ಗಲ್ಫ್

ದ್ವೀಪದಲ್ಲಿ ಬಂಟ್ಸ್ ಬಹರೈನ್ ” ಸಂಘಟನೆಯಿಂದ ವಿಜೃಂಭಣೆ ಯ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ ;ಪುನೀತರಾದ ಭಕ್ತ ಸಮೂಹ

Pinterest LinkedIn Tumblr

ಬಹರೈನ್ ; ಇಲ್ಲಿನ ಅನಿವಾಸಿ ಬಂಟ ಸಮುದಾಯದ ಒಕ್ಕೂಟವಾದ ಬಂಟ್ಸ್ ಬಹರೈನ್ ಇತ್ತೇಚೆಗೆ ಇಲ್ಲಿನ ಮನಾಮದಲ್ಲಿರುವ ಶ್ರೀಕ್ರಷ್ಣ ದೇಗುಲದ ಸಭಾಂಗಣದಲ್ಲಿ ಸಾಮೂಹಿಕ ಸತ್ಯನಾರಾಯಣ ಪೂಜೆಯನ್ನು ಆಯೋಜಿಸಿದ್ದು ನೂರಾರು ಭಕ್ತಾದಿಗಳು ತನ್ಮಯತೆಯಿಂದ ಭಕ್ತಿಪರವಶರಾಗಿ ಪೂಜಾ ವಿಧಿ,ವಿಧಾನಗಳಲ್ಲಿ ಪಾಲ್ಗೊಂಡು ದೇವರ ಕ್ರಪೆಗೆ ಪಾತ್ರರಾದರು.

ಶ್ರೀ ಪ್ರದೀಪ್ ಆರ್ ಶೆಟ್ಟಿ ಯವರ ನೆತ್ರತ್ವದಲ್ಲಿ ಇತ್ತೀಚೆಗಷ್ಟೇ ಹೊಸ ಆಡಳಿತ ಮಂಡಳಿ ಅಸ್ತಿತ್ವಕ್ಕೆ ಬಂದಿದ್ದು ಸಂಘಟನೆಯ ಪ್ರಥಮ ಕಾರ್ಯಕ್ರಮವಾಗಿ ಈ ಸತ್ಯನಾರಾಯಣ ಪೂಜೆಯನ್ನು ಆಯೋಜಿಸಿದ್ದರು . ಕುಂದಾಪುರದಿಂದ ಈ ಪೂಜಾ ಕೈಂಕರ್ಯವನ್ನು ಕೈಗೊಳ್ಳಲು ವಿಶೇಷವಾಗಿ ದ್ವೀಪಕ್ಕೆ ಆಗಮಿಸರುವ ಕುಂದಾಪುರದ ಪ್ರಸಿದ್ಧ ವೈದಿಕರಾದ ಶ್ರೀ ರಾಮಚಂದ್ರ ಉಡುಪರವರು ರವರು ಪೂಜಾ ವಿಧಿ,ವಿಧಾನಗಳನ್ನು ಸಾಂಗವಾಗಿ ನೆರವೇರಿಸಿಕೊಟ್ಟರು . ಪೂಜೆಯುದ್ದಕ್ಕೂಭಜನಾ ಮಂಡಳಿಯಿಂದ ಭಜನಾ ಕಾರ್ಯಕ್ರಮವನ್ನು ಏರ್ಪಡಿಸಿದ್ದು ವಾದ್ಯವ್ರಂದದೊಂದಿಗೆ ಸುಶ್ರಾವ್ಯವಾದ ಭಜನೆಗಳು ನೆರೆದ ಭಕ್ತಾದಿಗಳನ್ನು ಭಕ್ತಿಯ ಪರಾಕಾಷ್ಠೆಗೆ ತಲುಪಿಸಿತ್ತು . ದೇವರ ಮಂಟಪವನ್ನು ಫಲ,ಪುಷ್ಪಗಳಿಂದ ವಿಶೇಷವಾಗಿ ಅಲಂಕರಿಸಲಾಗಿದ್ದು ಭಕಾದಿಗಳನ್ನು ತನ್ನೆಡೆಗೆ ಆಕರ್ಷಿಸುತ್ತಿತ್ತು .

ಬಂಟ್ಸ್ ಬಹರೇನ್ ನ ಅಧ್ಯಕ್ಷರಾದ ಶ್ರೀ ಪ್ರದೀಪ್ ಆರ್ ಶೆಟ್ಟಿ ಹಾಗು ಆಡಳಿತ ಮಂಡಳಿಯ ಇತರ ಪಧಾಧಿಕಾರಿಗಳು ಬಂಟ ಬಾಂಧವರು ಮತ್ತು ಅಹ್ವಾನಿತ ಅತಿಥಿಗಳನ್ನು ಸ್ವಾಗತಿಸಿ ಸರ್ವರ ಪರವಾಗಿ ದೇವರಿಗೆ ಪ್ರಾರ್ಥನೆ ಸಲ್ಲಿಸಿದ ನಂತರ ಸಂಕಲ್ಪದೊಂದಿಗೆ ಪೂಜಾ ವಿದಿ ವಿಧಾನಗಳು ಪ್ರಾರಂಭವಾಯಿತು. ಗುರುಪೂಜೆ, ಮತ್ತು ಗಣಪತಿ ಪೂಜೆ, ಕಳಸ ಪೂಜೆ, ನವಗ್ರಹ ಪೂಜೆ, ಸತ್ಯನಾರಾಯಣ ದೇವರ ವೃತ ಕಲ್ಪೋಕ್ತಿ ಪೂಜೆ, ಭಜನೆ ಸಂಕೀರ್ತನೆ, ಸತ್ಯನಾರಾಯಣ ದೇವರ ಕಥೆ ನಂತರ ಮಹಾಮಂಗಳಾರತಿ ನಡೆಯಿತು.

