ಕರ್ನಾಟಕ

ಶೀಲ ಶಂಕಿಸಿ ಪತ್ನಿಗೆ ಬೆಂಕಿ; ಗೃಹಿಣಿ ಸಾವು

Pinterest LinkedIn Tumblr


ಕಲಬುರ್ಗಿ: ಶೀಲ ಶಂಕಿಸಿ ಪತ್ನಿಗೆ ಬೆಂಕಿ ಹಚ್ಚಿದ ಪ್ರಕರಣದಲ್ಲಿ ತೀವ್ರ ಸುಟ್ಟ ಗಾಯಗಳಿಂದ ನರಳುತ್ತಿದ್ದ ಗೃಹಿಣಿ ಚಿಕಿತ್ಸೆ ಫಲಿಸದೆ ಸಾವನ್ನಪ್ಪಿದ್ದಾಳೆ.

ಕಲಬುರ್ಗಿಯ ಜಿಲ್ಲಾ ಆಸ್ಪತ್ರೆಯಲ್ಲಿ ಸಾವನ್ನಪ್ಪಿರುವ ಮೃತಳನ್ನು ಶಾರದಾಬಾಯಿ ಪಾಲಕೆನವರ್(21) ಎಂದು ಗುರುತಿಸಲಾಗಿದೆ. ಆಳಂದ ತಾಲೂಕಿನ ಕೊಡಲ ಹಂಗರಗಾ ಗ್ರಾಮದಲ್ಲಿ ನಿನ್ನೆ ಈ ಘಟನೆ ನಡೆದಿತ್ತು. ಪತ್ನಿಯ ಶೀಲ ಶಂಕಿಸಿ ಪತಿ ವೀರೇಶ ಮತ್ತು ಮನೆಯವರು ಸೀಮೆ ಎಣ್ಣೆ ಸುರಿದು ಬೆಂಕಿ ಹಚ್ಚಿದ್ದರು. ಸುಟ್ಟ ಗಾಯಗಳಿಂದ ನರಳುತ್ತಿದ್ದ ಮಹಿಳೆಯನ್ನು ಕಲಬುರ್ಗಿ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೆ ಗೃಹಿಣಿ ಇಂದು ಕೊನೆಯುಸಿರೆಳೆದಿದ್ದಾಳೆ.

ಒಂದು ವರ್ಷದ ಹಿಂದೆಯಷ್ಟೇ ಶಾರದಾಬಾಯಿ ಮತ್ತು ವೀರೇಶನ ಮದುವೆಯಾಗಿತ್ತು. ಮದುವೆಯಾದಾಗಿನಿಂದಲು ಅನುಮಾದಿಂದ ನೋಡುತ್ತಿದ್ದ ಪತಿ, ಶೀಲದ ಬಗ್ಗೆ ಶಂಕೆ ವ್ಯಕ್ತಡಿಸುತ್ತಿದ್ದ ಎನ್ನಲಾಗಿದೆ. ಮನೆಯಲ್ಲಿ ಸ್ನಾನಕ್ಕೆಂದು ತೆರಳಿದ್ದ ಶಾರದಾಬಾಯಿಯನ್ನು ಎಳೆತಂದು ಪತಿ ಮತ್ತು ಮನೆಯವರು ಸೀಮೆ ಎಣ್ಣೆ ಸುರಿದು ಬೆಂಕಿ ಹಚ್ಚಿದ್ದಾರೆ ಎಂದು ಮೃತಳ ಪೋಷಕರು ಆರೋಪಿಸಿದ್ದಾರೆ. ಪತಿ ವೀರೇಶ, ಮಾವ ಗುಂಡಪ್ಪ, ಅತ್ತೆ ನೀಲಮ್ಮ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಆಳಂದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

Comments are closed.