ಲಖನೌ: ಇತ್ತೀಚಿಗೆ ರಾಜಕೀಯ ಪಕ್ಷವನ್ನು ಸ್ಥಾಪಿಸಿರುವ ಶಿಯಾ ಮಂಡಳಿ ಮುಖ್ಯಸ್ಥ ರಿಜ್ವಿ ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣಕ್ಕಾಗಿ 10,000 ರೂಪಾಯಿ ದಾನ ಮಾಡಿ ಕೋಮು ಸೌಹಾರ್ದತೆ ಮೆರೆದಿದ್ದಾರೆ.
ರಾಮಜನ್ಮಭೂಮಿ ನ್ಯಾಸದ ಅಧ್ಯಕ್ಷ, ಮಹಂತ್ ನೃತ್ಯ ಗೋಪಾಲ್ ದಾಸ್ ಅವರ ಜನ್ಮ ದಿನದ ಹಿನ್ನೆಲೆಯಲ್ಲಿ ಅವರನ್ನು ಭೇಟಿಯಾಗಿ ಹಾರೈಸಲು ರಿಜ್ವಿ ಅಯೋಧ್ಯೆಗೆ ಬಂದಿದ್ದರು.
ಬಳಿಕ ಮಾಧ್ಯಮದವರೊಂದಿಗೆ ಮಾತನಾಡುತ್ತಿದ್ದ ಅವರು, ನಾನು ರಾಮ ಮಂದಿರ ನಿರ್ಮಾಣಕ್ಕಾಗಿ ದಾನ ಮಾಡಿದ್ದಕ್ಕೆ ತೀವ್ರವಾದಿ ಮುಸ್ಲಿಮರು ನನ್ನನ್ನು ಮುಸ್ಲಿಂ ಧರ್ಮದಿಂದ ಹೊರಹಾಕಲು ಬಯಸಿದರೆ ನನ್ನದೇನೂ ಅಭ್ಯಂತರವಿಲ್ಲ. ನನ್ನ ಈ ಕೊಡುಗೆ ಆರಂಭವಷ್ಟೇ. ವಿವಾದಿತ ಸ್ಥಳದಲ್ಲಿ ರಾಮ ಮಂದಿರ ನಿರ್ಮಾಣ ಕಾರ್ಯ ಆರಂಭವಾಗುತ್ತಿದ್ದಂತೆ ಜಾತ್ಯತೀತ ಮುಸ್ಲಿಮರು ಬೃಹತ್ ಮೊತ್ತದ ಹಣವನ್ನು ದಾನ ಮಾಡಲಿದ್ದಾರೆ, ಎಂದು ಹೇಳಿದ್ದಾರೆ.
ಜಾತ್ಯತೀತ ಮುಸ್ಲಿಮರು ವಿವಾದಕ್ಕೆ ಪೂರ್ಣವಿರಾಮ ಬಿದ್ದು ರಾಮ ಮಂದಿರ ನಿರ್ಮಾಣವಾಗಲೆಂದು ಬಯಸುತ್ತಿದ್ದಾರೆ. ಆದರೆ ಪಾಕಿಸ್ತಾನದ ಕೆಲವು ಕೋಮುವಾದಿ ಶಕ್ತಿ ತೀವ್ರವಾದಿ ಮುಸ್ಲಿಮರನ್ನು ತಪ್ಪುದಾರಿಗೆಳೆಯುತ್ತ ವಿವಾದಕ್ಕೆ ತುಪ್ಪ ಸುರಿಯಲು ಉತ್ತೇಜನ ನೀಡುತ್ತಿದೆ ಎಂದವರು ಆರೋಪಿಸಿದ್ದಾರೆ.
Comments are closed.