ಬಂಟ್ಸ್ ಬಹರೈನ್ ನ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆಗೆ ದ್ವೀಪದ ಎಲ್ಲಾ ಸಮುಧಾಯ ಮತ್ತು ಸಂಘಟನೆಯ ಅಧ್ಯಕ್ಷರು, ಪಧಾಧಿಕಾರಿಗಳು, ಸದಸ್ಯರುಗಳು ಭಾಗವಹಿಸಿದ್ದರು ಮಹಾಮಂಗಾಳಾರತಿಯ ನಂತರ ಭಕ್ತ ಸಮೂಹ ತೀರ್ಥ ಪ್ರಸಾದ, ಸಪಾತ ಭಕ್ಷ್ಯ ಸ್ವೀಕರಿಸಿದ ನಂತರ ಮಹಾಪ್ರಸಾದದ ಅಂಗವಾಗಿ ಭೋಜನದ ವ್ಯವಸ್ಥೆಯಿತ್ತು . ಈ ಸಂದರ್ಭದಲ್ಲಿ ವೈದಿಕರಾದಂತಹ ಶ್ರೀ ರಾಮಚಂದ್ರ ಉಡುಪರವರನ್ನು ಬಂಟ್ಸ್ ಬಹರೈನ್ ನ ಅಧ್ಯಕ್ಷರಾದ ಶ್ರೀ ಪ್ರದೀಪ್ ಆರ್ ಶೆಟ್ಟಿ ಯವರು ಶಾಲು ಹೊದಿಸಿ ,ಫಲಪುಷ್ಪಗಳೊಂದಿಗೆ ಸ್ಮರಣಿಕೆಯನ್ನು ನೀಡಿ ಸಮ್ಮಾನಿಸಲಾಯಿತು .

ದ್ವೀಪದ ಅನಿವಾಸಿ ಬಂಟರ ಒಕ್ಕೂಟವಾದ ಬಂಟ್ಸ್ ಬಹರೈನ್ ಸುಮಾರು ಒಂದೂವರೆ ದಶಕಗಳ ಹಿಂದೆ ಅಸ್ತಿತ್ವಕ್ಕೆ ಬಂದಿದ್ದು ಇದೀಗ 15ನೇ ವರುಷದ ಸಂಭ್ರಮದಲ್ಲಿದೆ . ಅಸ್ತಿತ್ವಕ್ಕೆ ಬಂದಾಗಿನಿಂದಲೂ ಸಮುದಾಯದ ನೋವು,ನಲಿವುಗಳಿಗೆ . ನಿರಂತರವಾಗಿ ಸ್ಪಂದಿಸುತ್ತಾ ಸಮಾಜ ಮುಖಿ ಕಾರ್ಯಕ್ರಮಗಳನ್ನು ಮಾಡುತ್ತಾ ಬಂದಿದೆ .

ಪ್ರಸಕ್ತ ಸಾಲಿನ ಬಂಟ್ಸ್ ಬಹರೈನ್ ನ ಚುಕ್ಕಾಣಿಯನ್ನು ಶ್ರೀ ಪ್ರದೀಪ್ ಆರ್ ಶೆಟ್ಟೆಯವರು ಹಿಡಿದಿದ್ದು ಉಪಾಧ್ಯಕ್ಷರಾಗಿ ಸುಕೇಶ್ ಶೆಟ್ಟಿ ,ಪ್ರಧಾನ ಕಾರ್ಯದರ್ಶಿಗಳಾಗಿ ಧನಂಜಯ್ ಶೆಟ್ಟಿ ,ಉಪಕಾರ್ಯದರ್ಶಿಯಾಗಿ ರಜತ್ ಶೆಟ್ಟಿ ,ಮನೋರಂಜನಾ ಕಾರ್ಯದರ್ಶಿಯಾಗಿ ಅಭಿಜಿತ್ ಶೆಟ್ಟಿ ,ಉಪಮನೋರಂಜನಾ ಕಾರ್ಯದರ್ಶಿಯಾಗಿ ಶರತ್ ಶೆಟ್ಟಿ ,ಕ್ರೀಡಾ ಕಾರ್ಯದರ್ಶಿಯಾಗಿ ಮನೀಶ್ ಶೆಟ್ಟಿ ,ಖಜಾಂಚಿಯಾಗಿ ಅಕ್ಷತ್ ಹೆಗ್ಡೆ ಹಾಗು ಸಾರ್ವಜನಿಕ ಸಂಪರ್ಕ ಅಧಿಕಾರಿಯಾಗಿ ಸುದೇಶ್ ಶೆಟ್ಟಿ ಆಯ್ಕೆಯಾಗಿದ್ದಾರೆ . 15ನೇ ವರುಷದ ಸಂಭ್ರಮಾಚರಣೆಯನ್ನು ಅರ್ಥಪೂರ್ಣವಾಗಿ ಆಯೋಜಿಸಲು ಇದಾಗಲೇ ಆಡಳಿತ ಸಮಿತಿಯು ರೂಪುರೇಷೆಗಳನ್ನು ಹಾಕಿಕೊಂಡಿದ್ದು ಇವರಿಂದ ಸಮುದಾಯಕ್ಕೆ ಇನ್ನಷ್ಟು ಸೇವೆ ಒದಗಿ ಬರಲಿ .

ಚಿತ್ರ-ವರದಿ-ಕಮಲಾಕ್ಷ ಅಮೀನ್

Comments are closed.