ಕರ್ನಾಟಕ

ದುಬಾರಿ ಬೈಕ್‌ನಲ್ಲಿ ಜಾಲಿ ರೈಡ್‌ಗೆ ವೈದ್ಯ ಬಲಿ

Pinterest LinkedIn Tumblr


ಬೆಂಗಳೂರು: ನಗರದಲ್ಲಿ ನಡೆದ ಮೂರು ಪ್ರತ್ಯೇಕ ಅಪಘಾತಗಳಲ್ಲಿ ದುಬಾರಿ ಬೈಕ್‌ನಲ್ಲಿ ಜಾಲಿ ರೈಡ್‌ಗೆ ತೆರಳಿದ್ದ ಯುವ ವೈದ್ಯ, ಸಿನಿಮಾ ನೋಡಿಕೊಂಡು ಮನೆಗೆ ಹಿಂದಿರುಗುತ್ತಿದ್ದ ಟೆಕ್ಕಿ ಸೇರಿ ಮೂವರು ಮೃತಪಟ್ಟಿದ್ದಾರೆ.

ಸ್ನೇಹಿತರ ಜತೆ ದುಬಾರಿ ಬೆಲೆಯ ಕೆಟಿಎಂ ಬೈಕ್‌ನಲ್ಲಿ ನಂದಿಬೆಟ್ಟಕ್ಕೆ ಜಾಲಿ ರೈಡ್‌ಗೆಂದು ಹೋಗುತ್ತಿದ್ದ ಬಸವನಗುಡಿ ನಿವಾಸಿ, ಯುವ ವೈದ್ಯ ಡಾ.ಇರ್ಷಾದ್‌ (28) ಎನ್ನುವವರು ರಸ್ತೆ ವಿಭಜಕಕ್ಕೆ ಡಿಕ್ಕಿಯೊಡೆದು ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಡಾ.ಇರ್ಷಾದ್‌ ಮತ್ತು 80 ಮಂದಿ ಸ್ನೇಹಿತರು ಬೈಕಿನಲ್ಲೇ ನಂದಿಬೆಟ್ಟಕ್ಕೆ ಹೊರಟಿದ್ದರು. ಎಲ್ಲರೂ ತಮ್ಮ ತಮ್ಮ ಬೈಕ್‌ಗಳಲ್ಲೇ ಇದ್ದರು. ಹೊಸಕೋಟೆಯ ಎಂವಿಜೆ ಆಸ್ಪತ್ರೆಯಲ್ಲಿ ತಜ್ಞ ವೈದ್ಯರಾಗಿರುವ ಇರ್ಷಾದ್‌ ಕೂಡ ಹೊಸದಾಗಿ ಖರೀದಿಸಿದ್ದ ಕೆಟಿಎಂ ಬೈಕ್‌ನಲ್ಲಿ ನಂದಿಬೆಟ್ಟಕ್ಕೆ ಹೊರಟಿದ್ದರು. ಕೊಡಿಗೇಹಳ್ಳಿ ಮೇಲು ರಸ್ತೆ ಮೇಲೆ ಅತಿವೇಗವಾಗಿ ಹೋಗುತ್ತಿದ್ದಾಗ ಬೈಕ್‌ನ ಮೇಲೆ ನಿಯಂತ್ರಣ ತಪ್ಪಿ ವಿಭಜಕಕ್ಕೆ ಡಿಕ್ಕಿ ಹೊಡೆದಿದೆ. ಅಪಘಾತದ ರಭಸಕ್ಕೆ ಇರ್ಷಾದ್‌ ಅವರು ಸುಮಾರು 40 ಅಡಿ ದೂರಕ್ಕೆ ಹಾರಿ ಬಿದ್ದಿದ್ದರು. ಇದರಿಂದ ತಲೆ ಮತ್ತು ಎದೆ ಭಾಗಕ್ಕೆ ತೀವ್ರ ಸ್ವರೂಪದ ಪೆಟ್ಟಾಗಿದ್ದಲ್ಲದೆ, ಮೂಗು ಮತ್ತು ಕಿವಿಯಿಂದ ರಕ್ತಸ್ರಾವ ಆಗಿತ್ತು ಎಂದು ಸಂಚಾರ ಪೊಲೀಸರು ಮಾಹಿತಿ ನೀಡಿದ್ದಾರೆ.

