ಬೆಂಗಳೂರು: ಪತ್ರಕರ್ತೆ, ಪ್ರಗತಿಪರ ಚಿಂತಕಿ ಗೌರಿ ಲಂಕೇಶ್ ಹತ್ಯೆ ಪ್ರಕರಣ ಸಂಬಂಧ ಮಹತ್ವದ ಸುಳಿವು ವಿಶೇಷ ತನಿಖಾ ತಂಡ ಪತ್ತೆ ಹಚ್ಚಿಗೆ. ಪ್ರಕರಣದಲ್ಲಿ ಈ ವರೆಗೂ ಹಲವರನ್ನು ಬಂಧಿಸಿರುವ ಎಸ್ಐಟಿಗೆ ಪ್ರಕರಣದ ವಿಚಾರಣೆಯಲ್ಲಿ ಪ್ರಮುಖ ಸಾಕ್ಷಿಯಾಗಿ ನಿಲ್ಲುವಂತ ಪುರಾವೆ ಸಿಕ್ಕಿರಲಿಲ್ಲ. ಆದರೆ ಇದೀಗ ಪ್ರಕರಣದ ಬಹುಮುಖ್ಯವಾದ ಸಾಕ್ಷಿ ಲಭ್ಯವಾಗಿದ್ದು, ವಿಚಾರಣೆ ವೇಳೆ ಮಹತ್ವವವನ್ನು ಪಡೆದುಕೊಳ್ಳಲಿದೆ. ಗೌರಿ ಲಂಕೇಶ್ ಹತ್ಯೆಗೆ ಬಳಸಿದ್ದ ಎರಡು ದ್ವಿಚಕ್ರ ವಾಹನಗಳನ್ನು ಪತ್ತೆ ಹಚ್ಚುವಲ್ಲಿ ವಿಶೇಷ ತನಿಖಾ ತಂಡ ಸಫಲವಾಗಿದೆ.
ಗೌರಿ ಲಂಕೇಶ್ ಹತ್ಯೆಗಾಗಿ ಆರೋಪಿಗಳು ಎರಡು ಬೈಕ್ಗಳನ್ನು ಬಳಸಿದ್ದರು. ಆ ಎರಡೂ ಬೈಕ್ಗಳ ಪತ್ತೆಗಾಗಿ ಹಲವು ದಿನಗಳಿಂದ ಎಸ್ಐಟಿ ಅಧಿಕಾರಿಗಳು ಹುಡುಕಾಡ ಮುಂದುವರೆಸಿದ್ದರು. ಇದೀಗ ಬಂಧಿತ ಆರೋಪಿ ಕುಣಿಗಲ್ ಸುರೇಶ್ನ ಕುಣಿಗಲ್ನ ಮನೆಯಿಂದ ಎರಡು ಬೈಕ್ಗಳನ್ನು ವಶಕ್ಕೆ ಪಡೆಯಲಾಗಿದೆ. ಕೃತ್ಯದ ನಂತರ ಸುರೇಶ್ ಹತ್ಯೆಗೆ ಬಳಸಿದ್ದ ಎರಡು ಬೈಕ್ಗಳನ್ನು ಬಚ್ಚಿಡುವ ಹೊಣೆ ಹೊತ್ತಿದ್ದ ಎನ್ನಲಾಗಿದೆ. ಈ ಕಾರಣದಿಂದಲೇ ಹತ್ಯೆಯ ನಂತರ ಬೈಕ್ಗಳನ್ನು ಪಡೆದು ಕುಣಿಗಲ್ನ ಮನೆಯಲ್ಲಿ ಬಚ್ಚಿಟ್ಟಿದ್ದ. ವಿಚಾರಣೆ ವೇಳೆ ಈ ಬಗ್ಗೆ ಸುರೇಶ್ ಮಾಹಿತಿ ನೀಡಿದ ಬೆನ್ನಲ್ಲೇ ಬಚ್ಚಿಟ್ಟಿದ್ದ ಬೈಕ್ಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಎಸ್ಐಟಿ ಉನ್ನತ ಮೂಲಗಳು ನ್ಯೂಸ್ 18ಗೆ ತಿಳಿಸಿವೆ.
