ಕರ್ನಾಟಕ

ಬೆಂಗಳೂರಿನಲ್ಲಿ ಓಲಾ ಕ್ಯಾಬ್ ಹತ್ತಿದ ಮಹಿಳೆಯನ್ನು ಅಪಹರಿಸಿ ಲೈಂಗಿಕ ಕಿರುಕುಳ ! ಚಾಲಕನ ಬಂಧನ

Pinterest LinkedIn Tumblr

ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಕಾರು ಚಾಲಕನೋರ್ವ ಮಹಿಳೆಯ ಅಪಹರಣಕ್ಕೆ ಯತ್ನಿಸಿ ಪೊಲೀಸರಿಗೆ ಸಿಕ್ಕಿಬಿದ್ದಿರುವ ಘಟನೆ ಗುರುವಾರ ನಡೆದಿದೆ.

ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಹೋಗಲು ಓಲಾ ಕ್ಯಾಬ್‌ ಹತ್ತಿದ್ದ ಯುವತಿಯನ್ನು ಅಪಹರಿಸಿದ್ದ ಕ್ಯಾಬ್‌ ಚಾಲಕ, ಅವರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ ಎನ್ನಲಾಗಿದೆ. ಈ ಬಗ್ಗೆ ಸ್ವತಃ ಸಂತ್ರಸ್ಥ ಮಹಿಳೆ ಪೊಲೀಸ್ ದೂರು ನೀಡಿದ್ದು, ತಮ್ಮ ದೂರಿನಲ್ಲಿ ಲೈಂಗಿಕ ದೌರ್ಜನ್ಯ, ಅಪಹರಣ ಹಾಗೂ ಪಾನಮತ್ತ ಚಾಲನೆ ಆರೋಪದಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಪ್ರಸ್ತುತ ಮಹಿಳೆ ದೂರಿನ ಆಧಾರದ ಮೇರೆಗೆ ಓಲಾ ಕ್ಯಾಬ್ ಚಾಲಕ ಸುರೇಶ್‌ ಎಂಬಾತನನನ್ನು ಬಂಧಿಸಲಾಗಿದೆ ಎಂದು ಈಶಾನ್ಯ ವಿಭಾಗದ ಡಿಸಿಪಿ ಕಲಾ ಕೃಷ್ಣಮೂರ್ತಿ ತಿಳಿಸಿದ್ದಾರೆ.

ಪೊಲೀಸ್ ಮೂಲಗಳ ಪ್ರಕಾರ ಆಂಧ್ರಪ್ರದೇಶದ ಸುರೇಶ್ ಎಂಬಾತ ವರ್ಷದ ಹಿಂದಷ್ಟೇ ನಗರಕ್ಕೆ ಬಂದಿದ್ದ. ಸುಬ್ಬಯ್ಯನಪಾಳ್ಯದಲ್ಲಿ ವಾಸವಿದ್ದುಕೊಂಡು, ಓಲಾ ಕ್ಯಾಬ್‌ ಓಡಿಸುತ್ತಿದ್ದಾನೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಆಗಿದ್ದೇನು?
ಯಲಹಂಕದಲ್ಲಿ ವಾಸವಿರುವ ಸಂತ್ರಸ್ತೆ, ಖಾಸಗಿ ಕಂಪನಿಯೊಂದರ ಉದ್ಯೋಗಿಯಾಗಿದ್ದು, ಹೊರ ರಾಜ್ಯಕ್ಕೆ ಹೊರಟಿದ್ದ ಅವರು, ಗುರುವಾರ ನಸುಕಿನಲ್ಲಿ ಪ್ರಯಾಣಿಸಲು ವಿಮಾನ ಟಿಕೆಟ್‌ ಕಾಯ್ದಿರಿಸಿದ್ದರು. ವಿಮಾನ ನಿಲ್ದಾಣಕ್ಕೆ ತೆರಳಲು ಓಲಾ ಕ್ಯಾಬ್‌ ಹತ್ತಿದ್ದರು. ರಾತ್ರಿ 1.30ರ ಸುಮಾರಿಗೆ ಬಳ್ಳಾರಿ ರಸ್ತೆಯಲ್ಲಿರುವ ಮೊದಲನೇ ಟೋಲ್‌ ದಾಟಿದ್ದ ಚಾಲಕ ವಿಮಾನ ನಿಲ್ದಾಣದತ್ತ ಹೋಗುವ ಬದಲು ಹೈದರಾಬಾದ್‌ ರಸ್ತೆಯತ್ತ ಕಾರು ತಿರುಗಿಸಿದ್ದ. ಮಾರ್ಗ ಬದಲಿಸಿದ್ದನ್ನು ಪ್ರಶ್ನಿಸಿದ್ದ ಸಂತ್ರಸ್ತೆ ವಿಮಾನ ನಿಲ್ದಾಣ ರಸ್ತೆಯಲ್ಲಿ ಹೋಗುವಂತೆ ಒತ್ತಾಯಿಸಿದ್ದರು. ಆಗ ಆರೋಪಿ, ಅವಾಚ್ಯ ಶಬ್ದಗಳಿಂದ ನಿಂದಿಸಿದ್ದ. ಕಾರುಗಳ ಬಾಗಿಲುಗಳನ್ನು ಲಾಕ್‌ ಮಾಡಿ ಕೈಹಿಡಿದು ಎಳೆದಾಡಿದ್ದ.

