ಕರ್ನಾಟಕ

ರೈತರ ಸಾಲಮನ್ನಾಗೆ ಶೇ.50ರಷ್ಟು ಕೇಂದ್ರ ಸರ್ಕಾರ ನೆರವು ನೀಡಲು ಕುಮಾರಸ್ವಾಮಿ ಒತ್ತಾಯ

Pinterest LinkedIn Tumblr

ನವದೆಹಲಿ: ಕರ್ನಾಟಕದಲ್ಲಿ ಸುಮಾರು 85 ಲಕ್ಷ ಮಂದಿ ರೈತರು ವಿವಿಧ ಬ್ಯಾಂಕುಗಳಲ್ಲಿ ಕೃಷಿ ಸಾಲ ತೆಗೆದುಕೊಂಡಿದ್ದಾರೆ. ಆದರೆ ಸತತ ಬರಗಾಲ, ಬೆಳೆನಾಶಗಳಿಂದಾಗಿ ಸಾಕಷ್ಟು ಇಳುವರಿ ಬಾರದೆ ಕಂಗಾಲಾಗಿ ಹೋಗಿರುವ ರೈತರು ಸಾಲವನ್ನು ಹಿಂತಿರುಗಿಸಲಾಗದೆ ತೊಂದರೆ ಅನುಭವಿಸುತ್ತಿದ್ದಾರೆ. ಇದಕ್ಕೆ ಕೇಂದ್ರ ಸರ್ಕಾರ ಸಾಲ ಮನ್ನಾದ ಶೇಕಡಾ 50ರಷ್ಟು ಭಾಗವನ್ನು ಬಿಡುಗಡೆ ಮಾಡಬೇಕೆಂದು ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಒತ್ತಾಯಿಸಿದ್ದಾರೆ.

ಅವರು ಇಂದು ದೆಹಲಿಯಲ್ಲಿ ನೀತಿ ಆಯೋಗ ಮಂಡಳಿಯ ನಾಲ್ಕನೇ ಸಭೆಯಲ್ಲಿ ಭಾಗವಹಿಸಿ ಮಾತನಾಡಿ, ಇಂದು ರೈತರ ಸಾಲದ ಸುಳಿಯಲ್ಲಿ ಸಿಲುಕಿ ಹೋಗಿದ್ದಾರೆ. ನೂತನ ಸಮ್ಮಿಶ್ರ ಸರ್ಕಾರ ಇವರ ಸಮಸ್ಯೆಗೆ ಸ್ಪಂದಿಸಲು ಸಿದ್ದವಿದ್ದು ಕೇಂದ್ರ ಸರ್ಕಾರ ನೆರವು ನೀಡಬೇಕು ಎಂದು ಹೇಳಿದರು.

ಕೃಷಿ ಮಾರುಕಟ್ಟೆ ಸುಧಾರಣೆಯಲ್ಲಿ ಕರ್ನಾಟಕ ಮುಂಚೂಣಿಯಲ್ಲಿದೆ. ಕರ್ನಾಟಕ ಕೃಷಿ ಮಾರುಕಟ್ಟೆ ನೀತಿ 2013 ಹಲವು ಸುಧಾರಣೆಗಳನ್ನು ತಂದಿದೆ. ಸಮಾನ ಮಾರುಕಟ್ಟೆ ವೇದಿಕೆ (ಯುಪಿಎಮ್) ರೈತರಿಗೆ ಬಹಳ ಉಪಕಾರಿಯಾಗಿದ್ದು ರೈತರ ಬೆಳೆಗಳಿಗೆ ಸ್ಪರ್ಧಾತ್ಮಕ ಬೆಲೆ ನಿಗದಿಪಡಿಸಲಾಗುತ್ತದೆ ಎಂದರು,

ತಮ್ಮ ಭಾಷಣಲ್ಲಿ ಮುಖ್ಯಮಂತ್ರಿ, ಹವಾಮಾನ ಚೇತರಿಕೆ ಕೃಷಿ ಬಗ್ಗೆ ಪ್ರಸ್ತಾಪಿಸಿದರು. ಕೃಷಿ ವಲಯದಲ್ಲಿ ಹವಾಮಾನ ಬದಲಾವಣೆ ಮುಖ್ಯವಾಗುತ್ತದೆ. ದೇಶದಲ್ಲಿ ಹವಾಮಾನ ಚೇತರಿಕೆ ಕೃಷಿ ಕ್ರಾಂತಿಯನ್ನು ತರಲು ತಜ್ಞರ ನೆರವು ಪಡೆದು ವಿಸ್ತಾರ ಚೌಕಟ್ಟು ಮತ್ತು ಪದ್ದತಿಯನ್ನು ಅಳವಡಿಸಬೇಕು ಎಂದು ಒತ್ತಾಯಿಸಿದರು.

ಇಂದು ಕೃಷಿ ಸೇರಿದಂತೆ ಬೇರೆ ವಲಯಗಳಲ್ಲಿ ನೀರಿನ ಅಭಾವ ಉಂಟಾಗುತ್ತಿದ್ದು ಅದನ್ನು ಬಗೆಹರಿಸಲು ಕರ್ನಾಟಕ ಸರ್ಕಾರ ಕೆರೆ ಸಂಜೀವಿನಿಯಂತಹ ಕ್ರಮಗಳನ್ನು ಅನುಸರಿಸಿದೆ. ಒಂದು ದಶಕವನ್ನಿಡೀ ನೀರಿನ ಸಂರಕ್ಷಣೆಗೆ ಬಳಸಬೇಕು. ಅದನ್ನು ನೀರಿನ ದಶಕ ಎಂದು ಕರೆಯೋಣ. ಅದು ಜನತೆಯ ಚಳವಳಿಯಾಗಿ ಮಾರ್ಪಡಬೇಕು. ಇದಕ್ಕೆ ಕರ್ನಾಟಕ ಸರ್ಕಾರ ಸಂಪೂರ್ಣ ಬದ್ಧವಾಗಿದೆ ಎಂದರು.

ಆರೋಗ್ಯ ವಲಯ ಸೇರಿದಂತೆ ನಗರಾಭಿವೃದ್ಧಿ ಕುರಿತು ಸಹ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ತಮ್ಮ ಭಾಷಣದಲ್ಲಿ ಪ್ರಸ್ತಾಪಿಸಿದರು.

Comments are closed.