ಆರೋಪಿ ಅಮೋಲ್ ಕಾಳೆ ನೀಡಿದ ಸೂಚನೆ ಮೇರೆಗೆ ಹತ್ಯೆಯ ನಂತರ ಬೈಕನ್ನು ಸುರೇಶ್ಗೆ ಹಂತಕರು ನೀಡಿದ್ದರು ಎಂಬ ಮಾಹಿತಿ ಎಸ್ಐಟಿ ಮೂಲಗಳು ನೀಡಿವೆ. ಹಂತಕರು ಬಳಸಿರುವ ಪಿಸ್ತೂಲ್ ಪತ್ತೆ ಹಚ್ಚಲು ಎಸ್ಐಟಿ ಪ್ರಯತ್ನಿಸುತ್ತಿದೆಯಾದರೂ ಈ ಬಗ್ಗೆ ಇದುವರೆಗೂ ಸ್ಪಷ್ಟ ಮಾಹಿತಿ ಲಭ್ಯವಾಗಿಲ್ಲ. ಕುಣಿಗಲ್ ಸುರೇಶ್ ಹೆಸರಿನಲ್ಲಿ ಕೇವಲ ಒಂದು ಟಿವಿಎಸ್ ಎಕ್ಸ್ ಎಲ್ ಗಾಡಿಯಿದೆ ಎನ್ನಲಾಗಿದೆ. ಸುನೀತಾ ಬಾಡರ್ಕಾರ್ ಎಂಬುವವರ ಹೆಸರಿನಲ್ಲಿ ಹೀರೋ ಹೊಂಡಾ ಸ್ಪ್ಲೆಂಡರ್ ದಾಖಲಾಗಿದೆ. ಹಾಸನ ಆರ್ಟಿಒನಲ್ಲಿ ಈ ಸ್ಪ್ಲೆಂಡರ್ ರಿಜಿಸ್ಟರ್ ಆಗಿದೆ ಎನ್ನುತ್ತವೆ ಮೂಲಗಳು. ಈ ಎರಡೂ ದ್ವಿಚಕ್ರ ವಾಹನಗಳನ್ನು ಎಸ್ಐಟಿ ವಶಕ್ಕೆ ಪಡೆದಿದೆ. ಆದರೆ ಸುರೇಶ್ ಹೆಸರಲ್ಲಿರುವ ಟಿವಿಎಸ್ ಎಕ್ಸ್ಎಲ್ ಹತ್ಯೆಗೆ ಬಳಕೆಯಾಗಿಲ್ಲ, ಆದರೆ ಇನ್ನೊಂದು ಬೈಕ್ ಬಳಕೆಯಾಗಿರುವ ಬಗ್ಗೆ ಎಸ್ಐಟಿಗೆ ಸಂಶಯವಿದ್ದು ಅದರ ಪತ್ತೆಗೂ ಕ್ರಮ ಕೈಗೊಳ್ಳಲಾಗಿದೆ.
ವಿಶೇಷ ತನಿಖಾ ತಂಡ ಕುಣಿಗಲ್ ಸುರೇಶ್ ಮನೆಯಿಂದ ವಶಕ್ಕೆ ಪಡೆದ ದ್ವಿಚಕ್ರ ವಾಹನಗಳು
ಆರೋಪಿ ಕುಣಿಗಲ್ ಸುರೇಶ್ನನ್ನು ಆಗಸ್ಟ್ 8ರವರೆಗೆ ಪೊಲೀಸ್ ಕಸ್ಟಡಿಗೆ ಪಡೆದು ಎಸ್ಐಟಿ ವಿಚಾರಣೆ ನಡೆಸುತ್ತಿದೆ. ಆದರೆ ತನಿಖೆಯ ಪ್ರಾಥಮಿಕ ಹಂತದಲ್ಲಿ ಮತ್ತು ಮಧ್ಯಂತರ ಹಂತದಲ್ಲಿ ಎಸ್ಐಟಿ ಪತ್ರಿಕಾಗೋಷ್ಠಿ ಕರೆದಿತ್ತು. ಆ ಸಂದರ್ಭದಲ್ಲಿ ಶಂಕಿತ ಹಂತಕರ ರೇಖಾಚಿತ್ರ ಬಿಡುಗಡೆ ಮತ್ತು ಸಿಸಿಟಿವಿ ದೃಶ್ಯಾವಳಿಗಳನ್ನು ಎಸ್ಐಟಿ ಮುಖ್ಯಸ್ಥ ಬಿಕೆ ಸಿಂಗ್ ಮತ್ತು ಮುಖ್ಯ ತನಿಖಾಧಿಕಾರಿ ಅನುಚೇತ್ ಬಿಡುಗಡೆ ಗೊಳಿಸಿದ್ದರು. ಆಗೆಲ್ಲಾ ಹತ್ಯೆಗೆ ಕಪ್ಪು ಬಣ್ಣದ ಪಲ್ಸರ್ ಬೈಕ್ ಬಳಕೆಯಾಗಿರುವುದಾಗಿ ಮಾಹಿತಿಯನ್ನು ಎಸ್ಐಟಿ ನೀಡಿತ್ತು.