ಬಳಿಕ ಚಿಕ್ಕಜಾಲ ಟೋಲ್‌ ಗೇಟ್‌ನಲ್ಲಿ ಶುಲ್ಕ ಪಾವತಿಸಲೆಂದು ಆರೋಪಿ ಕ್ಯಾಬ್‌ ನಿಲ್ಲಿಸಿದ್ದ. ಟೋಲ್ ಸಿಬ್ಬಂದಿಯನ್ನು ಕಂಡ ಸಂತ್ರಸ್ತೆ, ಸಹಾಯಕ್ಕಾಗಿ ಕೂಗಾಡಿದ್ದರು. ಆಗ ಸಿಬ್ಬಂದಿ ಚಾಲಕನನ್ನು ಕಾರಿನಿಂದ ಕೆಳಗೆ ಇಳಿಸಿ ವಿಚಾರಿಸಿದಾಗ ಪ್ರಕರಣ ಬೆಳಕಿಗೆ ಬಂದಿದೆ. ಕೂಡಲೇ ಸ್ಥಳಕ್ಕೆ ಬಂದ ಗಸ್ತು ಸಿಬ್ಬಂದಿ ಆರೋಪಿಯನ್ನು ಠಾಣೆಗೆ ಕರೆತಂದರು. ಸಂತ್ರಸ್ತೆಯಿಂದ ದೂರು ಪಡೆದು ಆರೋಪಿಯನ್ನು ಬಂಧಿಸಿದರು. ಆರೋಪಿಯನ್ನು ಆಸ್ಪತ್ರೆಗೆ ಕರೆದೊಯ್ದು ಪರೀಕ್ಷೆ ಮಾಡಿಸಲಾಯಿತು. ಆತನ ದೇಹದಲ್ಲಿ ಮದ್ಯದ ಅಂಶವಿರುವುದು ಖಾತ್ರಿಯಾಯಿತು ಎಂದು ಪೊಲೀಸರು ಮಾಹಿತಿ ನೀಡಿದರು.

ಸಿಬ್ಬಂದಿ ಇರದಿದ್ದರೆ, ಮಾನ–ಪ್ರಾಣಕ್ಕೆ ಕುತ್ತು: ಸಂತ್ರಸ್ಥೆ ಹೇಳಿಕೆ
ಘಟನೆ ಬಳಿಕ ಮಾತನಾಡಿದ ಸಂತ್ರಸ್ಥ ಮಹಿಳೆ, ‘ಟೋಲ್‌ಗೇಟ್‌ ಸಿಬ್ಬಂದಿ ನನ್ನ ಜೀವ ಉಳಿಸಿದರು. ಅವರು ಇರದಿದ್ದರೆ, ನನ್ನ ಮಾನ ಹಾಗೂ ಪ್ರಾಣಕ್ಕೆ ಕುತ್ತು ಬರುತ್ತಿತ್ತು. ಒಬ್ಬಂಟಿಯಾಗಿ ಲಗೇಜ್‌ ಸಮೇತ ಕ್ಯಾಬ್‌ ಹತ್ತಿದ್ದೆ. ಸ್ವಲ್ಪ ದೂರ ಹೋಗುತ್ತಿದ್ದಂತೆ ಚಾಲಕನ ವರ್ತನೆ ಬದಲಾಯಿತು. ನನ್ನನ್ನು ಕೆಟ್ಟದಾಗಿ ನೋಡಲಾರಂಭಿಸಿದ್ದ. ಆತ, ಬಾಗಿಲುಗಳನ್ನು ಬಂದ್ ಮಾಡಿದ್ದ. ಅವಾಗಲೇ, ನನಗೆ ಭಯ ಶುರುವಾಯಿತು. ನಿಲ್ದಾಣಕ್ಕೆ ಹೋಗಬೇಕಿದ್ದ ಆತ, ಹೈದರಾಬಾದ್‌ ರಸ್ತೆಯತ್ತ ನನ್ನನ್ನು ಕರೆದೊಯ್ಯುತ್ತಿದ್ದ. ಎಷ್ಟೇ ಕೂಗಾಡಿದರೂ ಕ್ಯಾಬ್‌ ನಿಲ್ಲಿಸಿರಲಿಲ್ಲ. ಟೋಲ್‌ಗೇಟ್‌ ಸಿಬ್ಬಂದಿ ನನ್ನನ್ನು ರಕ್ಷಿಸಿದಾಗಲೇ, ಹೋದ ಜೀವ ಮರಳಿ ಬಂದಂತಾಯಿತು ಎಂದು ಹೇಳಿದ್ದಾರೆ.

Comments are closed.