ಬೆಂಗಳೂರು: ಮದುವೆಯಾಗುವುದಾಗಿ ನಂಬಿಸಿ ಲಂಡನ್ಗೆ ಕರೆಯಿಸಿಕೊಂಡು ಯುವತಿಯನ್ನು ವಂಚಿಸಿರುವ ಪ್ರಕರಣ ಭಾನುವಾರ ಬೆಳಕಿಗೆ ಬಂದಿದೆ.
ಸಂಜಯ್ ಮತ್ತು ಸಂತ್ರಸ್ತ ಯುವತಿ ಕಳೆದ ಒಂದು ವರ್ಷದಿಂದ ಪರಸ್ಪರ ಪ್ರೀತಿಸುತ್ತಿದ್ದರು. ಈ ವಿಚಾರ ಸಂಜಯ್ ಮನೆಗೆ ಗೊತ್ತಾಗಿ ಆತನ ಪಾಲಕರು ಯುವತಿಯನ್ನು ತರಾಟೆಗೆ ತೆಗೆದುಕೊಂಡಿದ್ದರು. ಈ ಮಧ್ಯೆ ಸಂಜಯ್ ವ್ಯಾಸಾಂಗಕ್ಕೆಂದು ಲಂಡನ್ಗೆ ತೆರಳಿದ್ದ. ನಂತರ ಯುವತಿಯನ್ನು ನಾವಿಬ್ಬರು ಮೇ ತಿಂಗಳಿನಲ್ಲಿ ಮದುವೆಯಾಗೋಣ ಎಂದು ಲಂಡನ್ಗೆ ಕರೆಸಿಕೊಂಡಿದ್ದ.
ಸಂಜಯ್ ಮಾತಿಗೆ ನಂಬಿ ಲಂಡನ್ಗೆ ತೆರಳಿದ್ದ ಯುವತಿ ಆತನ ಜತೆ ಇದ್ದುಕೊಂಡೆ ವಿದ್ಯಾಭ್ಯಾಸ ಮುಂದುವರಿಸಿದ್ದಳು. ಇಬ್ಬರು ಒಂದೇ ರೂಮಿನಲ್ಲಿ ಲಿವಿಂಗ್ ಟುಗೆದರ್ ಸಂಬಂಧದಲ್ಲಿದ್ದರು. ಈ ವಿಚಾರ ತಿಳಿದ ಸಂಜಯ್ ತಾಯಿ ತನಗೆ ಎದೆ ನೋವು ಎಂದು ಹೇಳಿ ಮಗನನ್ನು ಬೆಂಗಳೂರಿಗೆ ವಾಪಸ್ಸು ಕರೆಸಿಕೊಂಡಿದ್ದರು.
ಸಂಜಯ್ ಬೆಂಗಳೂರಿಗೆ ಬರುತ್ತಿದ್ದಂತೆ ಆತನ ಪಾಲಕರು ಯುವತಿಯ ಪಾಲಕರಿಗೆ ಜೀವ ಬೆದರಿಕೆ ಹಾಕಿರುವುದಾಗಿ ಆರೋಪಿಸಲಾಗಿತ್ತು. ಈ ವಿಷಯ ತಿಳಿದ ಯುವತಿ ತಕ್ಷಣ ಲಂಡನ್ನಿಂದ ವಾಪಸ್ಸಾಗಿ, ಮನೆಯವರಿಗೆ ಎಲ್ಲಾ ವಿಚಾರ ತಿಳಿಸಿದ್ದಳು. ಇತ್ತ ಸಂಜಯ್ ಯುವತಿಯನ್ನು ಮದುವೆಯಾಗಲು ನಿರಾಕರಿಸಿದ್ದರಿಂದ ಲೈಂಗಿಕವಾಗಿ ನನ್ನ ಬಳಸಿಕೊಂಡು ವಂಚಿಸಿರುವುದಾಗಿ ಠಾಣೆಗೆ ದೂರು ನೀಡುವುದಾಗಿ ಆತನಿಗೆ ಹೇಳಿದ್ದಳು.
ದೂರಿನ ವಿಷಯ ತಿಳಿಯುತ್ತಿದ್ದಂತೆ ಆತಂಕಗೊಂಡ ಸಂಜಯ್ ಮತ್ತೆ ಲಂಡನ್ಗೆ ಪರಾರಿಯಾಗಿದ್ದಾನೆ. ಇತ್ತ ರಾಮಮೂರ್ತಿನಗರ ಪೊಲೀಸರು ವಂಚನೆ ಪ್ರಕರಣ ಸ್ವೀಕರಿಸದೇ, ಯುವತಿಯ ಪೋಷಕರಿಗೆ ಸಂಜಯ್ ಪೋಷಕರು ಒಡ್ಡಿದ್ದ ಜೀವ ಬೆದರಿಕೆ ಪ್ರಕರಣ ಮಾತ್ರ ಸ್ವೀಕರಿಸಿದ್ದಾರೆ.
ಯುವತಿ ಮಹಿಳಾ ಆಯೋಗಕ್ಕೆ ದೂರು ನೀಡಿ ಮತ್ತೆ ಪರೀಕ್ಷೆ ಬರೆಯಲು ಲಂಡನ್ಗೆ ತೆರಳಿದ್ದ ವೇಳೆ ಸಂಜಯ್ ಆಕೆಯ ರೂಮ್ಗೆ ಬಂದು ಮೊಬೈಲ್ ಒಡೆದು ಹಲ್ಲೆ ಮಾಡಿದ್ದ. ಈ ಕುರಿತು ಲಂಡನ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿ ಸಂಜಯ್ನನ್ನು ವಶಕ್ಕೆ ಪಡೆದುಕೊಳ್ಳಲಾಗಿತ್ತು. ಸದ್ಯ ಲಂಡನ್ನಿಂದ ಬೆಂಗಳೂರಿಗೆ ಬಂದಿರುವ ಯುವತಿ, ತನಗೆ ನ್ಯಾಯ ಬೇಕೆಂದು ಮಾಧ್ಯಮದ ಮುಂದೆ ಬಂದಿದ್ದಾಳೆ.
Comments are closed.