ಮಂಗಳೂರು, ಸೆಪ್ಟೆಂಬರ್.29: ತಾನು ಪ್ರೀತಿಸುತ್ತಿದ್ದ ಯುವತಿಯನ್ನು ಕೊಂದು ಯುವಕನೋರ್ವ ತಾನು ಆತ್ಮಹತ್ಯೆ ಮಾಡಿಕೊಂಡ ಹೃದಯ ವಿದ್ರಾವಕ ಘಟನೆ ಮೂಡಬಿದ್ರೆಯ ಪ್ರಾಂತ್ಯ ಎಂಬಲ್ಲಿ ಶುಕ್ರವಾರ ನಡೆದಿದೆ.
ಯುವತಿ ಪ್ರೇಮ ಪ್ರಸ್ತಾಪವನ್ನು ನಿರಾಕರಿಸಿದಳೆಂದು ಆರೋಪಿಸಿ ಯುವತಿಯ ಮನೆಗೆ ನುಗ್ಗಿದ್ದ ಈತ ಆಕೆಯನ್ನು ಚೂರಿಯಿಂದ ಇರಿದು ಕೊಂದು ಬಳಿಕ ತಾನು ಆತ್ಮಹತ್ಯೆಗೆ ಶರಣಾಗಿದ್ದಾನೆ.
ಕೊಲೆಯಾದ ಯುವತಿಯನ್ನು ಮೂಡಬಿದ್ರೆ ಬಳಿಯ ಪ್ರಾಂತ್ಯ ನಿವಾಸಿ ಚರಿಷ್ಮಾ (22) ಹಾಗೂ ಈಕೆಯನ್ನು ಕೊಂದು ಆತ್ಮಹತ್ಯೆ ಮಾಡಿಕೊಂಡ ಯುವಕ ಮಂಗಳೂರು ಮೂಲದ ಲೋಹಿತ್ (26) ಎಂದು ತಿಳಿದು ಬಂದಿದೆ.
ಮೂಡಬಿದಿರೆ ಪ್ರಾಂತ್ಯ ಶಾಲೆಯ ಬಳಿ ಇರುವ ಮನೆಯಲ್ಲಿ ತನ್ನ ತಾಯಿ ಹಾಗೂ ಸಹೋದರನೊಂದಿಗೆ ಚರಿಷ್ಮಾ ವಾಸವಿದ್ದಳು. ಈಕೆಯನ್ನು ಈಕೆಯ ದೂರದ ಸಂಬಂಧಿ ಎಂದು ಹೇಳಲಾದ ಮಂಗಳೂರಿನ ಬಜಾಲ್ ನಿವಾಸಿ ಲೋಹಿತ್ ಎಂಬಾತ ಪ್ರೀತಿಸುತ್ತಿದ್ದ ಎನ್ನಲಾಗ್ತಿದೆ. ಲೋಹಿತ್ನ ಪ್ರೇಮ ಪ್ರಸ್ತಾಪವನ್ನು ಚರಿಷ್ಮಾ ನಿರಾಕರಿಸಿದ್ದಳು ಎನ್ನಲಾಗಿದೆ.ಆದರೆ ಚರಿಷ್ಮಾ ಅವರ ಮನೆಗೆ ಲೋಹಿತ್ ಆಗಾಗ ಬರುತ್ತಿದ್ದ ಎಂದು ಹೇಳಲಾಗಿದೆ.
ಚರಿಷ್ಮಾ ಮಂಗಳೂರಿನ ಡ್ಯಾನ್ಸ್ ತಂಡವೊಂದರ ಸದಸ್ಯೆಯಾಗಿದ್ದಳು. ಆದರೆ ಇತ್ತೀಚೆಗೆ ಚರಿಷ್ಮಾ ಹಾಗೂ ಲೋಹಿತ್ ನಡುವೆ ಕೆಲ ವಿಚಾರದಲ್ಲಿ ಮನಸ್ತಾಪ ಹೆಚ್ಚಾಗಿ ಜಗಳವಾಡಿಕೊಂಡಿದ್ದರು ಎಂದು ಹೇಳಲಾಗಿದೆ. ಶುಕ್ರವಾರ ಚರಿಷ್ಮಾ ಮನೆಯಲ್ಲಿ ಒಬ್ಬಳೇ ಇದ್ದ ಸಂದರ್ಭದಲ್ಲಿ ಆಗಮಿಸಿದ ಲೋಹಿತ್ ಚರಿಷ್ಮಾ ಗೆ ಚೂರಿಯಿಂದ ಇರಿದಿದ್ದಾನೆ .
ಚೂರಿ ಇರಿತದಿಂದ ಗಂಭೀರ ಗಾಉಅಗೊಂಡ ಚರಿಷ್ಮಾ ನರಳಾಡುತ್ತ ಹೊರಗೆ ಓಡಿ ಬಂದಿದ್ದು, ಈ ವೇಳೆ ಕೂಡಲೇ ನೆರೆಮನೆಯವರು ಅಕೆಯನ್ನು ಆಸ್ಪತ್ರೆಗೆ ದಾಖಲಿಸಲಿಸುವಷ್ಟರಲ್ಲಿ ಆಕೆ ಮೃತಪಟ್ಟಿದ್ದಾಳೆ. ಯುವತಿಯನ್ನು ಕೊಂದ ನಂತರ ಲೋಹಿತ್ ಆಕೆಯ ಮನೆಯಲ್ಲಿಯೇ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಘಟನೆ ನಡೆದ ಸ್ಥಳಕ್ಕೆ ಮೂಡಬಿದ್ರೆ ಪೊಲೀಸರು ಹಾಗೂ ಮಂಗಳೂರು ಕಮಿಷನರೇಟ್ ವ್ಯಾಪ್ತಿಯ ಹಿರಿಯ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದು, ತನಿಖೆ ಆರಂಭಿಸಿದ್ದಾರೆ.ಈ ಬಗ್ಗೆ ಮೂಡಬಿದಿರೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.
Comments are closed.