ಬೆಂಗಳೂರು: ಕುಡಿದ ಮತ್ತಿನಲ್ಲಿ ಅಸಭ್ಯವಾಗಿ ವರ್ತಿಸಿ, ಮಾನ ತೆಗೆಯಲು ಬಂದವನಿಗೆ ತಕ್ಕ ಶಾಸ್ತಿ ಮಾಡಿಸಿದ್ದಾಳೆ ಈ ಮಹಿಳೆ. ಅಷ್ಟು ಮಾತ್ರ ಅಲ್ಲ, ಆತನನ್ನು ಅಟ್ಟಾಡಿಸಿ ಪೊಲೀಸರಿಗೆ ಹಿಡಿದು ಕೊಟ್ಟಿದ್ದಾಳೆ.
ಕುಂದಲಹಳ್ಳಿಯ ಪಿಜಿಯೊಂದರಲ್ಲಿರುವ 25 ವರ್ಷದ ಐಟಿ ಉದ್ಯೋಗಿಯಾಗಿರುವ ಒಡಿಶಾದ ಭುವನೇಶ್ವರ ಮೂಲದ ಮಹಿಳೆಯೋರ್ವರು ತೋರಿದ ಧೀರತನ, ಇತರರಿಗೆ ಮಾದರಿಯಾಗಿದೆ.
ರಾತ್ರಿ 9.30ರ ಸುಮಾರಿಗೆ ವಾಕಿಂಗ್ ಹೋಗಲು ಹೊರಬಂದಿದ್ದ ಮಹಿಳೆಯ ಬಳಿ ಕಟ್ಟಡ ಕಾರ್ಮಿಕ ವಿಜಯ್ ಕುಮಾರ್ ಅಸಭ್ಯವಾಗಿ ನಡೆದುಕೊಂಡಿದ್ದು, ಆಕೆಯನ್ನು ರಸ್ತೆಗೆ ಬೀಳಿಸಿ, ಬಟ್ಟೆ ಹರಿಯಲು ಮುಂದಾಗಿದ್ದಾನೆ. ಧೃತಿಗೆಡದ ಮಹಿಳೆ, ಕುಮಾರ್ಗೆ ಥಳಿಸಿದ್ದಾಳೆ.
ಈ ವೇಳೆ ಕುಮಾರ್ ಪರಾರಿಯಾಗಲು ಯತ್ನಿಸಿ, ಅಲ್ಲಿಂದ ಓಡಿದ್ದಾನೆ. ಇಷ್ಟಕ್ಕೆ ಸುಮ್ಮನಾಗದ ಮಹಿಳೆ, ಕುಮಾರ್ನನ್ನು ಬೆನ್ನಟ್ಟಿದ್ದು, ಸ್ಥಳೀಯರ ಸಹಾಯದೊಂದಿಗೆ ಪೊಲೀಸರಿಗೆ ಒಪ್ಪಿಸಿದ್ದಾಳೆ.
ಮಾರತಹಳ್ಳಿ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದ್ದು, ಮಧ್ಯಪಾನದ ನಶೆಯಲ್ಲಿ ಏನು ಮಾಡಿದೆನೆಂದು ತಿಳಿದಿಲ್ಲ ಎಂದು ಕುಮಾರ್ ವಿಚಾರಣೆ ವೇಳೆ ಪೊಲೀಸರಲ್ಲಿ ಹೇಳಿದ್ದಾನೆ. ಆದರೆ ಇದನ್ನು ಮಹಿಳೆ ಅಲ್ಲಗಳೆದಿದ್ದು, ಕುಮಾರ್ ನಶೆಯಲ್ಲಿರಲಿಲ್ಲ ಎಂದು ಹೇಳಿಕೆ ನೀಡಿದ್ದಾಳೆ. ಪೊಲೀಸರು ವಿಜಯ್ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.
ಚಾಲಕರಿಂದ ಲೈಂಗಿಕ ದೌರ್ಜನ್ಯ:
ವೈಟ್ಫೀಲ್ಡ್ನ ಇಸಿಸಿ ರಸ್ತೆಯಲ್ಲಿ ಗುರುವಾರ ರಾತ್ರಿ 30 ವರ್ಷದ ಮಹಿಳೆ ಮೇಲೆ ಲೈಂಗಿಕ ದೌರ್ಜನ್ಯ ಎಸಗಿರುವ ಸಂಬಂಧ ಪ್ರಕರಣ ದಾಖಲಾಗಿದೆ. ಮಹಿಳೆ ಸ್ವತಃ ಪೊಲೀಸರಲ್ಲಿ ದೂರು ನೀಡಿದ್ದು, ಸಿಟಿಲೈಟ್ ಅಪಾರ್ಟ್ಮೆಂಟ್ ಬಳಿ ಖಾಸಗಿ ಶಾಲಾ ವಾಹನ ಚಾಲಕರಾಗಿರುವ ಐವರು, ದಾರಿಯಲ್ಲಿ ಅಡ್ಡಗಟ್ಟಿ ಲೈಂಗಿಕ ದೌರ್ಜನ್ಯ ನಡೆಸಿರುವುದಾಗಿ ದೂರು ನೀಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
Comments are closed.