ನವದೆಹಲಿ: “ನನ್ನನ್ನು ಅವಹೇಳನ ಮಾಡಿದರೂ ಸರಿಯೇ, ನನಗೆ ಯಾರ ಮೇಲೂ ದ್ವೇಷವಿಲ್ಲ,” ಎನ್ನುತ್ತಾ ಸಂಸತ್ ಕಲಾಪದಲ್ಲಿಯೇ ಪ್ರಧಾನಿ ನರೇಂದ್ರ ಮೋದಿ ಅವರನ್ನು ಅಪ್ಪಿಕೊಂಡಿದ್ದ ರಾಹುಲ್ ಗಾಂಧಿ ಅವರ ಸುತ್ತಲ ಕೀಟಲೆಗಳು ಇನ್ನೂ ನಿಂತಿಲ್ಲ.
ಅದು ಈಗ ಯಾವ ಹಂತಕ್ಕೆ ತಲುಪಿದೆ ಎಂದರೆ ರಾಹುಲ್ ಅಪ್ಪಿದರೆ ತಮ್ಮ ಪತ್ನಿಯರು ವಿಚ್ಛೇದನ ನೀಡಿಬಿಟ್ಟಾರು ಎಂಬ ಭಯ ಬಿಜೆಪಿ ನಾಯಕರಿಗೆ ಮೂಡುವ ಹಂತಕ್ಕೂ ಹೋಗಿದೆ.
ಈ ಕುರಿತು ಸಂಸತ್ ಭವನದ ಎದುರು ಮಾತನಾಡಿರುವ ಬಿಜೆಪಿ ಸಂಸದ ನಿಶಿಕಾಂತ್ ದುಬೆ, ” ಹೌದು ರಾಹುಲ್ ಗಾಂಧಿ ಅವರನ್ನು ಕಂಡರೆ ನಮಗೆ ಭಯವಾಗುತ್ತಿದೆ. ಅವರು ಅಪ್ಪಿಕೊಂಡುಬಿಟ್ಟರೆ ನಮ್ಮ ಪತ್ನಿಯರು ವಿಚ್ಛೇದನ ನೀಡಿಬಿಡುತ್ತಾರೆ ಎಂಬ ಭಯವಿದೆ. ದೇಶದಲ್ಲಿ ಐಪಿಸಿ ಸೆಕ್ಷನ್ 377ನೇ (ಸಲಿಂಗ ಕಾಮ ನಿರ್ಬಂಧಿಸುವ ಕಾನೂನು) ಬೇರೆ ರದ್ದಾಗಿಲ್ಲ. ಒಂದು ವೇಳೆ ರಾಹುಲ್ ಅವರು ಮದುವೆಯಾದರೆ ಆಗ ನಾವು ಅವರನ್ನು ಅಪ್ಪಿಕೊಳ್ಳುತ್ತೇವೆ,” ಎಂದು ಮಾಧ್ಯಮಗಳಿಗೆ ವ್ಯಂಗಭರಿತ ಧಾಟಿಯಲ್ಲೇ ಪ್ರತಿಕ್ರಿಯಿಸಿದ್ದಾರೆ.
ಇಂದು ಬೆಳಗ್ಗೆ ಸಮಾರಂಭವೊಂದರಲ್ಲಿ ಮಾತನಾಡಿದ್ದ ರಾಹುಲ್ ಗಾಂಧಿ ” ಬಿಜೆಪಿ ನಾಯಕರು ನನ್ನನ್ನು ಕಂಡರೆ ಸಾಕು ಎಲ್ಲಿ ಅಪ್ಪಿಕೊಂಡುಬಿಡುತ್ತೇನೋ ಎಂಬ ಭಯದಿಂದ ಎರಡು ಹೆಜ್ಜೆ ಹಿಂದೆ ಇಡುತ್ತಿದ್ದಾರೆ,” ಎಂದು ಹೇಳಿಕೊಂಡಿದ್ದರು.
Comments are closed.