ಹೆಬ್ಬಾಳ ಸಂಚಾರ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದ್ದು, ಮೃತದೇಹವನ್ನು ಎಂ.ಎಸ್‌.ರಾಮಯ್ಯ ಆಸ್ಪತ್ರೆಯಲ್ಲಿ ಶವ ಪರೀಕ್ಷೆ ನಡೆಸಿ ನಂತರ ಕುಟುಂಬದವರಿಗೆ ಹಸ್ತಾಂತರಿಸಲಾಗಿದೆ. ತನಿಖೆ ಮುಂದುವರೆದಿದೆ.

ಮಹದೇವಪುರ ಸಂಚಾರ ಠಾಣೆ ವ್ಯಾಪ್ತಿಯಲ್ಲಿ ನಡೆದ ಮತ್ತೊಂದು ಅಪಘಾತ ಪ್ರಕರಣದಲ್ಲಿ ಸಿನಿಮಾ ನೋಡಿಕೊಂಡು ಮನೆಗೆ ಹಿಂದಿರುಗುತ್ತಿದ್ದ ಸಾಫ್ಟ್‌ವೇರ್‌ ಎಂಜಿನಿಯರ್‌ ಒಬ್ಬರು ಮೃತಪಟ್ಟಿದ್ದಾರೆ. ಮಾರತ್ತಳ್ಳಿಯ ಹರೀಶ್‌ (26) ಮೃತಪಟ್ಟವರು. ಹಿಂದಿನಿಂದ ಬಂದ ಕಾರು ಇವರ ಬೈಕಿಗೆ ಡಿಕ್ಕಿಯೊಡೆದಿದ್ದರಿಂದ ಅಪಘಾತ ಸಂಭವಿಸಿದೆ. ಹರೀಶ್‌ ಅವರು ತನ್ನ ಸ್ನೇಹಿತ ಪ್ರಗತೀಶ್‌ ಜತೆಗೆ ಕೆ.ಆರ್‌.ಪುರಂನ ಪುಷ್ಪಾಂಜಲಿ ಚಿತ್ರಮಂದಿರದಲ್ಲಿ ಸಿನಿಮಾ ನೋಡಿಕೊಂಡು ರಾತ್ರಿ 1 ಗಂಟೆ ವೇಳೆಗೆ ಬೈಕ್‌ನಲ್ಲಿ ವಾಪಸಾಗುತ್ತಿದ್ದರು. ಇಬ್ಬರನ್ನೂ ಸ್ಥಳೀಯರು ಸಮೀಪದ ಖಾಸಗಿ ಆಸ್ಪತ್ರೆಗೆ ದಾಖಲಿಸಿದರೂ ಹರೀಶ್‌ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟದ್ದಾರೆ.

ಎಲೆಕ್ಟ್ರಾನಿಕ್‌ ಸಿಟಿ ಸಂಚಾರ ಠಾಣೆ ವ್ಯಾಪ್ತಿಯಲ್ಲಿ ನಡೆದ ಮತ್ತೊಂದು ಅಪಘಾತದಲ್ಲಿ ಕೂಲಿ ಕಾರ್ಮಿಕ, ತಿರುಪಾಳ್ಯದ ಸದಾನಂದ್‌ ಎನ್ನುವವರು ಮೃತಪಟ್ಟಿದ್ದಾರೆ. ಇವರು ಪ್ರಯಾಣಿಸುತ್ತಿದ್ದ ಗೂಡ್ಸ್‌ ವಾಹನ ಬಿಇಎಲ್‌ ಸೇತುವೆಯಲ್ಲಿ ಏಕಾಏಕಿ ನಿಂತಿತ್ತು. ಮಾರ್ಗಮಧ್ಯೆ ವಾಹನ ನಿಂತಿದ್ದರಿಂದ ಪರೀಕ್ಷಿಸುವ ಸಲುವಾಗಿ ವಾಹನದಿಂದ ಕೆಳಗಿಳಿಯುತ್ತಿದ್ದಾಗ ರಭಸವಾಗಿ ಕಾರೊಂದು ಡಿಕ್ಕಿಯೊಡೆದು ಮೃತಪಟ್ಟಿದ್ದಾರೆ. ಕಾರು ಚಾಲಕ ಶಿವಕುಮಾರ್‌ನನ್ನುಸಂಚಾರ ಠಾಣೆ ಪೊಲೀಸರು ಬಂಧಿಸಿದ್ದು, ತನಿಖೆ ಮುಂದುವರಿದಿದೆ.

Comments are closed.