೆ.
6 ತಿಂಗಳಲ್ಲಿ ಮೂರು ಚಂಡಮಾರುತ: ಕಳೆದ ವರ್ಷದ ಡಿಸೆಂಬರ್ ತಿಂಗಳಿನಿಂದ ಮೇ ತಿಂಗಳವರೆಗೆ ರಾಜ್ಯದ
ಪಾಲಿಗೆ ಒಟ್ಟು ಮೂರು ಪ್ರಬಲ ಚಂಡಮಾರುತ ಪರಿಣಾಮ ಬೀರಿದೆ. ಡಿಸೆಂಬರ್ನಲ್ಲಿ “ಓಖೀ’ ಚಂಡಮಾರುತ
ದಕ್ಷಿಣ ಭಾರತದ ಕರಾವಳಿಯನ್ನು ಅಪ್ಪಳಿಸಿತ್ತು. ಇದಾದ ಬಳಿಕ ಮೇ ತಿಂಗಳಿನಲ್ಲಿ “ಸಾಗರ್’ ಚಂಡಮಾರುತದ
ಪರಿಣಾಮದಿಂದಾಗಿ ಕರಾವಳಿ ತೀರದಲ್ಲಿ ಗಾಳಿ, ಮಳೆಯಾಗಿತ್ತು. ಇದಾದ ಕೆಲವೇ ದಿನದಲ್ಲಿ “ಮೆಕು°’ ಹೆಸರಿನ
ಮತ್ತೂಂದು ಪ್ರಬಲ ಚಂಡಮಾರುತ ಅರಬ್ಬಿ ಸಮುದ್ರದಲ್ಲಿ ಸೃಷ್ಟಿಯಾಗಿ ಈಗಾಗಲೇ ಒಮಾನ್ ದೇಶದಲ್ಲಿ ಸಾಕಷ್ಟು
ನಷ್ಟ-ಹಾನಿಯುಂಟು ಮಾಡಿದೆ.
ಸಿಡಿಲು ಬಡಿದು ವ್ಯಕ್ತಿ ಸಾವು
ರಾಜ್ಯದ ಕೆಲವೆಡೆ ಭಾನುವಾರವೂ ಮಳೆಯಾಗಿದೆ. ಧಾರವಾಡ ಸಮೀಪದ ಕಲಘಟಗಿ ತಾಲೂಕಿನ ಹಸರಂಬಿ ಗ್ರಾಮದಲ್ಲಿ ಹೊಲದಲ್ಲಿ ಕೆಲಸ ಮಾಡುತ್ತಿದ್ದಾಗ ಸಿಡಿಲು ಬಡಿದು ಶಿವಾಜಿ ನಾಗಪ್ಪ ಸಾಗ್ರೇಕರ (45) ಎಂಬುವರು ಮೃತಪಟ್ಟಿದ್ದಾರೆ.
ಮಂಗಳೂರಿನ ನೆಹರು ಮೈದಾನದಲ್ಲಿ ಭಾನುವಾರ ಸಂಜೆ ಆಯೋಜಿಸಿದ್ದ ಐಪಿಲ್ ಫೈನಲ್ ಪಂದ್ಯದ ನೇರ ಪ್ರಸಾರ ವೀಕ್ಷಿಸಲು ತೆರಳಿದ್ದ ಮಂಗಳೂರು ನಗರ ಸಶಸ್ತ್ರ ಮೀಸಲು ಪೊಲೀಸ್ ಪಡೆಯ ಸಿಬ್ಬಂದಿ ಸಿದ್ದಪ್ಪಜಿ. (23) ಅವರು ಸಿಡಿಲು ಬಡಿದು ಗಾಯಗೊಂಡಿದ್ದಾರೆ.
ಮುಂಗಾರು ಆಗಮಿಸುವುದಕ್ಕೆ ಮುಂಚಿತವಾಗಿ ಅರಬ್ಬಿ ಸಮುದ್ರದಲ್ಲಿ ಸ್ವಲ್ಪ ಮಟ್ಟಿನ ವಾಯುಭಾರ ಕುಸಿತ
ಉಂಟಾಗುತ್ತದೆ. ಇದರಿಂದಾಗಿ ಸದ್ಯ ಉತ್ತಮ ಮಳೆಯಾಗುತ್ತಿದೆ. ಇದು ತೀವ್ರಗತಿಯಲ್ಲಾದರೆ ಮುಂದಿನ ದಿನಗಳಲ್ಲಿ ಚಂಡ ಮಾರುತವಾಗಿ ಸೃಷ್ಟಿಯಾಗುವ ಸಾಧ್ಯತೆಯೂ ಇದೆ.
– ಗವಾಸ್ಕರ್ ಸಾಂಗ, ರಾಜ್ಯ
ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ ವಿಜ್ಞಾನಿ
Comments are closed.