ನಂತರ ಇಡೀ ರಾಜ್ಯದ ತುಂಬೆಲ್ಲಾ ಇರುವ ಕಪ್ಪು ಬಣ್ಣದ ಪಲ್ಸರ್ ಮತ್ತು ಕಪ್ಪು ಮತ್ತು ಕೆಂಪು ಬಣ್ಣದ ಪಲ್ಸರ್ಗಳನ್ನು ತಪಾಸಣೆಗೆ ಒಳಪಡಿಸಲಾಗಿತ್ತು. ಆರ್ಟಿಒ ಇಲಾಖೆಯಲ್ಲಿ ದಾಖಲಾದ ಎಲ್ಲಾ ಪಲ್ಸರ್ಗಳ ಮಾಲೀಕರಿಂದ ಹೇಳಿಕೆಯನ್ನೂ ಪಡೆಯಲಾಗಿತ್ತು. ಆದರೀಗ ಇದ್ದಕ್ಕಿದ್ದಂತೆ ಪಲ್ಸರ್ ಬೈಕ್ ಬದಲು ಸ್ಪ್ಲೆಂಡರ್ ಬೈಕ್ನ್ನು ಎಸ್ಐಟಿ ವಶಕ್ಕೆ ಪಡೆದಿದೆ. ಜತೆಗೆ ಮಾಧ್ಯಮಗಳಿಗೆ ಹಂತಕರು ಬಳಸಿದ ಬೈಕನ್ನು ವಶಕ್ಕೆ ಪಡೆದಿದ್ದೇವೆ ಎಂಬ ‘ಆಫ್ ದಿ ರೆಕಾರ್ಡ್’ ಮಾಹಿತಿ ನೀಡಿದ್ದಾರೆ. ಇದರ ಸತ್ಯಾಸತ್ಯತೆಯ ಬಗ್ಗೆ ಸೂಕ್ಷ್ಮವಾಗಿ ಗಮನಿಸಿದಲ್ಲಿ ಅನುಮಾನ ಮೂಡದೇ ಇರದು.
ಮುಂದಿನ ತಿಂಗಳ ಸೆಪ್ಟೆಂಬರ್ 5ರಂದು ಗೌರಿ ಲಂಕೇಶ್ ಹತ್ಯೆಯಾಗಿ ಒಂದು ವರ್ಷ ಕಳೆಯಲಿದ್ದು ಅಷ್ಟರೊಳಗೆ ತನಿಖೆ ಸಂಪೂರ್ಣಗೊಳಿಸಿ ಅಂತಿಮ ದೋಷಾರೋಪ ಪಟ್ಟಿ ಸಲ್ಲಿಸುವ ಸಾಧ್ಯತೆಯನ್ನು ಎಸ್ಐಟಿ ಮೂಲಗಳು ತಿಳಿಸುತ್ತಿವೆ. ಆದರೆ ಪ್ರಕರಣದ ವಿಚಾರಣೆಯಲ್ಲಿ ಹಲವಷ್ಟು ಮಿಸ್ಸಿಂಗ್ ಲಿಂಕ್ಗಳಿದ್ದು, ಅವನ್ನೆಲ್ಲಾ ಪತ್ತೆ ಹಚ್ಚಲು ಸಮಯಾವಕಾಶ ಬೇಕಾಗಬಹುದು ಎಂಬ ಮಾತುಗಳೂ ಎಸ್ಐಟಿಯ ಕೆಲ ಅಧಿಕಾರಿಗಳಿಂದ ಕೇಳಿ ಬರುತ್ತಿವೆ.
Comments are closed.