ಅಗರ್ತಲಾ: ಭಾರತದ ಪುರಾತನ ದೇವಸ್ಥಾನಗಳಲ್ಲಿ ಬಂಗಾರದ ಭಂಡಾರವೇ ಅಡಗಿರುತ್ತದೆ ಎನ್ನುವುದು ಹೊಸ ಸಂಗತಿಯಲ್ಲ. ಇದೀಗ ಈ ಸಾಲಿಗೆ ಮಗದೊಂದು ದೇವಸ್ಥಾನವೂ ಸೇರ್ಪಡೆಯಾಗಿದೆ. ತ್ರಿಪುರ ಸುಂದರಿ ದೇವಸ್ಥಾನದಲ್ಲಿ ಕೆಜಿಗಟ್ಟಲೆ ಬಂಗಾರ, ಬೆಳ್ಳಿಯ ರಾಶಿಯೇ ಸಿಕ್ಕಿದೆ.
ಹಿಂದೂ ಧರ್ಮದ 51 ಶಕ್ತಿಪೀಠಗಳಲ್ಲಿ ಗೋಮತಿಯ ತ್ರಿಪುರೇಶ್ವರಿಯೂ ಒಂದು.. ತ್ರಿಪುರದಲ್ಲಿರೋ 500 ವರ್ಷಗಳ ಇತಿಹಾಸದ ಈ ದೇಗುಲದ ಅಪಾರ ಸಂಪತ್ತು ಇದೀಗ ಬೆಳಕಿಗೆ ಬಂದಿದ್ದು, ದೇಶದ ಶ್ರೀಮಂತ ದೇಗುಲಗಳ ಪಟ್ಟಿಯಲ್ಲಿ ತ್ರಿಪುರೇಶ್ವರಿಯೂ ಸೇರ್ಪಡೆಯಾಗಿದೆ. ಸುಮಾರು 69 ವರ್ಷಗಳ ಬಳಿಕ ಇಲ್ಲಿನ ಚಿನ್ನಾಭರಣಗಳನ್ನು ಲೆಕ್ಕಹಾಕಲಾಗುತ್ತಿದ್ದು, ಪುರಾತನ ಕಾಲದ ಬಂಗಾರದ ಭಂಡಾರವೇ ಇರೋದು ಬೆಳಕಿಗೆ ಬಂದಿದೆ. ಇದೂವರೆಗೆ 9 ಕೆಜಿ ಬಂಗಾರ, 42 ಕೆಜಿ ಬೆಳ್ಳಿ ಸಿಕ್ಕಿದ್ದು, ಮೂರನೇ ದಿನವೂ ಎಣಿಕೆ ಕಾರ್ಯ ಮುಂದುವರಿದಿದೆ.
ಅಗರ್ತಲಾದಿಂದ 60 ಕಿಲೋ ಮೀಟರ್ ದೂರದಲ್ಲಿದೆ ತ್ರಿಪುರೇಶ್ವರಿ ದೇಗುಲ. ಸಾವಿರಾರು ಭಕ್ತರು ಪ್ರತೀ ವರ್ಷ ದೇವಿಯ ದರ್ಶನಕ್ಕೆ ಬರುತ್ತಾರೆ. ಪುರಾತನ ದೇಗುಲವಾಗಿರುವುದರಿಂದ, ಜಗತ್ತಿನ ಪ್ರವಾಸಿತಾಣಗಳಲ್ಲಿ ಸೇರಿಸುವ ದೃಷ್ಟಿಯಿಂದ ತ್ರಿಪುರಾ ಸಿಎಂ ಬಿಪ್ಲಬ್ ಕುಮಾರ್, ದೇವಸ್ಥಾನದಲ್ಲಿರೋ ಸಂಪತ್ತಿನ ಲೆಕ್ಕಾಚಾರಕ್ಕೆ ಆದೇಶ ನೀಡಿದ್ದರು. ಈ ಹಿನ್ನೆಲೆಯಲ್ಲಿ ಜಿಲ್ಲೆಯ ಮಾಜಿಸ್ಟ್ರೇಟರ್ ಹಾಗೂ ಬಿಗಿ ಪೊಲೀಸ್ ಬಂದೋಬಸ್ತ್ ನಡುವೆ ಸಂಪತ್ತಿನ ಎಣಿಕೆ ನಡೆಸಲಾಗುತ್ತಿದೆ.
ತ್ರಿಪುರೇಶ್ವರಿ ದೇಗುಲದಲ್ಲಿ ಒಟ್ಟು 7 ಟ್ರಂಕ್ಗಳಿದ್ದೂ, ಅಷ್ಟರಲ್ಲೂ ಬೆಲೆಬಾಳುವ ಚಿನ್ನಾಭರಣಗಳನ್ನ ತುಂಬಿಸಿಡಲಾಗಿದೆಯಂತೆ ಇದೀಗ ನಾಲ್ಕು ಟ್ರಂಕ್ಗಳ ಎಣಿಕೆ ಕಾರ್ಯವಷ್ಟೇ ಮುಗಿದಿದ್ದೂ, ಇನ್ನಷ್ಟು ಟ್ರಂಕ್ಗಳನ್ನ ತೆರೆದಾಗ ಅಲ್ಲೆಷ್ಟು ಆಭರಣದ ಭಂಡಾರ ಸಿಗುತ್ತೋ ಅನ್ನೋ ಕುತೂಹಲ ಎಲ್ಲರದ್ದು.
Comments are closed.