ಗ್ರೇಟರ್ ನೊಯ್ಡಾ: ಬೆಳಗಿನ ಉಪಾಹಾರ ತಯಾರಿಸಲು ತಡವಾದುದಕ್ಕೆ ಕ್ರೂರ ಪತಿಯೋರ್ವ ತನ್ನ ಮಕ್ಕಳೆದುರೇ ಹೆಂಡತಿಯ ಉಸಿರುಗಟ್ಟಿಸಿ ಸಾಯಿಸಿದ ಅಮಾನವೀಯ ಘಟನೆ ಗ್ರೇಟರ್ ನೊಯ್ಡಾದ ಬಳಿ ಇರುವ ಕುಲೆಸ್ರಾ ಗ್ರಾಮದಲ್ಲಿ ನಡೆದಿದೆ.
ಆರೋಪಿಯನ್ನು ಮುಕೇಶ್ ಕುಮಾರ್ (32) ಎಂದು ಗುರುತಿಸಲಾಗಿದ್ದು, 28 ವರ್ಷದ ರೇಖಾ ಆತನ ಕ್ರೌರ್ಯಕ್ಕೆ ಬಲಿಯಾಗಿದ್ದಾಳೆ. ದಂಪತಿಗೆ 7 ವರ್ಷದ ಮಗ ಮತ್ತು 5 ವರ್ಷದ ಮಗಳಿದ್ದಾಳೆ.
ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಆರೋಪಿ ಕ್ಷುಲ್ಲಕ ವಿಷಯಗಳನ್ನಿಟ್ಟುಕೊಂಡು ಸದಾ ಪತ್ನಿ ಜತೆ ಜಗಳವಾಡುತ್ತಿದ್ದ. ಶನಿವಾರ ಬೆಳಿಗ್ಗೆ ಉಪಾಹಾರ ತಯಾರಿಸಲು ರೇಖಾ ತಡ ಮಾಡಿದ್ದಾಳೆ. ಇದರಿಂದ ಸಿಟ್ಟಿಗೆದ್ದ ಮುಕೇಶ್ ಜಗಳ ಆರಂಭಿಸಿದ್ದಾನೆ. ಇದರಿಂದ ಬೇಸತ್ತ ಆಕೆ ತನ್ನ ತವರಿಗೆ ಹೋಗಲು ನಿರ್ಧರಿಸಿ ಬ್ಯಾಗ್ ಪ್ಯಾಕ್ ಮಾಡಿದ್ದಾಳೆ. ಮಕ್ಕಳೊಂದಿಗೆ ಮನೆ ಬಿಟ್ಟು ಹೊರಟ ಆಕೆಯನ್ನು ತಡೆದ ಮುಕೇಶ್ ಆಕೆ ಧರಿಸಿದ್ದ ಸ್ಕಾರ್ಫ್ ಎಳೆದುಕೊಂಡು ಅದರಿಂದಲೇ ಕುತ್ತಿಗೆಗೆ ಬಿಗಿದು ತನ್ನೆಲ್ಲ ಶಕ್ತಿ ಹಾಕಿ ಎಳೆದಿದ್ದಾನೆ. ಪರಿಣಾಮ ರೇಖಾ ಸ್ಥಳದಲ್ಲಿಯೇ ಕುಸಿದು ಬಿದ್ದಿದ್ದಾಳೆ.
ಅದನ್ನೆಲ್ಲ ನೋಡುತ್ತಿದ್ದ ಮಕ್ಕಳು ಕಿರುಚಿಕೊಂಡಿದ್ದು, ಸ್ಥಳಕ್ಕೆ ಓಡಿ ಬಂದ ನೆರೆಹೊರೆಯವರು ಆಕೆಯನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ಅದಾಗಲೇ ಆಕೆ ಸಾವನ್ನಪ್ಪಿರುವುದಾಗಿ ವೈದ್ಯರು ಘೋಷಿಸಿದ್ದಾರೆ.
ಪರಾರಿಯಾಗಿದ್ದ ಆರೋಪಿಯನ್ನು ಬಂಧಿಸಿ ಜೈಲಿಗಟ್ಟಲಾಗಿದೆ.
Comments are closed.