ಕರ್ನಾಟಕ

ಸಿದ್ದರಾಮಯ್ಯ ತಿಳಿಸಿದ ಶನಿ, ರಾಹು, ಕೇತು ಯಾರೆಂದು ಹೇಳಿದ ಯಡಿಯೂರಪ್ಪ!

Pinterest LinkedIn Tumblr


ಬೆಂಗಳೂರು: ವರುಣಾ ಕ್ಷೇತ್ರದಲ್ಲಿ ಮಾಜಿ ಸಿದ್ದರಾಮಯ್ಯ ಅವರು ಕಾರ್ಯಕ್ರಮವೊಂದರಲ್ಲಿ, ರಾಹು, ಕೇತು, ಶನಿ ಎಲ್ಲ ಒಟ್ಟಾಗಿ ನನ್ನನ್ನು ಸೋಲಿಸಿಬಿಟ್ಟವು ಎಂದು ನೀಡಿದ ಹೇಳಿಕೆಗೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರು ಪ್ರತಿಕ್ರಿಯೆ ನೀಡಿದ್ದು, ಶನಿ, ರಾಹು, ಕೇತು ಯಾರೆಂದು ತಿಳಿಸಿದ್ದಾರೆ.

ಶನಿ,ರಾಹು, ಕೇತು ಬೇರೆ ಯಾರು ಅಲ್ಲ, ಅವರೇ ಜೆಡಿಎಸ್ ಮುಖಂಡರು. ಮುಖ್ಯಮಂತ್ರಿಯಾಗಿದ್ದವರನ್ನು ಸಂಚು ಮಾಡಿ, ಜೆಡಿಎಸ್​ನವರು ಸೋಲಿಸಿಬಿಟ್ಟರು. ಅವರಿಗೆ ಅಪಮಾನ ಮಾಡಿ, ರಾಜಕೀಯವಾಗಿ ಮುಗಿಸುವ ಪ್ರಯತ್ನ ಮಾಡಿದ್ದಾರೆ. ಚಾಮುಂಡೇಶ್ವರಿಯಲ್ಲಿ ಸಿದ್ದರಾಮಯ್ಯ ಸ್ಪರ್ಧೆ ಮಾಡಿದಾಗ ಜಿಟಿಡಿ‌ ಅವರನ್ನು ಯಾಕೆ ಅಭ್ಯರ್ಥಿಯನ್ನಾಗಿ ಕಣಕ್ಕೆ ಇಳಿಸಬೇಕಿತ್ತು ಎನ್ನುವ ಮೂಲಕ ಯಡಿಯೂರಪ್ಪ ಅವರು ಸಿದ್ದರಾಮಯ್ಯ ಪರ ಭರ್ಜರಿ ಬ್ಯಾಟಿಂಗ್ ಮಾಡಿದ್ದಾರೆ.

ಕಾಂಗ್ರೆಸ್ ‌ನ ಕೆಲವು ಮುಖಂಡರು ಹಾಗೂ ಜೆಡಿಎಸ್ ಮುಖಂಡರ ಒಳ ಸಂಚಿನಿಂದ ಸಿದ್ದರಾಮಯ್ಯ ಗೆ ಸೋಲಾಯ್ತು ಎಂದು ಭಾನುವಾರ ವಿಶ್ವಕರ್ಮ ಯಜ್ಞ ಮಹೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಂಡು ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು.

ಕರ್ನಾಟಕ ವಿಧಾನಸಭಾ ಚುನಾವಣೆಯ ಪ್ರಚಾರದ ವೇಳೆ ಬಿಜೆಪಿ ಅಧಿಕಾರಕ್ಕೆ ಬಂದಾಗ ಸಿದ್ದರಾಮಯ್ಯನನ್ನು ಜೈಲಿಗೆ ಕಳುಹಿಸುತ್ತೇನೆ ಎಂದು ಗುಡುಗುತ್ತಿದ್ದ ಯಡಿಯೂರಪ್ಪ ಅವರು, ಮೈತ್ರಿ ಸರ್ಕಾರ ರಚನೆಯಾದ ನಂತರದ ಮೊದಲನೇ ದಿನವೇ ಸಿದ್ದರಾಮಯ್ಯ ಪರ ಮೃದು ಧೋರಣೆ ತೋರಿ, ಕಾಂಗ್ರೆಸ್​ ಹಾಗೂ ಜೆಡಿಎಸ್​ ಕೆಲವರ ಸಂಚಿನಿಂದಲೇ ನಿಮಗೆ ಸೋಲಾಯ್ತು ಎಂದು ಅಧಿವೇಶನದಲ್ಲಿ ಬಹಿರಂಗವಾಗಿ ಹೇಳಿದ್ದರು. ಇದೀಗ ಮತ್ತೆ ಸಿದ್ದರಾಮಯ್ಯ ಪರ ಬಿಎಸ್​ವೈ ಬ್ಯಾಟಿಂಗ್ ಮಾಡಿದ್ದಾರೆ.

ಇನ್ನು ಸಿದ್ದರಾಮಯ್ಯ ಅವರ ಶನಿ, ರಾಹು, ಕೇತು ಹೇಳಿಕೆ ಕುರಿತು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಮಾತನಾಡಿದ್ದು, ರಾಜಕೀಯವಾಗಿ ನೀಡಿರುವ ಹೇಳಿಕೆಗೆ ಪ್ರತಿಕ್ರಿಯೆ ನೀಡುವುದಿಲ್ಲ. ಅವರು ಅವರ ಭಾವನೆಗಳನ್ನು ವ್ಯಕ್ತಪಡಿಸಿದ್ದಾರೆ. ಯಾವ ಕಾರಣಕ್ಕೆ, ಯಾರನ್ನು ದೃಷ್ಟಿಯಲ್ಲಿ ಇಟ್ಟುಕೊಂಡು ಹೇಳಿಕೆ ನೀಡಿದ್ದಾರೆ ಅನ್ನೋದು ಗೊತ್ತಿಲ್ಲ ಎಂದಿದ್ದಾರೆ.

Comments are closed.