ಬೆಂಗಳೂರು : ಬೆಳೆ ಸಾಲವನ್ನು ದೇಶದ ಆಹಾರ ಉತ್ಪಾದನೆಗಾಗಿ ಸರ್ಕಾರದಿಂದ ನೀಡಿರುವ ಧನ ಸಹಾಯ ಎಂದು ಪರಿಗಣಿಸಿ ಸರ್ಕಾರ ರೈತರ ಎಲ್ಲ ಸಾಲವನ್ನು ಮನ್ನಾ ಮಾಡಬೇಕು ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಒತ್ತಾಯಿಸಿದೆ.
ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಂಘದ ರಾಜ್ಯಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್, ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಬಜೆಟ್ನಲ್ಲಿ ಸಾಲ ಮನ್ನಾ ಘೋಷಿಸಬೇಕು. ರೈತರ ಸಾಲ ಮನ್ನಾದಿಂದ ರಾಜ್ಯದಲ್ಲಿ ಸಂಕಷ್ಟಎದುರಾಗಲಿದೆ ಎಂಬ ಆರ್ಥಿಕ ತಜ್ಞರ ಅಭಿಪ್ರಾಯ ಸರಿಯಿಲ್ಲ. ಯಾವುದೇ ಕಾರಣಕ್ಕೂ ತಪ್ಪು ಲೆಕ್ಕಾಚಾರ ನೀಡುವ ಆರ್ಥಿಕ ತಜ್ಞರ ಸಲಹೆಗಳನ್ನು ಸ್ವೀಕರಿಸಬಾರದು. ಚುನಾವಣಾ ವೇಳೆ ನೀಡಿದ ಭರವಸೆಯಂತೆ ಸಾಲ ಮನ್ನಾ ಮಾಡಬೇಕು. ಬಜೆಟ್ನಲ್ಲಿ ರೈತರ ಸಾಲ ಮನ್ನಾ ಘೋಷಿಸದಿದ್ದರೆ ಯಾವ ರೈತರೂ ಸಾಲ ತೀರಿಸಬೇಡಿ. ನಮ್ಮಿಂದ ಸಾಲ ಕಟ್ಟಲು ಸಾಧ್ಯವಿಲ್ಲವೆಂದು ಬ್ಯಾಂಕ್ಗಳಿಗೆ ತಿಳಿಸಿ ಎಂದು ರೈತರಿಗೆ ಕರೆ ನೀಡಿದರು.
ಸಾಲ ಮನ್ನಾ ವಿಚಾರದಲ್ಲಿ ರಾಜ್ಯದ ಸಮ್ಮಿಶ್ರ ಸರ್ಕಾರದ ನಿಲುವು ದ್ವಂದ್ವಮಯವಾಗಿದೆ. ಕುಮಾರಸ್ವಾಮಿ ಅವರು ರೈತರ ಸಂಕಷ್ಟವನ್ನು ಅರ್ಥಮಾಡಿಕೊಳ್ಳಬೇಕು. ಸಾಲ ಮನ್ನಾ ವಿಚಾರಕ್ಕೆ ಸಂಬಂಧಿಸಿದಂತೆ ಕಾಲಹರಣ ಮಾಡಬಾರದು. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಾಲ ಮನ್ನಾ ವಿಚಾರದಲ್ಲಿ ಸರ್ಕಾರಕ್ಕೆ ಸಂಪೂರ್ಣ ಸಹಕಾರ ನೀಡಬೇಕು ಎಂದು ಹೇಳಿದರು.
ರೈತರ ಸಂಕಷ್ಟಗಳನ್ನು ಪರಿಹರಿಸಲು ರೈತರ ಸಂಪೂರ್ಣ ಸಾಲ ಮನ್ನಾ ಮಾಡಬೇಕು ಹಾಗೂ ಸ್ವಾಮಿನಾಥನ್ ವರದಿ ಅನ್ವಯ ಕನಿಷ್ಠ ಬೆಂಬಲ ಬೆಲೆ ಘೋಷಿಸಬೇಕೆಂದು ಆಗ್ರಹಿಸಿದರು.
Comments are closed.